news18-kannada Updated:January 19, 2021, 8:10 AM IST
ರೈತರ ಪ್ರತಿಭಟನೆ.
ನವ ದೆಹಲಿ (ಜನವರಿ 19); ವಿವಾದಾತ್ಮಕ ಹೊಸ ಕೃಷಿ ಕಾನೂನುಗಳ ವಿರುದ್ಧದ ರೈತರ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು, ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತ ಪ್ರತಿನಿಧಿಗಳ ನಡುವಿನ ಹತ್ತನೇ ಸುತ್ತಿನ ಮಾತುಕತೆಯನ್ನು ಮುಂದೂಡಲಾಗಿದೆ. ರೈತ ಸಂಘಗಳೊಂದಿಗೆ ಕೇಂದ್ರ ಸಚಿವರ 10ನೇ ಸಭೆಯನ್ನು ಜನವರಿ 20ರ ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ನಡೆಯಲಿದೆ ಎಂದು ಕೃಷಿ ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ ನಡುವೆ ರೈತ ಬಿಕ್ಕಟ್ಟನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ರೈತ ಹೋರಾಟಗಾರರ ಜೊತೆಗಿನ ತನ್ನ ಮೊದಲ ಸಭೆಯನ್ನು ಮಂಗಳವಾರ ನಡೆಸಲಿದೆ ಎಂದು ತಿಳಿದುಬಂದಿದೆ. ಸರ್ಕಾರ ಮತ್ತು ರೈತರ ನಡುವಿನ ಕಳೆದ 9 ಸುತ್ತಿನ ಮಾತುಕತೆಗಳು ಯಾವುದೇ ಫಲ ನೀಡುವಲ್ಲಿ ವಿಫಲವಾಗಿದೆ. ಈ ನಡುವೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಇಂದು ರೈತರ ಜೊತೆಗೆ ಮಾತುಕತೆ ನಡೆಸಲಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಲೇಬೇಕು ಎಂದು ರೈತ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಸಹ ಈ ಕಾಯ್ದೆಯನ್ನು ಹಿಂಪಡೆಯುವ ಸಾಧ್ಯತೆಯೇ ಇಲ್ಲ ಎಂದು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಮಾತುಕತೆ ಫಲ ನೀಡದೆ ಇರಲು ಇದೂ ಒಂದು ಕಾರಣ ಎನ್ನಲಾಗುತ್ತಿದೆ.
ಪಿಟಿಐ ಜೊತೆಗೆ ಮಾತನಾಡಿರುವ ಕೇಂದ್ರ ಕೃಷಿ ರಾಜ್ಯ ಸಚಿವ ಪರಶೋತ್ತಮ್ ರೂಪಾಲಾ, "ರೈತರು
ನಮ್ಮೊಂದಿಗೆ ನೇರವಾಗಿ ಮಾತುಕತೆ ನಡೆಸುವಾಗ ಇದು ವಿಭಿನ್ನವಾಗಿರುತ್ತದೆ. ರೈತ ನಾಯಕರು ತೊಡಗಿಸಿಕೊಂಡಾಗ ಅದು ಕಷ್ಟಕರವಾಗುತ್ತದೆ. ರೈತರೊಂದಿಗೆ ನೇರವಾಗಿ ಚರ್ಚೆಗಳು ನಡೆದಿದ್ದರೆ ಆರಂಭಿಕ ಪರಿಹಾರ ಸಿಗಬಹುದಿತ್ತು, ಅಲ್ಲದೆ, ವಿಭಿನ್ನ ಸಿದ್ಧಾಂತಗಳ ಜನರು ಪ್ರತಿಭಟನೆಯಲ್ಲಿ ಪ್ರವೇಶಿಸಿರುವುದರಿಂದ, ಅವರು ತಮ್ಮದೇ ಆದ ರೀತಿಯಲ್ಲಿ ಪರಿಹಾರವನ್ನು ಬಯಸುತ್ತಾರೆ" ಎಂದು ಅವರು ಆರೋಪಿಸಿದ್ದರು.
ಈ ನಡುವೆ ಜನವರಿ 26 ರಂದು ನವ ದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕೆ ಪರ್ಯಾಯವಾಗಿ ರೈತರ ಟ್ರ್ಯಾಕ್ಟರ್ ರ್ಯಾಲಿ ನಡೆಯಲಿದೆ. ಈ ರ್ಯಾಲಿಯಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರ್ ಜೊತೆಗೆ ಭಾಗವಹಿಸಲಿದ್ದಾರೆ ಎಂದು ರೈತ ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಇದನ್ನು ತಡೆಯಬೇಕು ಎಂಬ ಸರ್ಕಾರದ ಮನವಿ ಸುಪ್ರೀಂ ಎದುರು ಇನ್ನೂ ವಿಚಾರಣೆಯಲ್ಲಿದೆ. ಹೀಗಾಗಿ ಸರ್ಕಾರ ಸಹ ಈ ಸಂಬಂಧ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿದೆ ಎನ್ನಲಾಗುತ್ತಿದೆ.
ಸುಪ್ರೀಂ ಕೋರ್ಟ್ನಿಂದ ನೇಮಕಗೊಂಡ ಸಮಿತಿಯ ಸಭೆ
ಮೂರು ಹೊಸ ಕೃಷಿ ಕಾನೂನುಗಳ ಕುರಿತು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ರೈತ ಸದಸ್ಯರೊಂದಿಗೆ ಮೊದಲ ಸಭೆಯನ್ನು ಮಂಗಳವಾರ ನವದೆಹಲಿಯ ಪೂಸಾ ಕ್ಯಾಂಪಸ್ನಲ್ಲಿ ನಡೆಸಲಿದೆ ಎಂದು ಅದರ ಸದಸ್ಯ ಅನಿಲ್ ಘನ್ವಾತ್ ತಿಳಿಸಿದ್ದಾರೆ.
"ನಾವು ರೈತರನ್ನು ಭೇಟಿಯಾಗಲಿದ್ದೇವೆ. ಉಲ್ಲೇಖದ ನಿಯಮಗಳನ್ನು ಚರ್ಚಿಸಲು ಮತ್ತು ಮುಂದಿನ ಕ್ರಮವನ್ನು ನಿರ್ಧರಿಸಲು ಸದಸ್ಯರು ಮಾತ್ರ ಸಭೆ ಸೇರುತ್ತಾರೆ" ಎಂದು ಶೆಟ್ಕರಿ ಸಂಘತಾನ (ಮಹಾರಾಷ್ಟ್ರ) ಅಧ್ಯಕ್ಷ ಘನ್ವತ್ ದೆಹಲಿಗೆ ವಿಮಾನ ಹತ್ತುವ ಮೊದಲು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಡಿ ಕ್ಯಾತೆ ತೆಗೆಯುವ ತಲೆಹರಟೆಗಳಿಗೆ ತಕ್ಕ ಉತ್ತರ ಕೊಡಲೇಬೇಕು; ಟಿ.ಎಸ್.ನಾಗಾಭರಣ
ಮೂರು ಕಾನೂನುಗಳ ಅನುಷ್ಠಾನವನ್ನು ಸುಪ್ರೀಂ ಕೋರ್ಟ್ ಜನವರಿ 11 ರಂದು ತಡೆಹಿಡಿದಿತ್ತು. ಇದರ ವಿರುದ್ಧ ರೈತರು ದೆಹಲಿ ಗಡಿಯಲ್ಲಿ 50 ದಿನಗಳ ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದಿನ ಆದೇಶದವರೆಗೆ ಮತ್ತು ಬಿಕ್ಕಟ್ಟನ್ನು ಪರಿಹರಿಸಲು ನಾಲ್ಕು ಸದಸ್ಯರ ಸಮಿತಿಯನ್ನು ನೇಮಿಸಿದ್ದರು. ಆದಾಗ್ಯೂ, ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮನ್ ಅವರು ಕಳೆದ ವಾರ ಸಮಿತಿಯಿಂದ ಹಿಂದೆ ಸರಿದರು.
ಘನ್ವತ್ ಅವರಲ್ಲದೆ, ಕೃಷಿ ಅರ್ಥಶಾಸ್ತ್ರಜ್ಞರಾದ ಅಶೋಕ್ ಗುಲಾಟಿ ಮತ್ತು ಪ್ರಮೋದ್ ಕುಮಾರ್ ಜೋಶಿ ಅವರು ಸಮಿತಿಯ ಇತರ ಸದಸ್ಯರು. ಹೊಸ ಕೃಷಿ ಕಾನೂನುಗಳನ್ನು ಬೆಂಬಲಿಸುವ ಮತ್ತು ವಿರೋಧಿಸುವ ದೇಶದಾದ್ಯಂತದ ರೈತರ ಅಭಿಪ್ರಾಯಗಳನ್ನು ಸಮಿತಿ ಕೇಳುತ್ತದೆ ಮತ್ತು ಎರಡು ತಿಂಗಳೊಳಗೆ ಸುಪ್ರೀಂ ಕೋರ್ಟ್ಗೆ ವರದಿಯನ್ನು ಸಲ್ಲಿಸುತ್ತದೆ ಎನ್ನಲಾಗಿದೆ.
Published by:
MAshok Kumar
First published:
January 19, 2021, 8:10 AM IST