ಲಕ್ನೋ (ಜ. 22): ಮುಂದಿನ ತಿಂಗಳು ಎದುರಾಗಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ (Up polls) ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ (Akhilesh Yadav) ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಘೋಷಣೆ ಹೊರಡಿಸಿರುವ ಅವರು ತಮ್ಮ ಕುಟುಂಬದ ತವರು ಕ್ಷೇತ್ರದಲ್ಲಿರುವ ಮೈನ್ಪುರಿ ಜಿಲ್ಲೆಯ ಕರ್ಹಾಲ್ (Karhal) ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮೈನ್ಪುರಿ ಮುಲಾಯಂ ಸಿಂಗ್ ಯಾದವ್ ಕ್ಷೇತ್ರ
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಇದೇ ಮೈನಾಪುರಿಯಲ್ಲಿ ಐದು ಬಾರಿ ಗೆದ್ದು ಲೋಕಸಭೆಗೆ ಆಯ್ಕೆ ಆಗಿದ್ದರು. ಮೈನ್ಪುರಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಕರ್ಹಾಲ್ ಒಂದಾಗಿದೆ.
ಭಾರೀ ಅಂತರದ ಗೆಲುವಿನ ವಿಶ್ವಾಸ
ಆಡಳಿತಾರೂಢ ಬಿಜೆಪಿ ಸೋಲಿಸಲು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಹೊಂದಿರುವ ಅಖಿಲೇಶ್ ಯಾದವ್ ಯಾವ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂಬ ಕುತೂಹಲ ಮೂಡಿತು. ಇದೀಗ ಅವರು ಕರ್ಹಾಲ್ ಆಯ್ಕೆ ಮಾಡಿಕೊಂಡಿದ್ದು, ಭಾರೀ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ರಾಮ್ ಗೋಪಲ್ ಯಾದವ್ ತಿಳಿಸಿದ್ದಾರೆ
ಈ ಮೊದಲು ಅಖಿಲೇಶ್ ಯಾದವ್ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ ಸಂಭಾಲ್ ಜಿಲ್ಲೆಯ ಗುನ್ನೌರ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿದ್ದವು.
ಮೊದಲ ವಿಧಾನಸಭಾ ಚುನಾವಣೆ
ಅಖಿಲೇಶ್ ಯಾದವ್ ಅವರಿಗೂ ಇದು ಮೊದಲ ರಾಜ್ಯ ವಿಧಾನಸಭಾ ಚುನಾವಣೆ ಆಗಿದೆ. ಈ ಹಿಂದೆ ಅವರು ಅಜಂಗಢದಿಂದ ಲೋಕಸಭಾ ಸಂಸದರಾಗಿದ್ದರು. 2012 ರಲ್ಲಿ ರಾಜ್ಯದ ಮುಖ್ಯಮಂತ್ರಿ ಹುದ್ದೆ ಒಲಿದಾಗ ಅವರು ಯೋಗಿ ಆದಿತ್ಯನಾಥ್ ರೀತಿಯಲ್ಲಿಯೇ ವಿಧಾನ ಪರಿಷತ್ತಿನ ಮೂಲಕ ಸಿಎಂ ಆಗಿದ್ದರು.
ಇದನ್ನು ಓದಿ: ಟಿಕೆಟ್ ನಿರಾಕರಣೆ ಹಿನ್ನಲೆ ಬಿಜೆಪಿ ತೊರೆದ Utpal Parrikar ; ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ
ಕಿರಿಕಿರಿಯಿಂದ ಹಾಗೇ ಹೇಳಿದೆ ಎಂದ ಪ್ರಿಯಾಂಕಾ ಗಾಂಧಿ ವಾದ್ರಾ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ತಾವೇ ಎಂದು ಪರೋಕ್ಷವಾಗಿ ತಿಳಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ತಮ್ಮ ಮಾತನನ್ನು ಹಿಂಪಡೆದಿದ್ದಾರೆ. ಈ ಸಂಬಂಧ ಇಂದು ಸ್ಪಷ್ಟನೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕಿರಿಕಿರಿಯಿಂದಾಗಿ ಆ ರೀತಿ ಹೇಳಿದೆ. ನಾನು ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ನ ಸಿಎಂ ಮುಖ ಎಂದು ಹೇಳುತ್ತಿಲ್ಲ. ಮತ್ತೆ ಮತ್ತೆ ಒಂದೇ ಪ್ರಶ್ನೆಯನ್ನು ಕೇಳುತ್ತಿರುವುದರಿಂದ ನಾನು ಕಿರಿಕಿರಿಯಿಂದ ಆ ರೀತಿ ಹೇಳಿದೆ ಎಂದಿದ್ದಾರೆ.
ಶುಕ್ರವಾರ ಉತ್ತರ ಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮಗೆ ಕಾಂಗ್ರೆಸ್ ಪಕ್ಷದಿಂದ ಬೇರೆ ಮುಖ ಕಾಣಿಸುತ್ತಿದೆ. ಆದರೆ, ಎಲ್ಲ ಕಡೆ ನೀವು ನನ್ನ ಮುಖ ನೋಡಬಹುದು ಎನ್ನುವ ಮೂಲಕ ತಾವೇ ಸಿಎಂ ಅಭ್ಯರ್ಥಿ ಎಂಬ ಅರ್ಥದಲ್ಲಿ ಪರೋಕ್ಷವಾಗಿ ತಿಳಿಸಿದ್ದರು.
ಇದನ್ನು ಓದಿ: ಯುವ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ
ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ
ಇದೇ ವೇಳೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಮಾತನಾಡಿದ ಅವರು, ಸತ್ಯವೆಂದರೆ ಈ ದೇಶದಲ್ಲಿ ಉತ್ತರ ಪ್ರದೇಶ ಸೇರಿದಂತೆ, ಸರ್ಕಾರದ ಕೆಲವೇ ಕೆಲವು ಸ್ನೇಹಿತರು ಮತ್ತು ದೊಡ್ಡ ಉದ್ಯಮಿಗಳು ಲಾಭ ಪಡೆಯುತ್ತಿದ್ದಾರೆ, ಉಳಿದವರೆಲ್ಲರೂ ತುಂಬಾ ನೋವಿನಲ್ಲಿದ್ದಾರೆ. ಯುಪಿಯಲ್ಲಿ ಶೇಕಡಾವಾರು ನಿರುದ್ಯೋಗಿಗಳ ಬಗ್ಗೆ ನಾವು ಏಕೆ ಮಾತನಾಡುತ್ತಿಲ್ಲ? ಸರ್ಕಾರ ಶಿಕ್ಷಣಕ್ಕೆ ಖರ್ಚು ಮಾಡುತ್ತಿರುವ ಬಜೆಟ್ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ? ಉತ್ತರಪ್ರದೇಶದ ಪ್ರಗತಿಗೆ ಸಂಬಂಧವಿಲ್ಲದ ಪ್ರಶ್ನೆಗಳನ್ನು ನಾವು ಏಕೆ ಪರಿಹರಿಸುತ್ತಿದ್ದೇವೆ? ಎಂದು ಪ್ರಶ್ನಿಸಿದರು
ಶುಕ್ರವಾರ ಯುವ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್, ಅಗತ್ಯ ಬಿದ್ದರೆ ಚುನಾವಣೋತ್ತರ ಮೈತ್ರಿಗೆ ಪಕ್ಷ ಮುಕ್ತವಾಗಲಿದೆ ಎಂದು ತಿಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ