7 ತಿಂಗಳ ಬಳಿಕ ಶಬರಿಮಲೆಯಲ್ಲಿ ಭಕ್ತರಿಗೆ ದರ್ಶನ; ಇಂದಿನಿಂದ 5 ದಿನ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ
ಇಂದಿನಿಂದ ಅಕ್ಟೋಬರ್ 21ರವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ದಿನಕ್ಕೆ 250 ಮಂದಿ ಭಕ್ತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ತಿರುವನಂತಪುರಂ (ಅ. 16): ಲಾಕ್ಡೌನ್ನಿಂದಾಗಿ ದೇವಸ್ಥಾನ, ಮಾಲ್, ಮಸೀದಿಗಳು, ಥಿಯೇಟರ್ಗಳೆಲ್ಲವನ್ನೂ ಮುಚ್ಚಲಾಗಿತ್ತು. ಅತ್ಯಗತ್ಯ ಸೌಲಭ್ಯಗಳನ್ನು ಹೊರತುಪಡಿಸಿ ಬೇರಾವುದೂ ತೆರೆದಿರಲಿಲ್ಲ. ಇದೀಗ ಒಂದೊಂದಾಗಿ ದೇವಸ್ಥಾನಗಳನ್ನು ತೆರೆಯಲಾಗುತ್ತಿದ್ದು, ನಿಯಮಿತ ಸಂಖ್ಯೆಯಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಐದು ದಿನಗಳ ತಿಂಗಳ ಪೂಜೆಗಳು ನಡೆಯಲಿದ್ದು, ಕೋವಿಡ್ ನಡುವೆಯೂ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅನುಮತಿ ನೀಡಲಾಗಿದೆ ಎಂದು ತ್ರವಂಕೋರ್ ದೇವಸ್ವಂ ಬೋರ್ಡ್ (ಟಿಡಿಬಿ) ತಿಳಿಸಿದೆ. ಈಗಾಗಲೇ ವರ್ಚುವಲ್ ಕ್ಯೂ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಂಡ ಭಕ್ತರಿಗೆ ಮಾತ್ರ ಪಂಬ ಬೇಸ್ ಕ್ಯಾಂಪ್ನಿಂದ ಶಬರಿಮಲೆ ಬೆಟ್ಟವನ್ನು ಏರಿ, ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುವುದು. ಒಂದು ದಿನಕ್ಕೆ 250 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಈ ಬಾರಿ ಭಕ್ತರು ಪಂಬ ನದಿಯಲ್ಲಿ ಸ್ನಾನ ಮಾಡುವಂತಿಲ್ಲ. ಅದರ ಬದಲಾಗಿ ಪಂಬ ಮತ್ತು ಏರುಮಲೈನಲ್ಲಿ ಶವರ್ ಏರ್ಪಾಡು ಮಾಡಲಾಗುತ್ತದೆ. ಅದರ ಕೆಳಗೆ ನಿಂತು ಸ್ನಾನ ಮಾಡಿದ ಬಳಿಕ ಭಕ್ತರು ಬೆಟ್ಟ ಹತ್ತಬಹುದು. ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಇಂದಿನಿಂದ ಐದು ದಿನಗಳ ಕಾಲ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ದಿನಕ್ಕೆ 250 ಮಂದಿ ಭಕ್ತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಇರುವ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಇಂದಿನಿಂದ ಅಕ್ಟೋಬರ್ 21ರವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.
ಇಂದು ಕೇರಳ ಸಶಸ್ತ್ರ ಪೊಲೀಸ್ ಪಡೆ (ಕೆಎಪಿ)ಯ ಐದನೇ ಬೆಟಾಲಿಯನ್ ಕಮಾಂಡೆಂಟ್ ಕೆ. ರಾಧಾಕೃಷ್ಣನ್ ದೇಗುಲಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಇಂದು ಕೊರೋನಾ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯವಾಗಿದೆ. ನವೆಂಬರ್ 16ರಿಂದ ಶಬರಿಮಲೆಯಲ್ಲಿ ವಾರ್ಷಿಕ ಯಾತ್ರೆ ಆರಂಭವಾಗಲಿದೆ. ಕಳೆದ ವರ್ಷಗಳಿಗಿಂತ ಈ ವರ್ಷ ಭಕ್ತರ ಸಂಖ್ಯೆಗೆ ಮಿತಿ ಹೇರಲಾಗಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕೊರೋನಾ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ 10 ವರ್ಷದೊಳಗಿನ ಮತ್ತು 60 ವರ್ಷ ಮೇಲ್ಪಟ್ಟವರಿಗೆ ದೇಗುಲದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ.
ಪ್ರತಿವರ್ಷ ನವೆಂಬರ್ ತಿಂಗಳಿನಿಂದ 2 ತಿಂಗಳು ಶಬರಿಮಲೆಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಮಾಲೆ ಹಾಕಿದ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಂಡು, ದರ್ಶನ ಪಡೆಯುತ್ತಾರೆ. ಇರುಮುಡಿ ಹೊತ್ತು ಈ ದೇವಸ್ಥಾನಕ್ಕೆ ತೆರಳುವುದು ಅಷ್ಟು ಸುಲಭವಲ್ಲ. ಮುಂದಿನ ತಿಂಗಳ ವಾರ್ಷಿಕ ಯಾತ್ರೆಯ ಮಾರ್ಗಸೂಚಿಗಳ ಬಗ್ಗೆ ಇನ್ನೂ ಚರ್ಚೆಗಳಾಗುತ್ತಿವೆ. ಇಂದಿನಿಂದ 5 ದಿನ ಶಬರಿಮಲೆಯಲ್ಲಿ ದರ್ಶನ ಪಡೆಯುವ ಭಕ್ತರು ನೀಲಕ್ಕಲ್ ಕ್ಯಾಂಪ್ನಲ್ಲಿ ರ್ಯಾಪಿಡ್ ಕೊರೋನಾ ತಪಾಸಣೆ ಮಾಡಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಬಂದರೆ ಅವರಿಗೆ ದರ್ಶನಕ್ಕೆ ಅವಕಾಶವಿಲ್ಲ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ