ನವ ದೆಹಲಿ (ಡಿಸೆಂಬರ್ 30); ಕಳೆದ ಒಂದು ವರ್ಷದಿಂದ ಬಿಟ್ಟೂ ಬಿಡದೆ ಕಾಡುತ್ತಿರುವ ಕೊರೋನಾ ವೈರಸ್ ಸದ್ಯಕ್ಕಂತೂ ಕೊನೆಯಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಇತ್ತೀಚೆಗೆ ಲಂಡನ್ನಲ್ಲಿ ಪತ್ತೆಯಾಗಿರುವ ನೂತನ ರೂಪಾಂತರಿ ಕೊರೋನಾ ವೈರಸ್ ಮನುಕುಲಕ್ಕೆ ಮತ್ತಷ್ಟು ಮಾರಕವಾಗುವ ಮುನ್ಸೂಚನೆ ನೀಡಿದೆ. ಹೀಗಾಗಿ ಎಲ್ಲಾ ದೇಶಗಳು ಈಗಲೂ ತಲ್ಲಣದಲ್ಲೇ ಇವೆ. ಈ ನಡುವೆ ಭಾರತದ ಗಣರಾಜ್ಯೋತ್ಸವ ದಿನದ ಸಂಭ್ರಮವೂ ಹತ್ತಿರವಾಗುತ್ತಿದೆ. ಭಾರತದಲ್ಲಿ ಪ್ರಸ್ತುತ ಅನ್ಲಾಕ್ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದರೂ ಸಹ ಕೊರೋನಾ ಕಾರಣದಿಂದಾಗಿ ಈಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಹೀಗಾಗಿ 2021ರ ಗಣರಾಜ್ಯೋತ್ಸವ ಸಂಭ್ರಮದ ಆಚರಣೆ ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೊರೋನಾ ಹರಡದಂತೆ ತಡೆಯಲು ಜನ ದಟ್ಟಣೆಯನ್ನು ನಿಗ್ರಹಿಸುವ ಸಲುವಾಗಿ ಕೇಂದ್ರ ಸರ್ಕಾರ ಮುಂದಿನ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಮುಂದಾಗಿದೆ.
ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಭಾರತೀಯ ಮೂರು ವಿಭಾಗದ ಸೇನಾ ಪಡೆ ನಡೆಸುವ ಪರೇಡ್ ಹೆಚ್ಚು ಮಹತ್ವ ಪಡೆದುಕೊಂಡಿರುತ್ತದೆ. ಈ ಪರೇಡ್ ಸಾಮಾನ್ಯವಾಗಿ ವಿಜಯ್ ಚೌಕ್ನಿಂದ ಪ್ರಾರಂಭವಾಗಿ ಕೆಂಪು ಕೋಟೆಯಲ್ಲಿ ಕೊನೆಗೊಳ್ಳುತ್ತದೆ. ಇದನ್ನು ವೀಕ್ಷಿಸಲು ಸಾವಿರಾರು ಜನ ಕೆಂಪುಕೋಟೆ ಮೈದಾನದಲ್ಲಿ ಜಮಾವಣೆಗೊಳ್ಳುತ್ತಾರೆ. ಆದರೆ, ಈ ವರ್ಷ ಜನ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಈ ಮೆರವಣಿಗೆಯ ಪಥವನ್ನು ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಮಿಲಿಟರಿ ಪಥ ಸಂಚಲನ ಈ ಬಾರಿ ವಿಜಯ್ ಚೌಕ್ನಿಂದ ಆರಂಭವಾಗಿ ರಾಷ್ಟ್ರೀಯ ಕ್ರೀಡಾಂಗಣದಲ್ಲೇ ಕೊನೆಗೊಳ್ಳಲಿದೆ. ಮೆರವಣಿಗೆಯ ಅಂತರವನ್ನು ಅರ್ಧಕ್ಕೆ ಇಳಿಸಲಾಗಿದೆ. ಈ ಹಿಂದೆ 8.2 ಕಿಲೋಮೀಟರ್ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮೆರವಣಿಗೆಯನ್ನು 3.3 ಕಿಲೋಮೀಟರ್ಗೆ ಇಳಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಪ್ರೋಟೋಕಾಲ್ಗಳ ಭಾಗವಾಗಿ, ಮೆರವಣಿಗೆ ಮಾಡುವವರು ಮತ್ತು ವೀಕ್ಷಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿರಬೇಕು ಎಂದು ಸೂಚಿಸಲಾಗಿದೆ. ಪ್ರೇಕ್ಷಕರ ಸಂಖ್ಯೆಯನ್ನು 1,15,000 ದಿಂದ 25,000 ಕ್ಕೆ ಇಳಿಸಲಾಗಿದೆ ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ.
ಕೊರೋನಾ ವೈರಸ್ ಸಾಂಕ್ರಾಮಿಕವನ್ನು ಕೊನೆಗಾಣಿಸಲು ಭಾರತ ಹೆಣಗಾಡುತ್ತಿರುವ ಇದೇ ಸಂದರ್ಭದಲ್ಲಿ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸುಮಾರು 150 ಸೇನಾ ಜವಾನರು ಕೋವಿಡ್ -19 ಗೆ ತುತ್ತಾಗಿದ್ದಾರೆ. ಇವರೆಲ್ಲರನ್ನು ದೆಹಲಿ ಕಂಟೋನ್ಮೆಂಟ್ನಲ್ಲಿ ನಿರ್ಬಂಧಿಸಲಾಗಿದೆ.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಭಾರತ ಸರ್ಕಾರ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಬ್ರಿಟಿಷ್ ಪ್ರಧಾನಿ ತಮ್ಮ ದೇಶದಲ್ಲಿ ಹೊಸ ವೈರಸ್ ಒತ್ತಡದ ಭೀತಿಯ ಹೊರತಾಗಿಯೂ ಗಣರಾಜ್ಯೋತ್ಸವದ ಭಾಗವಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಕಳೆದ ವಾರ ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ