ನವದೆಹಲಿ: ದೆಹಲಿಯ (Dehli) ಸಿವಿಲ್ ಲೈನ್ಸ್ನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (CM Arvind Kejriwal) ಅವರ ಅಧಿಕೃತ ಬಂಗಲೆಯನ್ನು ನವೀಕರಿಸಲು ಸುಮಾರು 45 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬ ಅಚ್ಚರಿಯ ಸುದ್ದಿ ಕೇಳಿಬಂದಿದೆ. ಸರಳತನಕ್ಕೆ ಹೆಚ್ಚು ಮನ್ನಣೆ ನೀಡುವ ಆಮ್ ಆದ್ಮಿ ಪಕ್ಷದ (Aam Aadmi Party) ಮುಖ್ಯಮಂತ್ರಿ ತಮ್ಮ ನಿವಾಸದ ನವೀಕರಣಕ್ಕೆ (House Renovated) ಇಷ್ಟು ಖರ್ಚು ಮಾಡಿರುವುದು ಅಚ್ಚರಿ ತರಿಸಿದೆ.
ದೆಹಲಿ ಸಿಎಂ ಅಧಿಕೃತ ಬಂಗಲೆಯ ನವೀಕರಣಕ್ಕಾಗಿ ಸಾರ್ವಜನಿಕರ 44.78 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ ಎಂದು Times Now Navbharat ವರದಿ ಮಾಡಿದೆ. ಈ ವರದಿ ಯಾವಾಗಲೂ ಸರಳತೆ, ಮಿತವ್ಯಯದ ಬಗ್ಗೆ ಮಾತನಾಡುವ ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತದ ಮೇಲೆ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ.
ಕರ್ಟನ್ಸ್ಗೆ 97 ಲಕ್ಷ ಬಳಕೆ
ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣಕ್ಕಾಗಿ ಬರೋಬ್ಬರಿ 44.78 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಚಾನೆಲ್ ವರದಿ ಮಾಡಿದೆ. ವರದಿಯ ಪ್ರಕಾರ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಳಸಿರುವ ಪ್ರತಿ ಕರ್ಟನ್ಗೆ ಸುಮಾರು 5-8 ಲಕ್ಷ ರೂಪಾಯಿ ಎಂಬ ಅಚ್ಚರಿಯ ವಿಚಾರವನ್ನು ನವಭಾರತ್ ವರದಿಯಲ್ಲಿ ತಿಳಿಸಿದೆ.
ದೆಹಲಿ ಸಿಎಂ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ನಿವಾಸಕ್ಕೆ ಸುಮಾರು 97 ಲಕ್ಷ ರೂಪಾಯಿ ವೆಚ್ಚದ 23 ಕರ್ಟನ್ಸ್ಗಾಗಿಯೇ ವಿನಿಯೋಗಿಸಲಾಗಿದೆ ಎಂದು ಈ ದಾಖಲೆಗಳು ತೋರಿಸಿವೆ.
ವಿಯೆಟ್ನಾಂನಿಂದ ಮಾರ್ಬಲ್ ಆಮದು
ಕೇಜ್ರಿವಾಲ್ ಅವರ ಅಧಿಕೃತ ನಿವಾಸಕ್ಕಾಗಿ ವಿಯೆಟ್ನಾಂನಿಂದ ಮಾರ್ಬಲ್ ಆಮದು ಮಾಡಿಕೊಳ್ಳಲಾಗಿದೆ. ಈ ನಿವಾಸದ ನವೀಕರಣಕ್ಕೆ ಬಳಸಲಾದ ಮಾರ್ಬಲ್ ಅನ್ನು ವಿಯೆಟ್ನಾಂನಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ತರಿಸಿಕೊಳ್ಳಲಾಗಿದೆ. ಮಹಡಿಗಳ ನವೀಕರಣಕ್ಕಾಗಿ ಉತ್ತಮ ಗುಣಮಟ್ಟದ 'ಡಿಯೋರ್ ಪರ್ಲ್ ಮಾರ್ಬಲ್' ಅನ್ನು ಬಳಸಲಾಗಿದೆ. ಇಷ್ಟು ಮಾತ್ರವಲ್ಲದೆ ಮಾರ್ಬಲ್ ಫಿಕ್ಸ್ ಮಾಡಲು ಬಳಸುವ ಕೆಮಿಕಲ್ಸ್ಗಾಗಿಯೇ 21,60,000 ರೂಪಾಯಿಗಳನ್ನು ಬಳಸಲಾಗಿದೆ.
ಕೇಜ್ರಿವಾಲ್ ನಿವಾಸದಲ್ಲಿರುವ ಅಲ್ಮಿರಾಗೆ 40 ಲಕ್ಷ ರೂ ವೆಚ್ಛ
ನವಭಾರತ್ ಬಿಡುಗಡೆ ಮಾಡಿರುವ ದಾಖಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಆರು ಅಲ್ಮೆರಾಗಳನ್ನು ಫಿಕ್ಸ್ ಮಾಡುವುದಕ್ಕೆ ಬರೋಬ್ಬರಿ 40 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ವಿವರಿಸಿದೆ.
2013 ರಲ್ಲಿ ಎಎಪಿ ದೆಹಲಿ ಚುನಾವಣೆಯಲ್ಲಿ ಗೆದ್ದ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅಥವಾ ಅವರ ಯಾವುದೇ ಎಎಪಿ ಸಚಿವರು ಸರ್ಕಾರ ನೀಡುವಂತಹ ಬಂಗಲೆಗಳಿಗೆ ಹೋಗುವುದಿಲ್ಲ ಎಂದು ಘೋಷಿಸಿದ್ದರು. ಅಲ್ಲದೆ ಎಲ್ಲರಿಗೂ ಸಣ್ಣ ಸರ್ಕಾರಿ ಫ್ಲಾಟ್ಗಳನ್ನು ನೀಡಲಾಗುವುದು ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಬಂಗಲೆ ನವೀಕರಣಕ್ಕಾಗಿಯೇ 45 ಕೋಟಿ ರೂಪಾಯಿ ಖರ್ಚು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾಮನ್ ಮ್ಯಾನ್ ಎಂಬ ಟ್ಯಾಗ್ ಹಾಕಿಕೊಂಡು ರಾಜಕೀಯ ಪ್ರವೇಶಿಸಿದ ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದ ನವೀಕರಣಕ್ಕೆ ಸಾರ್ವಜನಿಕರು ಕಷ್ಟಪಟ್ಟು ದುಡಿದು ಕಟ್ಟಿರುವ ತೆರಿಗೆಯ 44.78 ಕೋಟಿ ಹಣವನ್ನು ಬಳಸಿಕೊಂಡಿದ್ದಾರೆ. ಈತ ಕಾಮನ್ ಮ್ಯಾನ್ ಅಥವಾ ಕಾನ್ ಮ್ಯಾನ್ ಎಂದು ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ವಿಷ್ಣು ವರ್ಧನ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತಾರಾಖಂಡ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಕಳ್ಳ ಎಂದು ಕರೆದಿದ್ದು, ಟ್ವೀಟ್ ಮಾಡಿದ್ದು, ಕಳ್ಳ ಅರವಿಂದ್ ಕೇಜ್ರಿವಾಲ್ ವಿಯೆಟ್ನಾಂನಿಂದ ತನ್ನ ಅರಮನೆಗೆ 3.5 ಕೋಟಿ ರೂಪಾಯಿ ಮೌಲ್ಯದ ಅಮೃತಶಿಲೆಯನ್ನು ಆಮದು ಮಾಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ