ಜೈಪುರ (ಜುಲೈ 28); ರಾಜಸ್ಥಾನ ವಿಧಾನಸಭಾ ಚುನಾವಣೆ ಫಲಿತಾಂಶದ ಬೆನ್ನಿಗೆ ರಾಜಸ್ಥಾನದಲ್ಲಿ ಗೆಲುವು ಸಾಧಿಸಿದ್ದ ಎಲ್ಲಾ 6 ಜನ ಶಾಸಕರನ್ನು ಕಾಂಗ್ರೆಸ್ ಜೊತೆಗೆ ವಿಲೀನ ಮಾಡಿಕೊಂಡಿದ್ದ ಸಿಎಂ ಅಶೋಕ್ ಗೆಹ್ಲೋಟ್ಗೆ ಪಾಠ ಕಲಿಸಲು ಇದು ಸಕಾಲ. ಅವರ ಈ ನಡೆಯ ವಿರುದ್ಧ ನಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇನೆ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಆಕ್ರೋಶ ಹೊರಹಾಕಿದ್ದಾರೆ.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಈಗಾಗಲೇ ಕಾಂಗ್ರೆಸ್ ಪಕ್ಷದ 18 ಬಂಡಾಯ ಶಾಸಕರು ರಣತಂತ್ರ ಹೆಣೆದಿದ್ದಾರೆ. ಈ ನಡುವೆ ರಾಜ್ಯಪಾಲ ಕಲ್ರಾಜ್ ಮಿಶ್ರಾ ಜುಲೈ.31 ರಂದು ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿದ್ದಾರೆ. ಈ ನಡುವೆ ಮಾಯಾವತಿಯೂ ರಾಜಸ್ಥಾನದ ರಾಜಕೀಯದ ರಂಗಪ್ರವೇಶ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈಗಾಗಲೇ ಬಿಎಸ್ಪಿ ಪಕ್ಷ ರಾಜಸ್ಥಾನದಲ್ಲಿರುವ ತನ್ನ ಪಕ್ಷದ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದೆ. ಅಲ್ಲದೆ, ವಿಶ್ವಾಸಮತ ಯಾಚನೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದರೆ ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಈ ಶಾಸಕರ ವಿಲೀನತೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ಗೂ ಅರ್ಜಿ ಸಲ್ಲಿಸುವುದಾಗಿ ಇಂದು ಮಾಯಾವತಿ ತಿಳಿಸಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಲಿದೆ.
200 ಸದಸ್ಯರ ರಾಜಸ್ಥಾನ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಕೊಳ್ಳಬೇಕಾದರೆ ಅವರಿಗೆ 101 ಸ್ಥಾನದ ಅಗತ್ಯವಿದೆ. ಆದರೆ, ಬಂಡಾಯ ಶಾಸಕರ ಹೊರತಾಗಿಯೂ ಪ್ರಸ್ತುತ ಅವರು 102 ಸ್ಥಾನವನ್ನು ಹೊಂದಿದ್ದಾರೆ. ಆದರೆ, ಒಂದು ವೇಳೆ ಬಿಎಸ್ಪಿ ಶಾಸಕರ ಮತಗಳು ಅನರ್ಹವಾದರೆ ಸರ್ಕಾರ ಬಹುಮತವನ್ನು ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, "ರಾಜಸ್ಥಾನದಲ್ಲಿ ಚುನಾವಣಾ ಫಲಿತಾಂಶಗಳ ನಂತರ ಬಿಎಸ್ಪಿ ತನ್ನ ಎಲ್ಲಾ 6 ಶಾಸಕರಿಂದ ಕಾಂಗ್ರೆಸ್ಗೆ ಬೇಷರತ್ ಬೆಂಬಲ ನೀಡಿತ್ತು. ದುರದೃಷ್ಟವಶಾತ್ ಸಿಎಂ ಅಶೋಕ್ ಗೆಹ್ಲೋಟ್ ದುರುದ್ದೇಶದಿಂದ ಆ 6 ಜನ ಶಾಸಕರನ್ನು ಅಸಂವಿಧಾನಿಕವಾಗಿ ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಿದರು. ಇದರಿಂದ ಬಿಎಸ್ಪಿಗೆ ನಷ್ಟವಾಗಿದೆ.
ಈ ಕುರಿತು ಬಿಎಸ್ಪಿ ಮೊದಲೇ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಆದರೆ, ನಾವು ಕಾಂಗ್ರೆಸ್ ಪಕ್ಷ ಮತ್ತು ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಪಾಠ ಕಲಿಸಲು ಸಮಯಕ್ಕಾಗಿ ಕಾಯುತ್ತಿದ್ದೆವು. ಈಗ ಆ ಸಮಯ ಬಂದಿದೆ. ಹೀಗಾಗಿ ನಾವು ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದೇವೆ. ಈ ವಿಚಾರವನ್ನು ನಾವು ಅಷ್ಟು ಸಲೀಸಾಗಿ ಬಿಡಲು ಸಿದ್ಧರಿಲ್ಲ" ಎಂದು ಕಿಡಿಕಾರಿದ್ದಾರೆ.
ಶಾಸಕರಾದ ಆರ್. ಗುಧಾ, ಲಖನ್ ಸಿಂಗ್, ದೀಪ್ ಚಂದ್, ಜೆ.ಎಸ್. ಅವನಾ, ಸಂದೀಪ್ ಕುಮಾರ್ ಮತ್ತು ವಾಜಿಬ್ ಅಲಿ ಅವರಿಗೆ ಬಿಎಸ್ಪಿ ಪಕ್ಷ ಭಾನುವಾರವೇ ನೊಟೀಸ್ ನೀಡಿದ್ದು, ವಿಪ್ ಜಾರಿ ಮಾಡಿದೆ. ಆದರೆ, ಶಾಸಕರು ಮಾಯಾವತಿಯವರ ಬೆದರಿಕೆಗೆ ಸೊಪ್ಪು ಹಾಕಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ : ’ಆಪರೇಷನ್ ಕಮಲದ’ ವಿರುದ್ಧ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇದೆಯೇ?; ಕುಮಾರಸ್ವಾಮಿ ಚಾಟಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ