ಬಾಬ್ರಿ ತೀರ್ಪು: ನೇಣಿಗೆ ಸಿದ್ಧ, ಆದರೆ ಜಾಮೀನು ಕೇಳಲ್ಲ ಎಂದ ಉಮಾ ಭಾರತಿ

ಉಮಾ ಭಾರತಿ

ಉಮಾ ಭಾರತಿ

ಅಯೋಧ್ಯೆ ರಾಮಜನ್ಮಭೂಮಿ ಆಂದೋಲನದಲ್ಲಿ ಪಾಲ್ಗೊಂಡಿದ್ದಕ್ಕೆ ತನಗೆ ಹೆಮ್ಮೆ ಇದೆ. ಕೋರ್ಟ್ ತೀರ್ಪು ಏನೇ ಬಂದರೂ ಪರವಾಗಿಲ್ಲ, ನೇಣಿಗೆ ಕೊರಳೊಡ್ಡುತ್ತೇನಾದರೂ ಜಾಮೀನು ಅರ್ಜಿ ಮಾತ್ರ ಹಾಕುವುದಿಲ್ಲ ಎಂದು ಉಮಾ ಭಾರತಿ ಹೇಳಿದ್ಧಾರೆ.

  • News18
  • 3-MIN READ
  • Last Updated :
  • Share this:

ನವದೆಹಲಿ(ಸೆ. 30): ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಪೈಕಿ ಇರುವ ಬಿಜೆಪಿ ನಾಯಕಿ ಉಮಾ ಭಾರತಿ ಅವರು ಇವತ್ತಿನ ತೀರ್ಪು ಏನೇ ಬಂದರೂ ಸ್ವೀಕರಿಸಲು ಸಿದ್ಧವಾಗಿದ್ದಾರೆ. ರಾಮಜನ್ಮಭೂಮಿ ಆಂದೋಲನದಲ್ಲಿ ಪಾಲ್ಗೊಂಡಿದ್ದು ತನ್ನ ಪಾಲಿಗೆ ಹೆಮ್ಮೆಯ ಕೆಲಸ ಎಂದು ಹೇಳಿಕೊಂಡಿರುವ ಅವರು ಇದಕ್ಕಾಗಿ ತಾನು ನೇಣಿಗೆ ಏರಲೂ ಸಿದ್ಧ ಎಂದಿದ್ದಾರೆ. ಕೋರ್ಟ್​ನಿಂದ ಏನೇ ತೀರ್ಪು ಬಂದರೂ ತಾನು ಮಾತ್ರ ಯಾವುದೇ ಕಾರಣಕ್ಕೂ ಜಾಮೀನು ಕೇಳುವುದಿಲ್ಲ ಎಂದು ಉಮಾ ಭಾರತಿ ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ 26ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ಉಮಾ ಭಾರತಿ ಈ ವಿಚಾರವನ್ನು ತಿಳಿಸಿದ್ದಾರೆನ್ನಲಾಗಿದೆ.


“ಸೆ. 30ರಂದು ಕೋರ್ಟ್ ತೀರ್ಪು ಏನು ಬರುತ್ತೆ ಎಂದು ಗೊತ್ತಿಲ್ಲ. ಏನೇ ಬಂದರೂ ನಾನು ಜಾಮೀನು ಕೇಳುವುದಿಲ್ಲ. ಅಯೋಧ್ಯೆ ಆಂದೋಲನದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ಹೆಮ್ಮೆ ಇದೆ. ಈ ಆಂದೋಲನಕ್ಕಾಗಿ ನನ್ನನ್ನು ನೇಣಿಗೆ ಹಾಕಿದರೂ ನಾನು ಅದನ್ನು ಸ್ವೀಕರಿಸುತ್ತೇನೆ. ಜಾಮೀನು ಅರ್ಜಿ ಹಾಕಿದರೆ ನಮ್ಮ ಹೆಮ್ಮೆಗೆ ಘಾಸಿಯಾಗುತ್ತದೆ” ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಅದ ಉಮಾ ಭಾರತಿ ಹೇಳಿದ್ದಾರೆ.


ಉಮಾ ಭಾರತಿ ಅವರು ಸದ್ಯ ಕೋವಿಡ್ ಸೋಂಕಿಗೆ ಒಳಗಾಗಿ ಋಷಿಕೇಶ್​ನ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವತ್ತು ಅವರು ಕೋರ್ಟ್​​ನಲ್ಲಿ ಹಾಜರಾಗುತ್ತಿಲ್ಲ.


ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಬಜರಂಗ ದಳ ಸಂಸ್ಥಾಪಕ ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.


ಇದನ್ನೂ ಓದಿ: ಆರ್ಮೇನಿಯಾ-ಆಜರ್​ಬೈಜಾನ್ ಯುದ್ಧ; ಏನು ಕಾರಣ?


ಸೆಪ್ಟೆಂಬರ್ 1ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಒಟ್ಟು 351 ಜನ ಸಾಕ್ಷಿಗಳು ಹಾಗೂ ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಇವೆಲ್ಲವೂ 1992ರ ಡಿಸೆಂಬರ್ 6ರಂದು ಕರಸೇವಕರು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು ಎಂಬ ಬಗೆಗಿನ ಸಾಕ್ಷ್ಯಾಧಾರಗಳಾಗಿವೆ.


ಪ್ರಕರಣದ ಹಿನ್ನೆಲೆ:


ಮೊಘಲರ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು. ಕಾಲಾನಂತರ ಅಲ್ಲಿ ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಹಿಂದುಗಳು ಆರೋಪಿಸಿದ್ದರು. 1984ರಲ್ಲಿ ವಿಶ್ವ ಹಿಂದು ಪರಿಷತ್ ಈ ವಿಚಾರದಲ್ಲಿ ಆಂದೋಲನ ಶುರುಮಾಡಿತು. ಇದಾದ ಬಳಿಕ ವ್ಯಾಜ್ಯ ನಾಯಾಲಯದ ಮೆಟ್ಟಿಲೇರಿತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ 1992ರ ಡಿಸೆಂಬರ್ 6ರಂದು 'ಕರಸೇವಕರೆಂಬ' ಹಿಂದು ಕಾರ್ಯಕರ್ತರು ಬಾಬ್ರಿ ಮಸೀದಿಯನ್ನು ಕೆಡವಿದರು.


ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಮತ್ತಿತರ 32 ಮಂದಿ ಸೇರಿಕೊಂಡು ಸಂಚುರೂಪಿಸಿ ಭೂವಿವಾದ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿಯನ್ನು ಕೆಡವಿದ್ದಾರೆ ಎಂದು ದೂರು ದಾಖಲಿಸಲಾಯಿತು.


ಸೆಷನ್ ಕೋರ್ಟಿನಿಂದ ಸಿಬಿಐ ವಿಶೇಷ ನ್ಯಾಯಾಲಯದವರೆಗೆ ವಿಚಾರಣೆ ನಡೆದಿದೆ. ಇದೀಗ ಸಿಬಿಐ ವಿಶೇಷ ನ್ಯಾಯಲಯ ಅಂತಿಮ ತೀರ್ಪು ಪ್ರಕಟಿಸುತ್ತಿದೆ. ತೀರ್ಪು ಪ್ರಕಟದ ಹಿನ್ನೆಲೆಯಲ್ಲಿ ‌ಅಯೋಧ್ಯೆಯೂ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ 144 ಸೆಕ್ಷನ್​​ ಜಾರಿಗೊಳಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸುವ ತೀರ್ಪು ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತಿತರರಿಗೆ ಅತ್ಯಂತ ಮಹತ್ವದ್ದಾಗಿದೆ. ದೋಷಿ ಅಂತಾ ಸಾಬೀತಾದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

top videos
    First published: