Goa Election: ಅಕ್ಟೋಬರ್. 30ರಂದು ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ!
Rahul Gandhi: ರಾಹುಲ್ ಗಾಂಧಿ ಅವರು ಗೋವಾ ಪ್ರವಾಸದ ವೇಳೆ ತೀವ್ರ ಸಮಸ್ಯೆಯಲ್ಲಿರುವ ಮೀನುಗಾರರು ಮತ್ತು ಗಣಿ ನಿಷೇಧದಿಂದ ಸಂತ್ರಸ್ತರಾಗಿರುವವರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ನವ ದೆಹಲಿ (ಅಕ್ಟೋಬರ್. 26): ಮುಂದಿನ ವರ್ಷದ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರ ಖಂಡ (Uttarkhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. 2024ರ ಲೋಕಸಭಾ ಚುನಾವಣೆಯ (2024 Lokasabha Election) ದೃಷ್ಟಿಯಿಂದ ಈ ಐದು ರಾಜ್ಯಗಳು ಬೇರೆಲ್ಲಾ ರಾಜಕೀಯ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷದ ಪಾಲಿಗೆ ಅತ್ಯಂತ ನಿರ್ಣಾಯಕಾವಾಗಿವೆ. ಏಕೆಂದರೆ ಈ ಚುನಾವಣೆಗಳಲ್ಲಿ ಸಾಧ್ಯವಾದಷ್ಟು ಕಡೆ ಗೆಲ್ಲಬೇಕಾಗಿದೆ. ಆ ಮೂಲಕ ಪಕ್ಷದ ನೆಲೆಯನ್ನು ವೃದ್ಧಿ ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 30ರಂದು ಎಐಸಿಸಿ ಮಾಜಿ ಅಧ್ಯಕ್ಷರೂ ಹಾಗೂ ಸಂಸದರೂ ಆದ ರಾಹುಲ್ ಗಾಂಧಿ (AICC Former President Rahul Gandhi) ಗೋವಾ ಪ್ರವಾಸ ಹಮ್ಮಿಕೊಂಡಿದ್ದಾರೆ.
ಗೋವಾ ವಿಧಾನಸಭಾ ಚುನಾವಣೆ (Goa Assembly Elections) ದೃಷ್ಟಿಯಿಂದಲೇ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪ್ರವಾಸದ ವೇಳೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ (Election Campaign) ನೀಡಲಿದ್ದಾರೆ. ಅಲ್ಲದೆ ಸಮಾಜದ ವಿವಿಧ ವರ್ಗದ ಜನರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಕಡಲ ತೀರದ ರಾಜ್ಯದಲ್ಲಿ ತೀವ್ರ ಸಮಸ್ಯೆಯಲ್ಲಿರುವ ಮೀನುಗಾರರು (Fisherman) ಮತ್ತು ಗಣಿ ನಿಷೇಧದಿಂದ ಸಂತ್ರಸ್ತರಾಗಿರುವವರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ ಎಂಬುದು ಖಚಿತವಾಗಿದೆ.
ರಾಹುಲ್ ಗಾಂಧಿ ಅವರು ಗೋವಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಗೋವಾ ಕಾಂಗ್ರೆಸ್ ಉಸ್ತುವಾರಿಯಾದ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ (Dinesh Gundurao), ಗೋವಾ ಚುನಾವಣಾ ಉಸ್ತುವಾರಿ ಪಿ. ಚಿದಂಬರಂ (P. Chidambaram) ಮತ್ತು ಗೋವಾ ಕಾಂಗ್ರೆಸ್ ನಾಯಕರು ಉಪಸ್ಥಿತರಿರಲಿದ್ದಾರೆ.
ಅ. 28ಕ್ಕೆ ಮಮತಾ ಬ್ಯಾನರ್ಜಿ ಭೇಟಿ:
ಐದು ರಾಜ್ಯಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲವೂ ಮುಖ್ಯವಾಗಿದ್ದರೆ ಸ್ಥಳೀಯ ಪಕ್ಷಗಳಾದ ಆಮ್ ಆದ್ಮಿಪಕ್ಷ (Aam Admi Party) ಮತ್ತು ತೃಣಮೂಲ ಕಾಂಗ್ರೆಸ್ (Trinamool Congress) ಗಳಿಗೆ ನೆಲೆ ವಿಸ್ತರಣೆ ಮಾಡಿಕೊಳ್ಳುವ ದೃಷ್ಟಿಯಿಂದ ಗೋವಾ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾದುದಾಗಿದೆ. ಈ ಹಿನ್ನೆಲೆಯಲ್ಲಿ ಟಿಎಂಸಿ ಅಧಿನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banarji) ಅಕ್ಟೋಬರ್ 28ರಂದು ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನ ಗೋವಾದಲ್ಲಿ ಇರಲಿರುವ ಮಮತಾ ಬ್ಯಾನರ್ಜಿ ಪಕ್ಷದ ವತಿಯಿಂದ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಲಿದ್ದಾರೆ.
ಗೋವಾದಲ್ಲೇ ಬೀಡುಬಿಟ್ಟ ಪ್ರಶಾಂತ್ ಕಿಶೋರ್:
ಈಗಾಗಲೇ ಮಾಜಿ ಮುಖ್ಯಮಂತ್ರಿ ಲುಝಿನ್ಹೋ ಫಲೇರೋ (Former Chief Minister Luizinho Falerio) ಮತ್ತು ಕಾಂಗ್ರೆಸ್ (Congress) ಪಕ್ಷದ ಇತರ ದೊಡ್ಡ ನಾಯಕರು ಟಿಎಂಸಿ ಸೇರಿಕೊಂಡಿದ್ದು ಮಮತಾ ಬ್ಯಾನರ್ಜಿ ಭೇಟಿ ವೇಳೆ ಇನ್ನಷ್ಟು ನಾಯಕರು ಟಿಎಂಸಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ ಭೇಟಿ ನೀಡುವ ವೇಳೆ ಅಲೆ ಸೃಷ್ಟಿ ಮಾಡಬೇಕು ಎಂಬ ಕಾರಣಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Election Strategist Prashant Kishor) ಗೋವಾದಲ್ಲಿ ದೀರ್ಘಕಾಲ ಬೀಡು ಬಿಟ್ಟಿದ್ದು ಟಿಎಂಸಿ ಪರ ರಣತಂತ್ರ ರೂಪಿಸುತ್ತಿದ್ದಾರೆ.
ಸೆಪ್ಟೆಂಬರ್ 29ರಂದು ಟಿಎಂಸಿ ಸೇರಿದ್ದ ಕಾಂಗ್ರೆಸ್ ನಾಯಕ ಲುಝಿನ್ಹೋ ಫಲೇರೋ ಈಗ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ (TMC general secretary Abhishek Banerjee) ಸಹ ಶೀಘ್ರವೇ ಗೋವಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಕಾಂಗ್ರೆಸ್ (Congress) ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳಲ್ಲದೆ ಬಿಜೆಪಿ (BJP) ಹಾಗೂ ಆಮ್ ಆದ್ಮಿ ಪಕ್ಷಗಳು ಕೂಡ ಗೋವಾ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿವೆ. ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಸದ್ದಿಲ್ಲದೆ ಚುನಾವಣಾ ತಯಾರಿ ನಡೆಸುತ್ತಿವೆ. ಯಾವಾಗ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುತ್ತವೆ ಎಂಬುದು ಇನ್ನಷ್ಟೇ ನಿರ್ಧಾರ ಆಗಬೇಕಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ