ನವದೆಹಲಿ: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ( Cambridge University) ಉಪನ್ಯಾಸ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತ ಸರ್ಕಾರವನ್ನು ಟೀಕಿಸಿದ್ದರು. ಭಾರತದ ಪ್ರಜಾಪ್ರಭುತ್ವದ (Indian Democracy) ಮೇಲೆ ದಾಳಿ ನಡೆಯುತ್ತಿದೆ, ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗುತ್ತಿದೆ, ಗೂಢಚಾರಿಕೆ ಮಾಡಲು ಪೆಗಾಸಸ್ ಬಳಸಲಾಗುತ್ತಿದೆ ಎಂದೆಲ್ಲಾ ಭಾರತ ಸರ್ಕಾರದ (Indian Government) ವಿರುದ್ಧ ಟೀಕಾಸ್ತ್ರ ನಡೆಸಿದ್ದರು. ಈ ಹೇಳಿಕೆ ನಂತರ ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಹುಲ್ ವಿದೇಶದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಚೀನಾವನ್ನು ಶ್ಲಾಘಿಸಿದರು. ಉಪನ್ಯಾಸದ ನಂತರ ಭಾರತೀಯ ಮೂಲದ ಪತ್ರಕರ್ತ ಸುರೇಶ್ ಕುಮಾರ್ ಗುಪ್ತಾ ಎಂಬುವವರು ರಾಹುಲ್ ಗಾಂಧಿ ಅವರ ಭಾರತ ವಿರೋಧಿ ಹೇಳಿಕೆಯ ಬಗ್ಗೆ ಕಿಡಿಕಾರಿದ್ದು, ದೇಶ ಪ್ರೇಮವನ್ನು ಇಂದಿರಾಗಾಂಧಿ ಅವರಿಂದ ಕಲಿಯಿರಿ ಎಂದು ಬುದ್ದಿ ಹೇಳಿದ ಘಟನೆ ನಡೆದಿದೆ.
ರಾಹುಲ್ಗೆ ಪತ್ರಕರ್ತನ ಪಾಠ
ರಾಹುಲ್ ಗಾಂಧಿಯವರ ಕೇಂಬ್ರಿಡ್ಜ್ ಭಾಷಣವನ್ನು ಉಲ್ಲೇಖಿಸಿ ರಾಹುಲ್ ಗಾಂಧಿಗೆ ಅಮೂಲ್ಯವಾದ ಪಾಠ ಮಾಡಿದ್ದಾರೆ. " ನನಗೆ ನಿಮ್ಮ ಅಜ್ಜಿ ಶ್ರೀಮತಿ ಇಂಧಿರಾಗಾಂಧಿ ಚೆನ್ನಾಗಿ ಗೊತ್ತಿದೆ, ಅವರು ನನಗೆ ಸಹೋದರಿಯಿದ್ದಂತೆ, ಅವರೊಬ್ಬ ಅದ್ಭುತ ಮಹಿಳೆ. ಅವರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿಅವರು ಬಂಧಿತರಾಗಿದ್ದರು. ಜೈಲಿನಿಂದ ಮರಳಿದ ನಂತರ ಲಂಡನ್ಗೆ ಬಂದಿದ್ದರು.
ಆಗ ಇಲ್ಲಿನ ಪತ್ರಕರ್ತರೊಬ್ಬರು 'ಸೆರೆವಾಸದ ಅನುಭವ ಹೇಗಿತ್ತು?' ಎಂದು ಪ್ರಶ್ನಿಸಿದ್ದರು. ಅದಕ್ಕೆ ಅವರು 'ಈ ಸಮ್ಮೇಳನದಲ್ಲಿ ನಾನು ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡಲು ಬಯಸುವುದಿಲ್ಲ' ಎಂದು ಅವರು ಉತ್ತರಿಸಿದ್ದರು. ಆದರೆ ನೀವು ಮಾತ್ರ ನಿಮ್ಮ ಕೇಂಬ್ರಿಡ್ಜ್ ಭಾಷಣದಿಂದಾಗಿ ಭಾರತದ ಮಾಧ್ಯಮಗಳಿಂದ ದೂಷಿಸಲ್ಪಡುತ್ತೀರಿ ಎಂದು ಹೇಳಿದ್ದಾರೆ.
ಇಂದಿರಾ ಗಾಂಧಿಯಿಂದ ಪಾಠ ಕಲಿಯಿರಿ
ಮುಂದುವರಿದು, " ಶ್ರೀಮತಿ ಇಂದಿರಾ ಗಾಂಧಿಯವರು ಅಂದು ಹೇಳಿದ ಮಾತನ್ನು ನೀವು ಸ್ವಲ್ಪ ಪಾಠವನ್ನಾಗಿ ತೆಗೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾನು ನಿಮ್ಮ ಹಿತೈಷಿ ಮತ್ತು ನೀವು ಭಾರತದ ಪ್ರಧಾನಿಯಾಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ " ಎಂದು ಗುಪ್ತಾ ರಾಹುಲ್ ಗಾಂಧಿಯಲ್ಲಿನ ರಾಜಕೀಯ ಚಾಣಾಕ್ಷತೆಯ ಕೊರತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.
ಕೇಂಬ್ರಿಡ್ಜ್ನಲ್ಲಿ ರಾಹುಲ್ ಹೇಳಿದ್ದೇನು?
ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ನಲ್ಲಿ 21ನೇ ಶತಮಾನದಲ್ಲಿ ಆಲಿಕೆಯ ಕಲಿಕೆ (Learning to Listen in the 21st Century) ವಿಚಾರದ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ರಾಹುಲ್ ಗಾಂಧಿ ಉಪನ್ಯಾಸ ನೀಡಿದ್ದರು. ಈ ವೇಳೆ " ಭಾರತೀಯ ಪ್ರಜಾತಂತ್ರ ವ್ಯವಸ್ಥೆ ಆಕ್ರಮಣಕ್ಕೊಳಗಾಗಿದೆ. ಪ್ರಜಾಪ್ರಭುತ್ವ ಮೇಲಿನ ಆಕ್ರಮಣವನ್ನು ಎದುರಿಸಲು ನಾವು ಯತ್ನಿಸುತ್ತಿದ್ದೇವೆ. ವಿಪಕ್ಷ ನಾಯಕರ ಮೇಲೆ ಸರ್ಕಾರ ಗೂಢಚಾರಿಕೆ ಮಾಡಲು ಪೆಗಾಸಸ್ ಬಳಸುತ್ತಿದೆ. ಫೋನ್ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದ್ದು, ಫೋನ್ನಲ್ಲಿ ಮಾತನಾಡುವಾಗ ಜಾಗ್ರತೆಯಿಂದ ಇರುವಂತೆ ಗುಪ್ತಚರ ಅಧಿಕಾರಿಗಳು ನನಗೆ ಎಚ್ಚರಿಕೆ ನೀಡಿದ್ದರು " ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು.
ಮಾಧ್ಯಮ, ತನಿಖಾ ಸಂಸ್ಥೆಗಳ ದುರ್ಬಳಕೆ
ಇದೇ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ರಾಹುಲ್ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು. ಅಧಿಕಾರ ಬಳಸಿ ಪ್ರತಿಪಕ್ಷಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗುತ್ತಿದೆ. ನನ್ನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾಧ್ಯಮ ಮತ್ತು ಪ್ರಜಾಪ್ರಭುತ್ವದ ಮೇಲೆ ಈ ರೀತಿಯ ಆಕ್ರಮಣ ನಡೆಯುತ್ತಿರುವಾಗ ಪ್ರತಿಪಕ್ಷಗಳು ಜನರೊಂದಿಗೆ ಸಂವಹನ ನಡೆಸುವುದು ತುಂಬಾ ಕಷ್ಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ