ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್ಗಳಲ್ಲಿ ಅಡುಗೆ ಕಾರ್ಯಕ್ರಮಗಳಿಗೇನೂ ಬರವಿಲ್ಲ. ಯಾವ ಅಡುಗೆ ಬೇಕೆಂದು ಟೈಪ್ ಮಾಡಿದರೆ ಸಾವಿರಾರು ವಿಡಿಯೋಗಳು ಬರುತ್ತವೆ. ಹಾಗೇ, ಕುಕಿಂಗ್ ಶೋನಲ್ಲಿ ನಾನಾ ಕ್ಷೇತ್ರದ ಅತಿಥಿಗಳನ್ನು ಕರೆಸಿ, ಅಡುಗೆ ಮಾಡಿಸುವ ಟ್ರೆಂಡ್ ಶುರುವಾಗಿದೆ. ಆದರೆ, ತಮಿಳುನಾಡಿನ ಪ್ರಸಿದ್ಧ ಯೂಟ್ಯೂಬ್ ಅಡುಗೆ ಚಾನೆಲ್ ವಿಲೇಜ್ ಕುಕಿಂಗ್ ಚಾನೆಲ್ಗೆ ವಿಶೇಷ ಅತಿಥಿಯೊಬ್ಬರು ಬಂದಿದ್ದರು. ಅವರೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ! ಹೌದು, ರಾಹುಲ್ ಗಾಂಧಿ 'ವಿಲೇಜ್ ಕುಕಿಂಗ್ ಚಾನೆಲ್'ನ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿನ ಜನರೊಂದಿಗೆ ಮಶ್ರೂಮ್ ಬಿರಿಯಾನಿಯನ್ನು ಸವಿದ ವಿಡಿಯೋ ಈಗ ವೈರಲ್ ಆಗಿದೆ.
ತಮಿಳಿನ Village Cooking Channel'ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. 71 ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದಿರುವ ಈ ಚಾನೆಲ್ನ ಅಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅಲ್ಲಿನ ಜನರ ಜೊತೆ ಕೆಲಕಾಲ ಮಾತುಕತೆಯನ್ನೂ ನಡೆಸಿದ್ದಾರೆ. ಅಲ್ಲದೆ, ತಾವೇ ಖುದ್ದಾಗಿ ಆ ಬಿರಿಯಾನಿಗೆ ರಾಯ್ತಾ ಸಿದ್ಧಪಡಿಸಿದ್ದಾರೆ. ಕಾಡಿನ ಮಧ್ಯೆ ಸೌದೆ ಒಲೆಯಲ್ಲಿ ಸಿದ್ಧವಾದ ಬಿರಿಯಾನಿಯನ್ನು ಬಾಳೆ ಎಲೆಯಲ್ಲಿ ಬಡಿಸಿಕೊಂಡು ಸವಿದ ರಾಹುಲ್ ಗಾಂಧಿ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಗಲವಾದ ಸೌದೆ ಒಲೆಯಲ್ಲಿ ದೊಡ್ಡದಾದ ಬಾಣಲಿಯಲ್ಲಿ ತಯಾರಾದ ಮಶ್ರೂಮ್ ಬಿರಿಯಾನಿಯನ್ನು ಮೆಚ್ಚಿದ ರಾಹುಲ್ ಗಾಂಧಿ ಅದನ್ನು ಹೇಗೆ ಸಿದ್ಧಪಡಿಸಲಾಗುವುದು ಎಂಬುದನ್ನು ಕೂಡ ಕೇಳಿ ತಿಳಿದುಕೊಂಡರು. ಅಲ್ಲದೆ, ತಾವು ಕೂಡ ವಿಲೇಜ್ ಕುಕಿಂಗ್ ಚಾನೆಲ್ ನೋಡುವುದಾಗಿಯೂ ಹೇಳಿದರು. ನೀಲಿ ಟಿ-ಶರ್ಟ್, ಪ್ಯಾಂಟ್ ಧರಿಸಿ ಸಿಂಪಲ್ ಆಗಿ ಬಂದಿದ್ದ ರಾಹುಲ್ ಗಾಂಧಿ ತಮಿಳುನಾಡಿನ ದೇಸಿ ಅಡುಗೆಯ ಬಗ್ಗೆಯೂ ಮಾಹಿತಿ ಪಡೆದರು. ಅವರ ಜೊತೆಗೆ ತಮಿಳುನಾಡಿನ ಕರೂರ್ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಭಾಗವಹಿಸಿ, ಇಂಗ್ಲಿಷ್ನಲ್ಲಿ ಮಾಹಿತಿ ನೀಡಿದರು.
ರಾಯ್ತಾ ಮಾಡುವಾಗ ಅದಕ್ಕೆ ಹಾಕುವ ಸಾಮಗ್ರಿಗಳ ತಮಿಳು ಹೆಸರುಗಳನ್ನು ಕೇಳಿ ತಿಳಿದುಕೊಂಡ ರಾಹುಲ್ ಗಾಂಧಿ ವಿಲೇಜ್ ಕುಕಿಂಗ್ ಚಾನೆಲ್ನ ಶೆಫ್ ರೀತಿಯಲ್ಲೇ ಆ ಹೆಸರುಗಳನ್ನು ಹೇಳುತ್ತಾ ಅಡುಗೆ ಮಾಡಿದ್ದು ವಿಶೇಷವಾಗಿತ್ತು. ಅಡುಗೆಯ ನಂತರ ಚಾಪೆ ಮೇಲೆ ಕುಳಿತು, ಆ ಯೂಟ್ಯೂಬ್ ಚಾನೆಲ್ನವರೊಂದಿಗೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ನಿಮಗೆ ಬೇರೆ ದೇಶಕ್ಕೆ ಹೋಗಿ ಅಡುಗೆ ಮಾಡಬೇಕೆಂಬ ಕನಸಿಲ್ಲವೇ? ಎಂದು ಕೇಳಿದರು. ಹಾಗೇ, ನನ್ನ ಆತ್ಮೀಯ ಸ್ನೇಹಿತನೊಬ್ಬ ಅಮೆರಿಕದಲ್ಲಿದ್ದಾನೆ. ಆತನಿಗೆ ನಾನು ಹೇಳಿ ನಿಮ್ಮ ಅಡುಗೆ ಶೋ ನಡೆಸಲು ವ್ಯವಸ್ಥೆ ಮಾಡಿಸುತ್ತೇನೆ. ಅಮೆರಿಕಕ್ಕೂ ಹೋಗಿ ಭಾರತೀಯ ಅಡುಗೆ ಮಾಡಿಬನ್ನಿ. ಹಾಗೇ, ಕರ್ನಾಟಕ, ಕೇರಳ ಸೇರಿದಂತೆ ಭಾರತದ ಬೇರೆ ರಾಜ್ಯಗಳಿಗೂ ಹೋಗಿ ಅಡುಗೆ ಮಾಡುವಂತೆ ಸಲಹೆ ನೀಡಿದರು.
ರಾಹುಲ್ ಗಾಂಧಿ ಬಂದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ವಿಲೇಜ್ ಕುಕಿಂಗ್ ಚಾನೆಲ್ ಟೀಂನವರು ತಮ್ಮ ಚಾನೆಲ್ನ ಸಬ್ಸ್ಕ್ರೈಬರ್ಗಳಿಗೆ ಒಂದು ದಿನ ಔತಣಕೂಟ ಆಯೋಜಿಸಬೇಕೆಂಬ ಕನಸಿದೆ ಎಂದು ಹೇಳಿದರು. ನೀವು ಊಟ ಆಯೋಜಿಸಿದಾಗ ನನ್ನನ್ನೂ ಕರೆಯಿಸಿ, ನಾನೂ ಬರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಮಶ್ರೂಮ್ ಬಿರಿಯಾನಿಯನ್ನು ಸವಿದ ರಾಹುಲ್ ಗಾಂಧಿ ತಮಿಳಿನಲ್ಲೇ ನಲ್ಲ ಇರುಕು' (ತುಂಬ ಚೆನ್ನಾಗಿದೆ) ಎಂದು ಹೇಳಿ ಮೆಚ್ಚುಗೆ ಸೂಚಿಸಿದರು.
ಅಂದಹಾಗೆ, ರಾಹುಲ್ ಗಾಂಧಿ ತಮಿಳುನಾಡಿನಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪ್ರಚಾರ ನಡೆಸಲು ಪ್ರವಾಸ ನಡೆಸುತ್ತಿದ್ದಾರೆ. ಕೊಯಮತ್ತೂರು, ತಿರುಪ್ಪೂರ್ಗೆ ತೆರಳಿರುವ ರಾಹುಲ್ ಗಾಂಧಿ ಅಲ್ಲಿನ ಜನರ ಜೊತೆ ಸಂವಾದ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ