ಚಂಡೀಗಢ (ಆ.19): ಸಟ್ಲೆಜ್-ಯಮುನಾ ನದಿಯನ್ನು ಸೇರಿಸುವ ಕಾಲುವೆ ಯೋಜನೆಗೆ ಈ ಮೊದಲಿನಿಂದಲೂ ಪಂಜಾಬ್ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಈಗ ಈ ಯೋಜನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಒಂದೊಮ್ಮೆ ಸಟ್ಲೆಜ್ ನದಿ ನೀರು ಹರಿಯಾಣಾಗೆ ಹರಿದು ಹೋದರೆ ಇಡೀ ಪಂಜಾಬ್ ಹೊತ್ತುರಿಯುತ್ತದೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಗಲಭೆಗಳು ಏಳುತ್ತವೆ ಎನ್ನುವ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹರಿಯಾಣ ಹಾಗೂ ಪಂಜಾಬ್ ಮಾತುಕತೆ ನಡೆಸಬೇಕು. ಈ ಮಾತುಕತೆಗೆ ಕೇಂದ್ರ ಸರ್ಕಾರ ಸಹಕಾರ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಸುಪ್ರೀಂ ಕೋರ್ಟ್ನ ಆದೇಶದಂತೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಅಮರಿಂದರ್ ಸಿಂಗ್ ಮಂಗಳವಾರ ಸಭೆ ಸೇರಿದ್ದರು. ಆದರೆ, ಈ ಸಭೆ ಫಲಪ್ರದವಾಗಿಲ್ಲ.
ಸಭೆಯಲ್ಲಿ ಮಾತನಾಡಿದ್ದ ಗಜೇಂದ್ರ ಸಿಂಗ್ ಶೇಖಾವತ್, ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಈ ಯೋಜನೆಯನ್ನು ನೋಡಬೇಕು. ಅಂದಾಗ ಮಾತ್ರ ಎಲ್ಲವೂ ಸರಿಯಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಅಮರಿಂದರ್ ಸಿಂಗ್, ಈ ಯೋಜನೆ ಪೂರ್ಣಗೊಂಡರೆ ಇಡೀ ಪಂಜಾಬ್ ಹೊತ್ತುರಿಯುತ್ತದೆ. ಆಗ ಅದು ರಾಷ್ಟ್ರೀಯ ಸಮಸ್ಯೆ ಆಗಿ ಮಾರ್ಪಡುತ್ತದೆ. ಇದರ ಪರಿಣಾಮ ಹರಿಯಾಣ ಹಾಗೂ ರಾಜಸ್ಥಾನದ ಮೇಲೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆದರೆ, ಈ ಕಾಲುವೆ ನಿರ್ಮಾಣವಾಗಲೇ ಬೇಕು ಎನ್ನುವ ವಾದವನ್ನು ಮನೋರಹರ್ ಲಾಕ್ ಖಟ್ಟರ್ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನ ಸ್ಟೆರ್ಲೈಟ್ ಕಾಪರ್ ಘಟಕ ಪುನಾರಂಭಕ್ಕೆ ಮದ್ರಾಸ್ ಹೈಕೋರ್ಟ್ ನಕಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ