Pulwama Attack: ಇನ್ನೂ ಮಾಸದ ಪುಲ್ವಾಮಾ ದಾಳಿ ಕಹಿನೆನಪು! ಅಲ್ಲಿಂದ ಇಲ್ಲಿವರೆಗೆ ಆಗಿದ್ದೇನು?

ಪುಲ್ವಾಮ ಅಟ್ಯಾಕ್​

ಪುಲ್ವಾಮ ಅಟ್ಯಾಕ್​

ಪಾಪಿ ಪಾಕ್‌ನ ಕುತಂತ್ರಿ ಕೆಲಸ ನೆನಪಿಸಿಕೊಂಡರೆ ಇನ್ನೂ ಸಹ ಭಾರತೀಯರ ರಕ್ತ ಕುದಿಯುತ್ತದೆ. ನಮ್ಮನ್ನು ಕಾಯುವ ಯೋಧರ ಕ್ರೂರ ಮರಣ ಪ್ರತಿ ಭಾರತೀಯನು ಮರೆಯುವುದೇ ಇಲ್ಲ.

  • Trending Desk
  • 4-MIN READ
  • Last Updated :
  • Share this:

ಫೆಬ್ರವರಿ 14 ಎಂದರೆ ಎಲ್ಲರಿಗೂ ನೆನಪಾಗೋದೆ ಈ ಪ್ರೇಮಿಗಳ ದಿನ. ಆದರೆ ಪ್ರೇಮಿಗಳ ದಿನವನ್ನೇ ಮರೆಸಿ ಕರಾಳ ದಿನಕ್ಕೆ ಕಾರಣವಾದ ನಾಲ್ಕು ವರ್ಷಗಳ ಹಿಂದಿನ ಘಟನೆ ಅಕ್ಷರಶಃ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪಾಕ್‌ ವಿರುದ್ಧ ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಭಾರತೀಯ ಮನೆಗಳಲ್ಲಿ ಶೋಕ ಮಡುಗಟ್ಟಿತ್ತು. ಪಾಕ್ (Pak)‌ ವಿರುದ್ಧ ಸೇಡು ತೀರಿಸಿಕೊಳ್ಳಲು ಸರ್ಕಾರ ಯೋಜನೆಗಳನ್ನು ಹಮ್ಮಿಕೊಂಡಿತ್ತು. ಹೌದು, ಉಗ್ರರ ಅಟ್ಟಹಾಸಕ್ಕೆ ಗಡಿಯಲ್ಲಿ ನಮ್ಮ ಯೋಧರ ರಕ್ತ ಹರಿದ ಭೀಕರ ಘಟನೆಯೇ ಈ ಪುಲ್ವಾಮಾ ದಾಳಿ (Pulwama Attack). ಕಳೆದ ನಾಲ್ಕು ವರ್ಷಗಳ ಹಿಂದೆ ಪಾಪಿ ಪಾಕಿಸ್ತಾನ ಹಾಗೂ ಕುತಂತ್ರಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಅಟ್ಟಹಾಸದಿಂದ 40 ಯೋಧರು ಪ್ರಾಣ ಕಳೆದುಕೊಂಡ ಮತ್ತು ಹಲವರು ಗಾಯಗೊಂಡ ಕರಾಳ ದಿನ.


ಕರಾಳ ದಿನಕ್ಕೆ ನಾಲ್ಕು ವರ್ಷ


ಈ ಕರಾಳ ದಿನಕ್ಕೆ ಇಂದಿಗೆ ನಾಲ್ಕು ವರ್ಷ. ಪಾಪಿ ಪಾಕ್‌ನ ಕುತಂತ್ರಿ ಕೆಲಸ ನೆನಪಿಸಿಕೊಂಡರೆ ಇನ್ನೂ ಸಹ ಭಾರತೀಯರ ರಕ್ತ ಕುದಿಯುತ್ತದೆ. ನಮ್ಮನ್ನು ಕಾಯುವ ಯೋಧರ ಕ್ರೂರ ಮರಣ ಪ್ರತಿ ಭಾರತೀಯನು ಮರೆಯುವುದೇ ಇಲ್ಲ. 14 ಫೆಬ್ರವರಿ 2019ರಂದು ನಡೆದ ಅಂದಿನ ಘಟನೆ ಏನು? ಆದಾದನಂತರ ನಡೆದ ಬೆಳವಣಿಗೆಗಳೇನು ಎಂಬುದನ್ನು ನಾವಿಲ್ಲಿ ನೋಡೋಣ.


2019ರ ಫೆಬ್ರವರಿ 14ರಂದು ದಾಳಿ ಹೇಗೆ ನಡೆಯಿತು?


ಸರಿಯಾಗಿ ಇಂದಿಗೆ ನಾಲ್ಕು ವರ್ಷಗಳ ಹಿಂದೆ ಅಂದರೆ ಫೆಬ್ರವರಿ 14ರ ಮದ್ಯಾಹ್ನ 3 ಗಂಟೆ ಸಮಯ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಶ್ರೀನಗರಕ್ಕೆ 2500 ಕ್ಕೂ ಹೆಚ್ಚು ಭಾರತೀಯ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ 78 ಸೇನಾ ವಾಹನಗಳು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಲಿನಲ್ಲಿ ಸಾಗುತ್ತಿದ್ದವು.


ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯೊಂದು ನೇರವಾಗಿ ಸೇನಾ ವಾಹನವೊಂದಕ್ಕೆ ಬಂದು ಅಪ್ಪಳಿಸಿತು.


ಆತ್ಮಹತ್ಯಾ ಬಾಂಬರ್‌ನಿಂದ ದಾಳಿ ನಡೆಯುತ್ತಿದ್ದಂತೆ ಸೇನಾ ವಾಹನ ಹೊತ್ತಿ ಉರಿದಿತ್ತು. ಪರಿಣಾಮ ಸೇನಾ ವಾಹನದಲ್ಲಿದ್ದ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರೆ ಇನ್ನುಳಿದ ಸೈನಿಕರು ಗಾಯಗೊಂಡಿದ್ದರು.


ಇದನ್ನೂ ಓದಿ: ರಾಹುಲ್ ಗಾಂಧಿ ಹೆಸರಿನಲ್ಲಿರುವ 'ಗಾಂಧಿ' ಸರ್​ನೇಮ್ ಯಾರದ್ದು? ನೆಹರೂ ಕುಟುಂಬದ ಬಗ್ಗೆ ತಿಳಿಯಬೇಕಾದ ಅಂಶಗಳಿವು!


2019 ರ ಪುಲ್ವಾಮಾ ದಾಳಿ ಎಂದೂ ಕರೆಯಲ್ಪಡುವ ಈ ದಾಳಿಯು 1989 ರಿಂದಾಚೆಗೆ ಕಾಶ್ಮೀರದಲ್ಲಿ ಭಾರತದ ಭದ್ರತಾ ಸಿಬ್ಬಂದಿಯ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದೆ.


ಕರ್ನಾಟಕ ಸೇರಿ ಹಲವು ರಾಜ್ಯಗಳ ಯೋಧರು ಹುತಾತ್ಮ


ಘಟನೆಯಲ್ಲಿ ಮೃತಪಟ್ಟ ಭದ್ರತಾ ಸಿಬ್ಬಂದಿಗೆ ಅವರ ತವರು ರಾಜ್ಯಗಳಲ್ಲಿ ಸರ್ಕಾರಿ ಅಂತ್ಯಕ್ರಿಯೆ ನಡೆಸಲಾಯಿತು. ಉತ್ತರ ಪ್ರದೇಶದ ಒಟ್ಟು 12 ಯೋಧರು ಸೇರಿ ರಾಜಸ್ತಾನ, ಪಂಜಾಬ್, ಪಶ್ಚಿಮ ಬಂಗಾಳದ, ಒಡಿಶಾದ, ಉತ್ತರಾಖಂಡ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು,, ಅಸ್ಸಾಂ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಕೇರಳ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಕರ್ನಾಟಕದ ತಲಾ ಓರ್ವ ಯೋಧರು ಹುತಾತ್ಮರಾಗಿದ್ದರು. ಯೋಧರ ಕುಟುಂಬಕ್ಕೆ 12 ಲಕ್ಷ ಪರಿಹಾರ ಮತ್ತು ಮುಂದಿನ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳನ್ನು ಪಂಜಾಬ್ ಸರ್ಕಾರ ಘೋಷಿಸಿತು.


ದಾಳಿಯನ್ನು ಒಪ್ಪಿಕೊಂಡಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆ


ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪಾಕಿಸ್ತಾನದಲ್ಲಿ ಬೇರೂರಿರುವ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ಪುಲ್ವಾಮಾ ದಾಳಿಗೆ ತಾವೇ ಹೊಣೆ ಎಂದು ಹೇಳಿಕೊಂಡಿತ್ತು.


ಪಾಕ್‌ ವಿರುದ್ಧ ರಾಜತಾಂತ್ರಿಕ ದಾಳಿ ನಡೆಸಿದ ಭಾರತ


* ಘಟನೆ ಬಳಿಕ ಪಾಕ್‌ ವಿರುದ್ಧ ರಾಜತಾಂತ್ರಿಕ ದಾಳಿ ನಡೆಸಿದ ಭಾರತ ಪಾಕಿಸ್ತಾನಕ್ಕೆ ನೀಡಿದ್ದ 'ಪರಮಾಪ್ತ ದೇಶ' ಸ್ಥಾನಮಾನವನ್ನು ತಕ್ಷಣ ಹಿಂತೆಗೆದುಕೊಂಡಿತು.ಪಾಕಿಸ್ತಾನವನ್ನು ಅಂತಾರಾಷ್ಟ್ರೀಯವಾಗಿ ಸಂಪೂರ್ಣ ಏಕಾಂಗಿಯಾಗಿಸಲು ಸಾಧ್ಯವಾದ ಎಲ್ಲಾ ರಾಜತಾಂತ್ರಿಕ ಪ್ರಯತ್ನವನ್ನು ಭಾರತ ಮಾಡಿತು.


* ಭಾರತಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಪಾಕಿಸ್ತಾನಿ ಸರಕುಗಳ ಮೇಲೆ ಭಾರತವು 200% ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಿತು.


* ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆ ಎಫ್‌ಎಟಿಎಫ್‌ (Financial Action Task Force- FATF) ಅಕ್ಟೋಬರ್‌ ವರೆಗೂ ಪಾಕಿಸ್ತಾನವನ್ನು 'ಬೂದು ಪಟ್ಟಿ' (ಗ್ರೇ ಲಿಸ್ಟ್) ಯಲ್ಲಿಡಲು ನಿರ್ಧರಿಸಿತ್ತು.


ಪುಲ್ವಾಮಾ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ, ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಹೊರಗಿಡಬಾರದು ಎಂದು ಭಾರತ ಬಲವಾಗಿ ಪ್ರತಿಪಾದಿಸಿದ ಬಳಿಕ ಎಫ್‌ಎಟಿಎಫ್‌ ಈ ತೀರ್ಮಾನ ಕೈಗೊಂಡಿತ್ತು.


* ಗುಪ್ತಚರ ಮಾಹಿತಿಯ ನಂತರ, 55 ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಭಾರತದ ವಿಶೇಷ ಕಾರ್ಯಾಚರಣೆ ತಂಡವನ್ನು ಒಳಗೊಂಡ ಜಂಟಿ ಪಡೆ ಫೆಬ್ರವರಿ 18 ರಂದು ಬೆಳ್ಳಂಬೆಳಗ್ಗೆ ಪುಲ್ವಾಮಾದಲ್ಲಿ ದುಷ್ಕರ್ಮಿಗಳ ಹುಡುಕಾಟದಲ್ಲಿ ತೊಡಗಿಸಿಕೊಂಡು ಇಬ್ಬರು ಭಯೋತ್ಪಾದಕರು ಮತ್ತು ಇಬ್ಬರು ಬೆಂಬಲಿಗರನ್ನು ಸುಟ್ಟು ಹಾಕಿತು.


* ಪುಲ್ವಾಮಾ ದಾಳಿಯ ನಂತರ, ಭಾರತದ ವಿವಿಧ ಪ್ರದೇಶಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸ್ಥಳೀಯರು ಹಿಂಸೆ ನೀಡಲು ಆರಂಭಿಸಿದರು.


ಬಾಲಾಕೋಟ್‌ ದಾಳಿ ಮೂಲಕ ಭಾರತ ತಿರುಗೇಟು


ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಭಾರತ ಬಾಲಾಕೋಟ್‌ ದಾಳಿಯನ್ನು ನಡೆಸಿತು. ಪಾಕಿಸ್ತಾನದ ಖೈಬರ್​ ಪಖ್ತುನ್​ಖ್ವಾದ ಬಾಲಾಕೋಟ್​ನಲ್ಲಿರುವ ಜೈಷ್​ ಉಗ್ರಗಾಮಿಗಳ ತಾಣಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದ್ರೆ ಫೆಬ್ರವರಿ 26 ರಂದು ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು.


ಫೆಬ್ರವರಿ 26 ರಂದು ಐಎಎಫ್‌ನ ಹನ್ನೆರಡು ಮಿರಾಜ್ 2000 ಜೆಟ್‌ಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಬಾಂಬ್‌ಗಳನ್ನು ಎಸೆದವು.


ವರದಿಗಳ ಪ್ರಕಾರ ಜೈಶ್-ಎ-ಮೊಹಮ್ಮದ್ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ಹಲವಾರು ಭಯೋತ್ಪಾದಕರನ್ನು ಕೊಂದಿರುವುದಾಗಿ ಭಾರತ ಹೇಳಿತ್ತು.


ಅಪಾರ ಸಂಖ್ಯೆಯಲ್ಲಿ ಜೈಶ್ ಜೈಷ್-ಎ-ಮೊಹಮ್ಮದ್ ಸಂಘಟನೆಯ 300ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತಿದ್ದಾರೆ ಎಂದಿದ್ದ ಭಾರತದ ವರದಿಗಳನ್ನು ನಿರಾಕರಿಸಿದ ಪಾಕ್‌, ಬಾಲಾಕೋಟ್ ದಾಳಿಯಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ ಎಂದು ವಾದಿಸಿತ್ತು.


ಫೆಬ್ರವರಿ 27 ರಂದು ಭಾರತದ ಮೇಲೆ ವೈಮಾನಿಕ ದಾಳಿ


ಹಿಂದಿನ ದಿನ ನಡೆದ ಭಾರತೀಯ ಬಾಂಬ್ ದಾಳಿಗೆ ಪ್ರತೀಕಾರವಾಗಿ, ಫೆಬ್ರವರಿ 27 ರಂದು ಮತ್ತೆ ಪಾಕಿಸ್ತಾನದ ವಾಯುಪಡೆಯು ಜಮ್ಮು ಮತ್ತು ಕಾಶ್ಮೀರದ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು.


ಅದೃಷ್ಟವಶಾತ್‌ ಈ ಘಟನೆಯಲ್ಲಿ ಭಾರತವು ಯಾವುದೇ ಹಾನಿಯನ್ನು ಅನುಭವಿಸಿಲ್ಲ ಎಂದು ಭಾರತ ಮತ್ತು ಪಾಕಿಸ್ತಾನ ಎರಡೂ ಒಪ್ಪಿಕೊಂಡಿವೆ. ಆದಾಗ್ಯೂ, ಭಾರತದ MiG-21 ಅನ್ನು ಪಾಕಿಸ್ತಾನದ ಮೇಲೆ ಹೊಡೆದುರುಳಿಸಲಾಯಿತು ಮತ್ತು ಅದರ ಪೈಲಟ್ ಅನ್ನು ಭಾರತ ಮತ್ತು ಪಾಕಿಸ್ತಾನಿ ಜೆಟ್‌ಗಳ ನಡುವಿನ ಹೋರಾಟದ ಸಮಯದಲ್ಲಿ ಸೆರೆಹಿಡಿಯಲಾಯಿತು. ಮಾರ್ಚ್ 1 ರಂದು ಪಾಕಿಸ್ತಾನ ಪೈಲಟ್ ಅನ್ನು ಬಿಡುಗಡೆ ಮಾಡಿತು.


ಜೈಶ್-ಎ-ಮುಹಮ್ಮದ್ ಸದಸ್ಯರ ಬಂಧನ


ಮಾರ್ಚ್ 5 ರಂದು ಜೈಶ್-ಎ-ಮೊಹಮ್ಮದ್ ಸದಸ್ಯರು ಸೇರಿದಂತೆ 44 ಜನರನ್ನು ಪಾಕಿಸ್ತಾನವು ಬಂಧಿಸಿದೆ. ಬಂಧಿತರಲ್ಲಿ ಕೆಲವರನ್ನು ಭಾರತವು ಪುಲ್ವಾಮಾ ಘಟನೆಯ ನಂತರ ಪಾಕಿಸ್ತಾನಕ್ಕೆ ಕಳುಹಿಸಿದ ದಾಖಲೆಯಲ್ಲಿ ಪಟ್ಟಿಮಾಡಿದೆ.


ಬಂಧಿತರನ್ನು ಕನಿಷ್ಠ 14 ದಿನಗಳ ಕಾಲ ಬಂಧಿಸಲಾಗುವುದು ಮತ್ತು ಭಾರತವು ಹೆಚ್ಚುವರಿ ಪುರಾವೆಗಳನ್ನು ನೀಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಹೇಳಿತ್ತು.


ಜೆಇಎಂ ನಾಯಕ ಮಸೂದ್ ಅಜರ್ ಪುತ್ರ ಹಮದ್ ಅಜರ್ ಮತ್ತು ಅವರ ಸಹೋದರ ಅಬ್ದುಲ್ ರೌಫ್ ಸೇರಿದಂತೆ ಅವರ ಕುಟುಂಬ ಸದಸ್ಯರನ್ನು ಬಂಧಿಸಲಾಯಿತು.


ಬಾಂಬ್ ದಾಳಿಯಲ್ಲಿ ಬಳಸಿದ ಕಾರು ಪ್ರಾಥಮಿಕ ತನಿಖೆಗಳ ಪ್ರಕಾರ, 80 ಕಿಲೋಗ್ರಾಂಗಳಷ್ಟು (180 ಪೌಂಡ್) ಸ್ಫೋಟಕ ಆರ್‌ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ಸೇರಿದಂತೆ 300 ಕಿಲೋಗ್ರಾಂಗಳಷ್ಟು (660 ಪೌಂಡ್) ಸ್ಫೋಟಕಗಳನ್ನು ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ.


ಚಾರ್ಜ್ ಶೀಟ್‌ನಲ್ಲಿ 19 ಆರೋಪಿಗಳ ಹೆಸರು


ರಾಷ್ಟ್ರೀಯ ತನಿಖಾ ಸಂಸ್ಥೆಯು ಆತ್ಮಹತ್ಯಾ ಬಾಂಬರ್‌ನ ಗುರುತನ್ನು ನಿರ್ಧರಿಸಲು ಮತ್ತು ದೃಢೀಕರಿಸಲು ಸಾಧ್ಯವಾಯಿತು ಏಕೆಂದರೆ ಆದಿಲ್ ಅಹ್ಮದ್ ದಾರ್‌ನ ತಂದೆ ಮತ್ತು ದಾಳಿಯಲ್ಲಿ ಬಳಸಿದ "ಕಾರಿನ ಅಲ್ಪ ಭಾಗಗಳ" ನಡುವಿನ DNA ಹೊಂದಾಣಿಕೆಗಳು ಹೊಂದಾಣಿಕೆ ಆಗಿದ್ದವು.




ಭಾರತೀಯ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. ಆಗಸ್ಟ್ 2020 ರಲ್ಲಿ NIA ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ 19 ಆರೋಪಿಗಳನ್ನು ಹೆಸರಿಸಲಾಗಿತ್ತು. ಇದರಲ್ಲಿ ಏಳು ಆರೋಪಿಗಳನ್ನು ಆಗಸ್ಟ್ 2021 ರ ವೇಳೆಗೆ ಭಾರತೀಯ ಭದ್ರತಾ ಪಡೆಗಳು ಬಲಿ ಪಡೆದಿದ್ದರೆ ಏಳು ಮಂದಿಯನ್ನು ಬಂಧಿಸಲಾಗಿತ್ತು.

First published: