news18-kannada Updated:January 21, 2021, 12:33 PM IST
ರೈತರ ಪ್ರತಿಭಟನೆ
ನವದೆಹಲಿ(ಜ. 21): ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ದೆಹಲಿ ಗಡಿಗಳಲ್ಲಿ ನಿರಂತರವಾಗಿ 57 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದ ದಿನ ಜನವರಿ 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ಇಂದು ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
2020ರ ನವೆಂಬರ್ 26ರಿಂದ ನಿರಂತರವಾಗಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ 9 ಸುತ್ತು ಮಾತುಕತೆ ನಡೆಸಿತ್ತು. 9 ಸಭೆಗಳಲ್ಲೂ ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ಹಠಮಾರಿತನ ಪ್ರದರ್ಶಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನಾ ರೈತರು ಜನವರಿ 26ರಂದು ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ನಿಶ್ವಯಿಸಿದ್ದರು. 'ಪ್ರತಿಷ್ಠಿತ ಗಣರಾಜ್ಯೋತ್ಸವದ ದಿನ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಮಾಡುತ್ತಾರೆ' ಎಂಬ ಬೆದರಿಕೆಗೆ ಮಣಿದಿರುವ ಕೇಂದ್ರ ಸರ್ಕಾರ ನಿನ್ನೆ (ಜನವರಿ 20) ನಡೆದ 10ನೇ ಸುತ್ತಿನ ಸಭೆಯಲ್ಲಿ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷದವರೆಗೆ ತಡೆಹಿಡಿಯುವುದಾಗಿ ಹೇಳಿದೆ. ಆದುದರಿಂದ ಈಗಾಗಲೇ ನಿರ್ಧರಿಸಿದ್ದ ಟ್ರ್ಯಾಕ್ಟರ್ ಮೆರವಣಿಗೆಯನ್ನು ಮಾಡಬೇಕೋ ಮೊಟಕು ಗೊಳಿಸಬೇಕೋ ಎಂದು ಇಂದು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: COVID-19 Vaccination: ಎರಡನೇ ಹಂತದ ಕೋವಿಡ್ ಲಸಿಕೆ ಅಭಿಯಾನದ ವೇಳೆ ಪ್ರಧಾನಿ ಮೋದಿಗೂ ಲಸಿಕೆ
ರೈತರು ನಡೆಸಿದ ಪ್ರತಿಭಟನೆಗೆ ಕಡೆಗೂ ಕೇಂದ್ರ ಸರ್ಕಾರ ಸ್ವಲ್ಪ ಮಟ್ಟಿಗೆ ಮಣಿದಿದ್ದು ತಾನು ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಒಂದೂವರೆ ವರ್ಷದ ಮಟ್ಟಿಗೆ ತಡೆಹಿಡಿಯಲು ಮತ್ತು ಆ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲು ಸಿದ್ದ ಎಂದು ಹೇಳಿರುವುದನ್ನು ನಂಬಿ ಟ್ರ್ಯಾಕ್ಟರ್ ಮೆರವಣಿಗೆಯನ್ನು ಮಾಡಬೇಕೋ ಮೊಟಕು ಗೊಳಿಸಬೇಕೋ ಎಂದು ನಿರ್ಧರಿಸಲೆಂದೇ ಇಂದು ರೈತ ಸಂಘಟನೆಗಳು ಪ್ರತಿಭಟನೆ ನಡೆಯುತ್ತಿರುವ ದೆಹಲಿ ಗಡಿಯಲ್ಲಿ ಚರ್ಚೆ ಮಾಡಲಿವೆ. ಚರ್ಚೆಯ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಿವೆ.
ನಿನ್ನೆ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ 10ನೇ ಸಭೆಯ ಬಳಿಕ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ, ಕೇಂದ್ರ ಸರ್ಕಾರವು ಒಂದೂವರೆ ವರ್ಷದ ಮಟ್ಟಿಗೆ ತಡೆಹಿಡಿಯಲು ಮತ್ತು ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲು ಸಿದ್ದ ಎಂದು ಸಭೆಯಲ್ಲಿ ಹೇಳಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಒಂದೂವರೆ ವರ್ಷದ ಮಟ್ಟಿಗೆ ಕೃಷಿ ಕಾನೂನುಗಳನ್ನು ತಡೆಹಿಡಿಯಲು ಮುಂದಾದ ಕೇಂದ್ರ ಸರ್ಕಾರ
ಇದಲ್ಲದೆ ಹಿಂದಿನ ಸಭೆಗಳಲ್ಲಿ ಚರ್ಚೆಯಾಗಿದ್ದಂತೆ ಕನಿಷ್ಟ ಬೆಂಬಲ ಬೆಲೆ ಮತ್ತು ಕೃಷಿ ಕಾನೂನುಗಳ ಬಗ್ಗೆ ಸಮಿತಿಯನ್ನು ರಚಿಸುವುದಕ್ಕೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದಾಗಿ ಹನ್ನನ್ ಮೊಲ್ಲಾ ತಿಳಿಸಿದ್ದರು. ಇದರಿಂದಾಗಿ 'ವಿವಾದದ ಚೆಂಡು' ರೈತರ ಅಂಗಳ ತಲುಪಿದ್ದು ಇಂದು ರೈತ ಸಂಘಟನೆಗಳು ಸಭೆ ಕರೆಯಲಾಗಿದೆ.ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಒಪ್ಪಿದರೆ ಜನವರಿ 26ರಂದು ಟ್ರ್ಯಾಕ್ಟರ್ ಮೆರವಣಿಗೆ ಮಾಡುವ ನಿರ್ಧಾರವನ್ನು ಕೈಬಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲೂ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಮುಂದಿಟ್ಟಿರುವ ಪ್ರಸ್ತಾಪವನ್ನು ಒಪ್ಪಿದರೂ ಬಹುತೇಕ ಟ್ರ್ಯಾಕ್ಟರ್ ಮೆರವಣಿಗೆಯಿಂದ ಹಿಂದೆ ಸರಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ವರದಿ: ಧರಣೀಶ್ ಬೂಕನಕೆರೆ
Published by:
Vijayasarthy SN
First published:
January 21, 2021, 12:33 PM IST