ಲಕ್ನೋ: ಉತ್ತರ ಪ್ರದೇಶದ (Uttar Pradesh) ಶಿಕ್ಷಣ ಮಂಡಳಿ (Education Board) 10 ಮತ್ತು 12ನೇ ತರಗತಿ ಫಲಿತಾಂಶವನ್ನು (Exam Results) ಬಿಡುಗಡೆ ಮಾಡಿದೆ. ಈ ವರ್ಷಜೈಲಿನಲ್ಲಿದ್ದುಕೊಂಡು ಪರೀಕ್ಷೆ ತೆಗೆದುಕೊಂಡಿದ್ದ 59 ಕೈದಿಗಳು ಪ್ರೌಢಶಾಲಾ (High School) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು 45 ಕೈದಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಿಂದಾಗಿ ಜೈಲಿನಲ್ಲಿರುವ ಕೈದಿಗಳಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಯುಪಿ ಬೋರ್ಡ್ 10 ಮತ್ತು 12 ನೇ ಫಲಿತಾಂಶವನ್ನು ಬುಧವಾರ ಮಧ್ಯಾಹ್ನ ಬಿಡುಗಡೆ ಮಾಡಿತ್ತು. ಬುಧವಾರ ಬಿಡುಗಡೆಯಾಗಿರುವ ಫಲಿತಾಂಶದ ಪ್ರಕಾರ, ಈ ವರ್ಷ ಪ್ರೌಢಶಾಲೆಯ ಫಲಿತಾಂಶವು ಶೇಕಡಾ 1.6 ರಷ್ಟು ಹೆಚ್ಚಾಗಿದ್ದರೆ, 12 ತರಗತಿ ಫಲಿತಾಂಶದಲ್ಲಿ ಶೇ.9.81ರಷ್ಟು ಕಡಿಮೆಯಾಗಿದೆ. ಅಚ್ಚರಿಯ ವಿಷಯವೆಂದರೆ ದೊಡ್ಡ ಮಹಾನಗರಗಳ ಫಲಿತಾಂಶಗಳು ಕಳಪೆಯಾಗಿದ್ದು, ಸಣ್ಣ ಪಟ್ಟಣಗಳ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಪರೀಕ್ಷೆ ತೆಗೆದುಕೊಂಡಿದ್ದ 79 ಕೈದಿಗಳು
ಈ ವರ್ಷ ರಾಜ್ಯದ 25 ಜಿಲ್ಲೆಗಳ ಜೈಲುಗಳಲ್ಲಿ 79 ಕೈದಿಗಳು ಪ್ರೌಢಶಾಲೆಗಳ ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ ಪರೀಕ್ಷೆಗೆ ಹಾಜರಾದ 62 ಕೈದಿಗಳ ಪೈಕಿ 59 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. 90 ಕೈದಿಗಳು 12 ತರಗತಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಪರೀಕ್ಷೆಗೆ ಹಾಜರಾದ 65 ಕೈದಿಗಳ ಪೈಕಿ 45 ಕೈದಿಗಳು ಉತ್ತೀರ್ಣರಾಗಿದ್ದಾರೆ. ಜೈಲಿನಲ್ಲಿ ಹೈಸ್ಕೂಲ್ ಕೈದಿಗಳ ಉತ್ತೀರ್ಣ ಪ್ರಮಾಣವು 95.16 ಮತ್ತು ಇಂಟರ್ ಕೈದಿಗಳ ಉತ್ತೀರ್ಣ ಪ್ರಮಾಣ 69.23 ಎಂದು ತಿಳಿದುಬಂದಿದೆ.
ಜೀವವಾಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗೆ ಶೇ.83 ಅಂಕ
ಬರೇಲಿಯ ಸೆಂಟ್ರಲ್ ಜೈಲಿನಲ್ಲಿ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೀವಾವಧಿ ಶಿಕ್ಷೆಗೆ ತುತ್ತಾಗಿರುವ ಸೀತಾಪುರದ ನಿವಾಸಿ 50 ವರ್ಷದ ಪ್ರತಾಪ್ ಸಿಂಗ್ ಎಂಬಾತ ಹೈಸ್ಕೂಲ್ ವಿಭಾಗದಲ್ಲಿ ಜೈಲು ಪರೀಕ್ಷಾರ್ಥಿಗಳ ಪೈಕಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರು ಶೇ 83.3 ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ಇಂಟರ್ ಪರೀಕ್ಷೆ ಫಲಿತಾಂಶದಲ್ಲಿ ಅದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವರದಕ್ಷಿಣೆ ಸಾವು ಪ್ರಕರಣದ ಮತ್ತೊಬ್ಬ ಕೈದಿ 35 ವರ್ಷದ ಛೋಟೆ ಲಾಲ್ 61.1 ಪರ್ಸೆಂಟ್ ಅಂಕ ಪಡೆದು ಇಂಟರ್ ವಿಭಾಗದ ಜೈಲು ಪರೀಕ್ಷಾರ್ಥಿಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪ್ರತಾಪ್ ಸಿಂಗ್ಗೆ ಅಭಿನಂದನೆ
ಜೈಲಿನಲ್ಲಿದ್ದುಕೊಂಡೇ ಕೈದಿ ಪ್ರತಾಪ್ ಸಿಂಗ್ 600 ಅಂಕಗಳಿಗೆ 503 ಅಂಕಗಳನ್ನು ಪಡೆದು ಉತ್ತರ ಪ್ರದೇಶದ ಕೈದಿ ಪರೀಕ್ಷಾರ್ಥಿಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಈ ಸಾಧನೆಗಾಗಿ ಪ್ರತಾಪ್ ಸಿಂಗ್ ಸಹೋದರರು ಅಭಿನಂದಿಸಿದ್ದಾರೆ. ಇಂಟರ್ನಲ್ಲಿ ಛೋಟೆ ಲಾಲ್ 500 ಅಂಕಗಳಿಗೆ 367 ಅಂಕಗಳನ್ನು ಗಳಿಸುವ ಮೂಲಕ ಉತ್ತರ ಪ್ರದೇಶದ ಜೈಲು ಪರೀಕ್ಷಾರ್ಥಿಗಳಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಛೋಟೆ ಲಾಲ್ 10 ವರ್ಷಗಳ ಶಿಕ್ಷೆಗೆ ಒಳಗಾಗಿ ಬರೇಲಿಯ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಜೈಲಿನಲ್ಲಿ ಕೈದಿಗಳಿಗೆ ಹಲವು ಸೌಲಭ್ಯ
ಉತ್ತರ ಪ್ರದೇಶದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿನ ಖೈದಿಗಳಿಗೆ ಅಧ್ಯಯನದ ಜೊತೆಗೆ ಕಂಪ್ಯೂಟರ್ ತರಗತಿಗಳನ್ನೂ ನೀಡಲಾಗುತ್ತದೆ. ಇದರಿಂದ ಶಿಕ್ಷೆ ಮುಗಿದ ನಂತರ ಸರಿಯಾದ ಮಾರ್ಗದಲ್ಲಿ ಸಾಗಿ ವೃತ್ತಿಯನ್ನು ಮಾಡಿಕೊಳ್ಳಬಹುದು.
12 ತರಗತಿ ಪಾಸ್ ಮಾಡಿದ ಮಾಜಿ ಶಾಸಕರು
ಕಲಿಯಲು ವಯಸ್ಸಿನ ಅಗತ್ಯವಿಲ್ಲ ಎಂಬ ಮಾತನ್ನ ಉತ್ತರ ಪ್ರದೇಶದ ಮಾಜಿ ಸಚಿವ ಪ್ರಭುದಯಾಳ್ ವಾಲ್ಮೀಕಿ ಮತ್ತು ಮಾಜಿ ಶಾಸಕ ರಾಜೇಶ್ ಮಿಶ್ರಾ ನಿಜವಾಗಿಸಿದ್ದಾರೆ. ಅವರಿಬ್ಬರು 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಮಾದರಿಯಾಗಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ 50 ವರ್ಷಗಳನ್ನು ದಾಟಿದ್ದಾರೆ.
ಈ ಇಬ್ಬರೂ ಬಹಳ ವರ್ಷಗಳ ಹಿಂದೆಯೇ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆದರೆ ತಮ್ಮ ಅಧ್ಯಯನವನ್ನು ಮುಂದುವರಿಸುವ ಆಸೆಯಿಂದ ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ ಪ್ರಭುದಯಾಳ್ ವಾಲ್ಮೀಕಿ 271 ಅಂಕ ಪಡೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ಎರಡು ಬಾರಿಯ ಶಾಸಕ ರಾಜೇಶ್ ಮಿಶ್ರಾ ಅಲಿಯಾಸ್ ಪಪ್ಪು ಭರತೌಲ್ ಅವರು 55 ನೇ ವಯಸ್ಸಿನಲ್ಲಿ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು 500ಕ್ಕೆ 263 ಅಂಕ ಗಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ