ರಾಜಿ ರಾಜಕೀಯದಿಂದ ಹಾನಿಯಾಗಿರುವ ಬಂಗಾಳದ ಧಾರ್ಮಿಕ ಸಂಪ್ರದಾಯವನ್ನು ಮರುಸ್ಥಾಪಿಸಬೇಕಿದೆ; ಅಮಿತ್ ಶಾ
ತುಷ್ಠಿಕರಣ ರಾಜಕಾರಣವು ಬಂಗಾಳದ ಅದ್ಭುತ ಸಂಪ್ರದಾಯವನ್ನು ಘಾಸಿಗೊಳಿಸಿದ್ದು, ರಾಜ್ಯದ ವೈಭವವನ್ನು ಮರಳಿ ಪಡೆಯಲು ಬಂಗಾಳದ ಜನರು ಎಚ್ಚರಗೊಳ್ಳಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.
ಕೋಲ್ಕತ್ತಾ (ನವೆಂಬರ್ 06); ರಾಜಿ ರಾಜಕೀಯ ತಂತ್ರವು ಪಶ್ಚಿಮ ಬಂಗಾಳದ ಆಧ್ಯಾತ್ಮಿಕ, ಧಾರ್ಮಿಕ ಸಂಪ್ರದಾಯ ಶ್ರೀಮಂತಿಕೆಯನ್ನು ಹಾನಿಗೊಳಪಡಿಸಿದೆ. ಧಾರ್ಮಿಕ ಪ್ರಜ್ಞಗೆ ಪ್ರಶ್ನಾರ್ಥಕವಾಗಿದೆ. ಹೀಗಾಗಿ ಆ ಹಳೆಯ ಗತ ವೈಭವವನ್ನು ಮತ್ತೆ ಮರುಸ್ಥಾಪಿಸಬೇಕು, ಧಾರ್ಮಿಕ ಶ್ರಿಮಂತಿಕೆಯನ್ನು ಎತ್ತಿಹಿಡಿಯಬೇಕಾದ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವರ್ಷದ ಆರಂಭದಲ್ಲೇ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುಣಾವಣೆ ಎದುರಾಗಲಿದೆ. ಈ ಬಾರಿ ಬಂಗಾಳವನ್ನು ಗೆಲ್ಲಲೆಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಹೀಗಾಗಿ ಭೂತ್ ಮಟ್ಟದಲ್ಲಿ ಪಕ್ಷದ ಕಾರ್ಯಚಟುವಟಿಕೆಯ ಕುರಿತು ಗಮನವಹಿಸುವ ಸಲುವಾಗಿ ಅಮಿತ್ ಶಾ ಎರಡು ದಿನಗಳ ಪ್ರವಾಸಕ್ಕಾಗಿ ಬಂಗಾಳಕ್ಕೆ ನಿನ್ನೆ ತೆರಳಿದ್ದಾರೆ.
ಎರಡನೇ ದಿನವಾದ ಇಂದು ದಕ್ಷಿಣೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಶತಮಾನಗಳಷ್ಟು ಹಳೆಯದಾದ ದೇಗುಲದ ಗರ್ಭಗೃಹಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಈ ಮೇಲಿನ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಬಂಗಾಳದಲ್ಲಿ ಮಾತನಾಡಿರುವ ಅಮಿತ್ ಶಾ, "ಬಂಗಾಳವು ಚೈತನ್ಯ ಮಹಾಪ್ರಭು ಶ್ರೀ ರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರಂತವರ ನೆಲವಾಗಿದ್ದು, ಒಂದು ಕಾಲದಲ್ಲಿ ಈ ರಾಜ್ಯವು ಇಡೀ ದೇಶದಲ್ಲಿ ಆಧ್ಯಾತ್ಮಿಕ ಜಾಗೃತಿಯ ಕೇಂದ್ರವಾಗಿತ್ತು. ಆದರೆ, ಈ ಸಂಪ್ರದಾಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಕೊಡಲಿ ಪೆಟ್ಟು ನೀಡಲಾಗಿದೆ. ಅದರಲ್ಲೂ ತುಷ್ಠಿಕರಣ ರಾಜಕಾರಣವು ಬಂಗಾಳದ ಅದ್ಭುತ ಸಂಪ್ರದಾಯವನ್ನು ಘಾಸಿಗೊಳಿಸಿದ್ದು, ರಾಜ್ಯದ ವೈಭವವನ್ನು ಮರಳಿ ಪಡೆಯಲು ಬಂಗಾಳದ ಜನರು ಎಚ್ಚರಗೊಳ್ಳಲು ಮತ್ತು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ನಾನು ಈ ಮೂಲಕ ಕರೆ ನೀಡುತ್ತೇನೆ” ಎಂದಿದ್ದಾರೆ.
"ರಾಜ್ಯ ಸೇರಿದಂತೆ ಇಡೀ ದೇಶದ ಜನರ ಯೋಗಕ್ಷೇಮಕ್ಕಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಜಗತ್ತಿನಲ್ಲಿ ತನ್ನ ವೈಭವವನ್ನು ಉಳಿಸಿಕೊಳ್ಳಬೇಕೆಂದು ನಾವು ಪ್ರಾರ್ಥಿಸಿದ್ದೇವೆ" ಎಂದು ಅವರು ಹೇಳಿದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಗ್ನಿಮಿತ್ರ ಪಾಲ್ ಸೇರಿದಂತೆ ಅವರ ಸದಸ್ಯರು ಅಮಿತ್ ಶಾ ಅವರನ್ನು ದೇವಾಲಯದಲ್ಲಿ ಸ್ವಾಗತಿಸಿದರು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ