ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜ್ಯದ ಸುಮಾರು 50 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರೊಂದಿಗೆ (BJP Activists) ಇಂದು ಸಂವಾದ ನಡೆಸಿದರು. ಬೆಳಗ್ಗೆ 9.45ಕ್ಕೆ ಸರಿಯಾಗಿ ಆರಂಭವಾದ ಈ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಂದ ಹಿಡಿದು, ಬಿಎಸ್ವೈ, ನಳಿನ್ ಕುಮಾರ್ ಸೇರಿ ರಾಜ್ಯ ಬಹುತೇಕ ಬಿಜೆಪಿ ನಾಯಕರು ಪಾಲ್ಗೊಂಡರು.
ಈ ವೇಳೆ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಶಿವಮೊಗ್ಗ ಕ್ಷೇತ್ರದ ಬಗ್ಗೆಯೂ ಪ್ರಸ್ತಾಪಿಸಿದರು. ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಸವಾಲಿನ ಕ್ಷೇತ್ರವಾಗಿದೆ. ಪ್ರಸ್ತುತ ಗೊಂದಲದ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಬೂತ್ ಮಟ್ಟದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು? ಜನರಿಗೆ ಕಾರ್ಯಕ್ರಮಗಳನ್ನು ಹೇಗೆ ತಲುಪಿಸಬೇಕು? ಎಂದು ಗೊತ್ತಿರಬೇಕು. ಬೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪಬೇಕಿದೆ. ಕೇವಲ ಮನೆ ಹೊರಗೆ ನಿಂತು ಪಾಂಪ್ಲೆಟ್ ಕೊಟ್ಟು ಬರಬೇಡಿ. ನೀವು ಏನು ಹೇಳಲು ಹೊರಟ್ಟಿದ್ದೀರಾ ಅದು ನಿಮ್ಮ ಮೊಬೈಲ್, ಡೈರಿಯಲ್ಲಿ ಬರೆದಿಟ್ಟುಕೊಂಡಿರಬೇಕು. ನಿಮ್ಮ ತಲೆಯಲ್ಲಿ, ಹೃದಯದಲ್ಲಿ ಇರಬೇಕು. ಮನೆಗೆ ಹೋದಾಗ ದೊಡ್ಡವರಿಗೆ ನಮಸ್ಕಾರ ಮಾಡಬೇಕು. ಸಣ್ಣ ಸಣ್ಣ ಮಕ್ಕಳಿಗೆ ಪ್ರೀತಿ ತೋರಿಸಬೇಕು ಎಂದರು.
ಇದನ್ನೂ ಓದಿ: Narendra Modi Conversation: ರಾಜ್ಯದ 50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ; ಪಕ್ಷದಲ್ಲಿ ತುಂಬಿದ ಉತ್ಸಾಹ
'ಡಬಲ್ ಇಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂಬುದು ತಿಳಿಸಿ'
ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ವಿರೂಪಾಕ್ಷಪ್ಪ ಪ್ರಶ್ನೆಗೆ ಉತ್ತರಿಸಿದ ಮೋದಿ, ಬಿಜೆಪಿ ಸರ್ಕಾರದ ಯೋಜನೆಯನ್ನು, ಸಾಧನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಡಬಲ್ ಇಂಜಿನ್ ಸರ್ಕಾರ ರಾಜ್ಯ, ದೇಶದ ಅಭಿವೃದ್ಧಿ ಮಾಡುತ್ತಿದೆ. ಈ ಬಗ್ಗೆ ಜನರಿಗೆ ತಿಳಿಸಿಕೊಡಿ. ಅಭಿವೃದ್ಧಿ ಮಂತ್ರ ಜಪಿಸುತ್ತಿರುವುದು ಜನರಿಗೆ ತಿಳಿಸಿಕೊಡಿ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿರುವ ಬಗ್ಗೆ ಮತದಾರರಿಗೆ ತಲುಪಬೇಕು. ಇವೆಲ್ಲವನ್ನೂ ಜನರಿಗೆ ಮನವರಿಕೆ ಮಾಡಿಕೊಡಿ. ಡಬಲ್ ಇಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂಬುದು ತಿಳಿಸುವ ಅಗತ್ಯವಿದೆ. ಕೇವಲ ರಾಜಕೀಯ ಮಾಡದೆ, ಅಭಿವೃದ್ಧಿಯೂ ನಮ್ಮ ಪಣವಾಗಿದೆ ಎಂದರು.
ಮೆಡಿಕಲ್ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧನೆ ಮಾಡಲಾಗಿದೆ ಎಂದ ಮೋದಿ, ಭ್ರಷ್ಟಾಚಾರದ ಬಗ್ಗೆ ಡಬಲ್ ಇಂಜಿನ್ ಸರ್ಕಾರ ಪ್ರಹಾರ ಮಾಡಿದೆ. ಕಪ್ಪುಹಣ ವರ್ಗಾವಣೆ ಬಗ್ಗೆ ನಿಗಾ ಇಟ್ಟಿದೆ. ಕೆಲವರ ಜೇಬು ಸೇರುತ್ತಿದ್ದ ಹಣ ಈಗ ಸರ್ಕಾರದ ಖಜಾನೆ ಸೇರುತ್ತಿದೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಡಬಲ್ ಇಂಜಿನ್ ಸರ್ಕಾರ ಸಮರ ಸಾರಿದೆ. ರಾಜ್ಯವನ್ನು ಭ್ರಷ್ಟ ಮುಕ್ತವಾಗಿಸಲು ನಮ್ಮ ಸರ್ಕಾರ ಮುಂದಾಗಿದೆ. ಸಾಮಾಜಿಕವಾಗಿ ಜಾಗೃತಗೊಳಿಸಲಾಗುತ್ತಿದೆ. ಕರ್ನಾಟಕದ ಜನರು, ಭಕ್ತಿ, ಯುಕ್ತಿ ಮೂಲಕ ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದಾರೆ. ರಾಜ್ಯದ ಜನರು ಸಾಹಿತ್ಯವನ್ನು ತಮ್ಮ ಉಸಿರನ್ನಾಗಿಸಿಕೊಂಡಿದ್ದಾರೆ ಎಂದರು.
'ಕರ್ನಾಟಕದ ಜೊತೆಗೆ ನನ್ನ ಅವಿನಾಭಾವ ಸಂಬಂಧವಿದೆ'
ಇದೇ ವೇಳೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಪ್ರಸ್ತಾಪಿಸಿದ ನರೇಂದ್ರ ಮೋದಿ, ಕರ್ನಾಟಕದ ಜೊತೆಗೆ ನನ್ನ ಅವಿನಾಭಾವ ಸಂಬಂಧವಿದೆ. ಕರ್ನಾಟಕದ ವಿಕಾಸಕ್ಕಾಗಿ ಹಲವಾರು ಜನರು ದುಡಿಯುತ್ತಿದ್ದಾರೆ. ಇವೆಲ್ಲವನ್ನೂ ನಾನು ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿದ್ದೇನೆ. ಇವೆಲ್ಲವೂ ನಿಮ್ಮಿಂದ ಸಾಧ್ಯವಾಗಿದೆ. ಸಂಸ್ಕೃತಿ, ಧಾರ್ಮಿಕತೆ ಆಧುನಿಕ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಇತಿಹಾಸದ ಜೊತೆಗೆ ವರ್ತಾಮಾನದ ಬಗ್ಗೆಯೂ ಯೋಚಿಸಬೇಕಿದೆ. ಇದು ಒಂದು ಉತ್ತಮ ಸರ್ಕಾರದ ಕಾರ್ಯವೈಖರಿಯಾಗಿದೆ. ಬಿಜೆಪಿ ಶಾರ್ಟ್ ಕಟ್ ಪಕ್ಷವಲ್ಲ. ದೇಶಕ್ಕಾಗಿ ದುಡಿದಿರುವ, ದುಡಿಯುವ ಪಕ್ಷವಾಗಿದೆ. ಬಿಜೆಪಿ ಸರ್ಕಾರ ಹಲವು ಆಯಾಮಗಳಲ್ಲಿ, ಯೋಚಿಸಿ, ಯೋಜಿಸಿ ಕಾರ್ಯ ಸಾಧುವಾಗಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Sudan Crisis: ಸುಡಾನ್ನಿಂದ ತಾಯ್ನೆಲಕ್ಕೆ ತಲುಪಿದ 360 ಭಾರತೀಯರು; ಮುಂದುವರಿದ ‘ಆಪರೇಷನ್ ಕಾವೇರಿ’ ಕಾರ್ಯ
ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆಯೂ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಲೋಕತಂತ್ರ ಚುನಾವಣೆ ಆರಂಭವಾಗಿದೆ. ನೀವು ಬೂತ್ ಮಟ್ಟದಲ್ಲಿ ಉತ್ತಮ ಕೆಲಸ ಮಾಡಿ. ಅತ್ಯದ್ಭುತ ಸಂಖ್ಯೆಯಿಂದ ಬಿಜೆಪಿ ಗೆಲ್ಲಿಸಿ. ಎರಡು ದಿನದ ಬಳಿಕ ನಾನು ಕಾರ್ಯಕರ್ತರ ನಡುವೆ ಕರ್ನಾಟಕ ಜನತೆಯ ಆಶಿರ್ವಾದ ಕೇಳಲು ಬರ್ತಿದ್ದೇನೆ. ಬಿಜೆಪಿ ಮುಖಂಡರು ಎಲ್ಲರೂ ನಿಮ್ಮ ಮನಸ್ಸು ಗೆದ್ದಿದ್ದಾರೆ. ಜನರು ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದರು.
'ಬೆಲೆ ಏರಿಕೆ ಬಗ್ಗೆ ಮಾತನಾಡಿದ್ರೆ ಹೀಗೆ ಹೇಳಿ'
ಇನ್ನು ನಮ್ಮ ಸರ್ಕಾರ ದಲಿತರು, ರೈತರು, ಕೂಲಿ ಕಾರ್ಮಿಕರು ಎಲ್ಲರ ಪರವಾಗಿ ಕೆಲಸ ಮಾಡಿದೆ ಎಂದ ಪ್ರಧಾನಿ ಮೋದಿ, ಪುರುಷರು, ಮಹಿಳೆಯರು ಇಬ್ಬರೂ ಮನೆಗಳಿಗೆ ಹೋಗಿ. ಅವರಿಗೆ ನನ್ನ ನಮಸ್ಕಾರ ಹೇಳಿ. ಮನೆಯಲ್ಲಿ ಹೇಗಿದ್ದಾರೆ ಅಂತ ವಿಚಾರಿಸಿ ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಮಾತನಾಡಿಸಿ. ಅರ್ಧಗಂಟೆಯಾದ್ರೂ ಪರವಾಗಿಲ್ಲ, ಅವರಿಗೆ ಅರ್ಥಮಾಡಿಸಿ. ಬೆಲೆ ಏರಿಕೆ ಬಗ್ಗೆ ಮಾತನಾಡಿದ್ರೆ ಅವರಿಗೆ ಜಗತ್ತಿನಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಅಂತಾ ಅರ್ಥ ಮಾಡಿಸಿ. ಜಗತ್ತಿನಲ್ಲಿ ಭಾರತ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕೊರೋನಾದಿಂದ ಸಮಸ್ಯೆ ಆಗಿರೋ ಬಗ್ಗೆ ಅವರಿಗೆ ಮನದಟ್ಟು ಮಾಡಿ. ನಮ್ಮ ವಿರೋಧಿಗಳ ಅಜೆಂಡಾ ಏನು ಅನ್ನೋದು ತಿಳಿಸಿ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲೇ ಹೋದರೂ ಅಲ್ಲಿನ ಜನ ಹೃದಯ ಪೂರ್ವಕ ಆಶೀರ್ವಾದ ಮಾಡಿದ್ದಾರೆ ಎಂದ ಮೋದಿ, ಕರ್ನಾಟಕದ ಜನರ ವಿಶ್ವಾಸ ಬಿಜೆಪಿ ಮೇಲೆ ಎಷ್ಟಿದೆ ಅಂತ ಎಲ್ಲರಿಗೂ ಗೊತ್ತು. ರಾಜ್ಯ ಬಿಜೆಪಿ ಘಟಕ ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಿರೋದು ಅಭಿನಂದನಾರ್ಹ ಎಂದು ಮೋದಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ