ನವದೆಹಲಿ: ವಿಶ್ವದಾದ್ಯಂತ ಭಾರತದ ಪ್ರಧಾನಿ ಮೋದಿ (Narendra Modi) ದೊಡ್ಡ ನಾಯಕರಾಗಿ ಜನಪ್ರಿಯಗೊಳ್ಳುತ್ತಿದ್ದಾರೆ. ಅವರು ನೊಬೆಲ್ ಶಾಂತಿ (Nobel Award) ಪುರಸ್ಕಾರಕ್ಕೆ ಅರ್ಹ ವ್ಯಕ್ತಿ ಎಂದು ನೊಬೆಲ್ ಸಮಿತಿಯ ಉಪಾಧ್ಯಕ್ಷ ಅಸ್ಲೆ ತೋಜೆ (Nobel Committee VC Asle Toje ) ಹೇಳಿದ್ದಾರೆ ಎನ್ನಲಾಗಿದೆ. ನಾವು ನೊಬೆಲ್ ಶಾಂತಿ ಪ್ರಶಸ್ತಿಗೆ ಈ ಬಾರಿ ಹೆಚ್ಚಿನ ಸಂಖ್ಯೆಯ ಭಾರತೀಯ ನಾಮನಿರ್ದೇಶನಗಳನ್ನು(Indian Nominees) ಪಡೆಯುತ್ತಿದ್ದೇವೆ. ಭಾರತದ ಪ್ರಧಾನಿ ಮೋದಿ ಅಂತಹ ಪ್ರಬಲ ನಾಯಕನಿಗೆ ಶಾಂತಿ ಸ್ಥಾಪಿಸುವ ಅಗಾಧ ಸಾಮರ್ಥ್ಯವಿದೆ. ಅವರು ಶಕ್ತಿಶಾಲಿ ರಾಷ್ಟ್ರದಿಂದ ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ರಷ್ಯಾ - ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಸಹ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದೂ ಅವರು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮೋದಿ ವಿಶ್ವಾಸಾರ್ಹ ವ್ಯಕ್ತಿ
ಪ್ರಧಾನಿ ಮೋದಿ ವಿಶ್ವದಲ್ಲಿ ಶಾಂತಿಯನ್ನು ಕಾಪಾಡಬಲ್ಲ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ ಎಂದು ಟೋಜೆ ಹೇಳಿದ್ದಾರೆ. ಒಂದು ಕಡೆ ರಷ್ಯಾ ಮತ್ತು ಅಮೆರಿಕ ಎರಡೂ ಪರಮಾಣು ಯುದ್ಧದ ಬಗ್ಗೆ ಮಾತನಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಈ ದೇಶಗಳು ಭಾರತವನ್ನು ನೋಡಿ ಕಲಿಯಬೇಕಿದೆ. ನಾನು ಭಾರತದ ಪ್ರಧಾನ ಮಂತ್ರಿಯ ದೊಡ್ಡ ಅಭಿಮಾನಿ ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಆಸ್ಲೆ ಟೋಜೆ ತಿಳಿಸಿದ್ದಾರೆ.
ಶಾಂತಿಯ ಪರಂಪರೆ
ಭಾರತವನ್ನು ಶಾಂತಿಯ ಪರಂಪರೆ ಎಂದು ಕರೆದಿರುವ ಆಸ್ಲೆ ಟೋಜೆ, ಆ ದೇಶವು ಜಗತ್ತಿನ ಸೂಪರ್ ಪವರ್ ಆಗುವತ್ತಾ ಮುನ್ನುಗ್ಗುತ್ತಿದೆ. ಇದಲ್ಲದೆ, ಪ್ರಧಾನಿ ಮೋದಿ ಅವರು ಯುದ್ಧವನ್ನು ನಿಲ್ಲಿಸಲು ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಅವರು ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದರು. ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ಭಾರತ ಶ್ರೀಮಂತ - ಶಕ್ತಿಶಾಲಿ ರಾಷ್ಟ್ರವಾಗುತ್ತಿದೆ. ಪ್ರಧಾನಿ ಮೋದಿ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದರೆ ಅದು ಐತಿಹಾಸಿಕವಾಗಲಿದೆ ಎಂದೂ ಆಸ್ಲೆ ಟೋಜೆ ಅವರು ಹೇಳಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಬರಾಕ್ ಒಮಾಮ ಸೇರಿದಂತೆ ಹಲವರಿಗೆ ನೊಬೆಲ್ ಶಾಂತಿ ಪ್ರಶಸ್ತಿ
ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರಿಗೆ 2009 ರಲ್ಲಿ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಬಲಪಡಿಸಲು ಮತ್ತು ಜನರ ನಡುವೆ ಸಹಕಾರವನ್ನು ಹೆಚ್ಚಿಸಲು ಅವರ ಪ್ರಯತ್ನಗಳಿಗಾಗಿ ಅವರಿಗೆ ಈ ಗೌರವವನ್ನು ನೀಡಲಾಗಿತ್ತು. ಇವರನ್ನು ಬಿಟ್ಟರೆ 2002 ರಲ್ಲಿ ಯುಎಸ್ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ 2012 ರಲ್ಲಿ ಯುರೋಪಿಯನ್ ಯೂನಿಯನ್, 2001 ರಲ್ಲಿ ವಿಶ್ವಸಂಸ್ಥೆ ಮತ್ತು ಅದರ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಮತ್ತು 1979 ರಲ್ಲಿ ಭಾರತದ ಮದರ್ ತೆರೇಸಾ ಮತ್ತು 2014 ರಲ್ಲಿ ಕೈಲಾಶ್ ಸತ್ಯಾರ್ಥಿ ಮತ್ತು ಮಲಾಲಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ನಕಲಿ ಟ್ವೀಟ್ ಎಂದ ಟೋಜೆ
ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ ಅವರು 'ಇದು ಸಂಪೂರ್ಣವಾಗಿ ನಕಲಿ ಸುದ್ದಿ' ಎಂದು ಹೇಳಿದ್ದಾರೆ.
ಈ ವರದಿಯಲ್ಲಿ ಉಲ್ಲೇಖಿಸಿರುವ ಟ್ವೀಟ್ ನಕಲಿ ಮತ್ತು ನಾವು ಇಂತಹ ವಿಚಾರಗಳನ್ನು ಚರ್ಚಿಸಬಾರದು ಅಥವಾ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬಾರದು . ನಾನು ಇಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ