ಇತ್ತೀಚೆಗಷ್ಟೇ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕುಡಿದು ಮಹಿಳೆಯ ಸೀಟಿನ ಹತ್ತಿರ ಹೋಗಿ ಮೂತ್ರವಿಸರ್ಜನೆ ಮಾಡಿದ ಅಹಿತಕರವಾದ ಘಟನೆಯೊಂದು ನಡೆದಿದ್ದು, ಇದು ಭಾರೀ ಸದ್ದು ಮಾಡಿತ್ತು. ಆ ಘಟನೆಯನ್ನು ಜನರು ಮರೆಯುವ ಮೊದಲೇ ಮತ್ತೊಂದು ಅಹಿತಕರ ಘಟನೆ ನಡೆದಿದೆ. ಈಗ ಮಹಿಳೆಯೊಬ್ಬಳು ವಿಮಾನದಲ್ಲಿ ತನಗೆ ಬಡಿಸಲಾದ ಊಟದಲ್ಲಿ ಕಲ್ಲು ಸಿಕ್ಕಿದೆ ಅಂತ ದೂರು ನೀಡಿರುವ ಘಟನೆ ವರದಿಯಾಗಿದೆ.
ಊಟದಲ್ಲಿ ಕಲ್ಲು ಸಿಕ್ಕಿರುವ ವಿಷಯ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಮಹಿಳೆ
ಈ ವಿಷಯವನ್ನು ಏರ್ ಇಂಡಿಯಾಗೆ ತಿಳಿಸಲು ಮಹಿಳಾ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡರು. ಈ ರೀತಿಯ ನಿರ್ಲಕ್ಷ್ಯವನ್ನು ಸಹಿಸಿಕೊಂಡು ಸುಮ್ಮನಿರಲು ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Air India: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದವನಿಗೆ ಕೋಳ! ಘಟನೆ ಬಗ್ಗೆ ಏರ್ ಇಂಡಿಯಾ ಕ್ಷಮೆಯಾಚನೆ
"ಕಲ್ಲು ಇರದ ಆಹಾರವನ್ನು ನೀಡಲು ಏರ್ ಇಂಡಿಯಾಗೆ ಯಾವುದೇ ರೀತಿಯ ಸಂಪನ್ಮೂಲಗಳು ಮತ್ತು ಹಣದ ಅಗತ್ಯವಿಲ್ಲ ಅಂತ ನಾನು ಭಾವಿಸುತ್ತೇನೆ. ಇಂದು ಎಐ 215 ಸಂಖ್ಯೆಯ ವಿಮಾನದಲ್ಲಿ ಬಡಿಸಿದ ನನ್ನ ಆಹಾರದಲ್ಲಿ ನನಗೆ ಚಿಕ್ಕ ಕಲ್ಲು ಸಿಕ್ಕಿದೆ. ಸಿಬ್ಬಂದಿ ಸದಸ್ಯರಾದ ಜಾಡನ್ ಅವರಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಈ ರೀತಿಯ ನಿರ್ಲಕ್ಷ್ಯ ಸ್ವೀಕಾರಾರ್ಹವಲ್ಲ" ಎಂದು ಸರ್ವಪ್ರಿಯ ಸಂಗ್ವಾನ್ ಎಂಬ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ.
You don’t need resources and money to ensure stone-free food Air India (@airindiain). This is what I received in my food served in the flight AI 215 today. Crew member Ms. Jadon was informed.
This kind of negligence is unacceptable. #airIndia pic.twitter.com/L3lGxgrVbz
— Sarvapriya Sangwan (@DrSarvapriya) January 8, 2023
ಘಟನೆಗೆ ಪ್ರತಿಕ್ರಿಯಿಸಿದ ನೆಟ್ಟಿಗರು
"ಜೆಆರ್ಡಿ ಟಾಟಾ ಒಮ್ಮೆ ವಾಯುಯಾನ ಉದ್ಯಮಕ್ಕೆ ಮಾನದಂಡಗಳನ್ನು ನಿಗದಿಪಡಿಸಿದವರು. ಅವರು ಏರ್ ಇಂಡಿಯಾವನ್ನು ಸರ್ಕಾರವು ಸ್ವಾಧೀನಪಡಿಸಿಕೊಳ್ಳುವ ಮೊದಲೇ ಜಾಗತಿಕವಾಗಿ ಗೌರವಾನ್ವಿತ ಬ್ರ್ಯಾಂಡ್ ಆಗಿ ನಿರ್ಮಿಸಿದರು. ಈಗ ನೀವು ಅದರ ಮಾಲೀಕರಾಗಿ ಮರಳಿದ್ದೀರಿ, ಏನಿದು ಘಟನೆಗಳು, ಕಾರ್ಪೊರೇಟ್ ಮೇಲ್ವಿಚಾರಣೆ ಇಲ್ಲವೇ? ನೀವು ಈಗಾಗಲೇ ನಡೆದ ಮೂತ್ರವಿಸರ್ಜನೆ ಘಟನೆಯನ್ನು ಹೇಗೆ ನಿರ್ವಹಿಸುತ್ತೀರಿ" ಎಂದು ಬಳಕೆದಾರರೊಬ್ಬರು ಈ ಟ್ವೀಟ್ ಗೆ ಪ್ರತಿಕ್ರಿಯಿಸಿದರು.
ಏರ್ ಇಂಡಿಯಾ ಎಕ್ಸ್ಪ್ರೆಸ್ ನಲ್ಲಿ ನೀಡಲಾಗುವ ಆಹಾರದಲ್ಲಿ ನನಗೆ ಹಲವಾರು ಬಾರಿ ಸಮಸ್ಯೆಗಳಾಗಿವೆ, ಇದಕ್ಕೆ ಯಾವುದೇ ಪರಿಹಾರವನ್ನು ಒದಗಿಸಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: TATA Air India: ಸರ್ಕಾರ ಮಾಡಲಾಗದ್ದನ್ನು ಟಾಟಾ ಮಾಡ್ತಿದೆ, ಇದಕ್ಕೆ ಇವ್ರನ್ನು ಗ್ರೇಟ್ ಅನ್ನೋದು!
ಘಟನೆಯ ಬಗ್ಗೆ ಏನ್ ಹೇಳಿದೆ ಏರ್ ಇಂಡಿಯಾ?
"ಮೇಡಂ, ಇದು ಕಳವಳಕಾರಿಯಾದ ಸಂಗತಿಯಾಗಿದೆ ಮತ್ತು ನಾವು ಇದನ್ನು ತಕ್ಷಣವೇ ನಮ್ಮ ಕ್ಯಾಟರಿಂಗ್ ತಂಡದೊಂದಿಗೆ ಚರ್ಚಿಸುತ್ತೇವೆ. ದಯವಿಟ್ಟು ನಮಗೆ ಸ್ವಲ್ಪ ಸಮಯ ನೀಡಿ. ನೀವು ಇದನ್ನು ನಮ್ಮ ಗಮನಕ್ಕೆ ತಂದಿರುವುದನ್ನು ನಾವು ಪ್ರಶಂಸಿಸುತ್ತೇವೆ" ಎಂದು ವಿಮಾನಯಾನ ಸಂಸ್ಥೆ ದೂರುದಾರರ ಟ್ವೀಟ್ ಗೆ ಉತ್ತರಿಸಿದೆ.
ಮತ್ತೊಂದು ಹೇಳಿಕೆಯಲ್ಲಿ, "ಎಐ 215 ರಲ್ಲಿ ಪ್ರಯಾಣಿಕರೊಬ್ಬರ ಊಟದಲ್ಲಿ ಕಲ್ಲು ಕಂಡುಕೊಂಡ ಘಟನೆಯನ್ನು ಏರ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಗೆ ನಾವು ವಿಷಾದಿಸುತ್ತೇವೆ ಮತ್ತು ಪ್ರಯಾಣಿಕರಿಗೆ ಕ್ಷಮೆಯಾಚಿಸಿದ್ದೇವೆ. ಕ್ಯಾಟರರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ" ಎಂದು ಅವರು ಹೇಳಿದರು.
ಇದನ್ನೂ ಓದಿ:
ಮೂತ್ರವಿಸರ್ಜನೆ ಪ್ರಕರಣದಲ್ಲಿ ಏನಾಯ್ತು?
ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಬಿಸಿನೆಸ್ ಕ್ಲಾಸ್ ನಲ್ಲಿದ್ದ ವೃದ್ಧ ಮಹಿಳಾ ಸಹ ಪ್ರಯಾಣಿಕರ ಮೇಲೆ ಮೂತ್ರವಿಸರ್ಜನೆ ಮಾಡಿದ ವಿವಾದಾತ್ಮಕ ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾದಿಂದ ವರದಿಯನ್ನು ಕೇಳಿದೆ.
ಆರೋಪಿಯನ್ನು ಶಂಕರ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಆತನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ. ಮಹಿಳೆ ಏರ್ ಇಂಡಿಯಾಗೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಜನವರಿ 4 ರಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ದೆಹಲಿ ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ