news18-kannada Updated:February 13, 2020, 4:44 PM IST
ಫೈಲ್ ಫೋಟೊ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ
ನವದೆಹಲಿ(ಫೆ.13): ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 62 ಕ್ಷೇತ್ರಗಳಲ್ಲಿ ಗೆದ್ದಿದೆ. ಉಳಿದ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಆರಂಭದ ಹಂತದಲ್ಲಿ ಒಂದು ಕ್ಷೇತ್ರದಲ್ಲಿ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ಪಕ್ಷ ಅಂತಿಮವಾಗಿ ಶೂನ್ಯ ಸಂಪಾದನೆ ಮಾಡಿದೆ. ಚುನಾವಣೆ ಘೋಷಣೆಯಾದಾಗಿನಿಂದಲೂ ಕಾಂಗ್ರೆಸ್ ಯಾವ ಹಂತದಲ್ಲೂ ಗೆಲುವಿನ ನಿರೀಕ್ಷೆ ಮೂಡಿಸಿರಲಿಲ್ಲ. ಕಾಂಗ್ರೆಸ್ ಒಂದು ರೀತಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಅಂತೆಯೀಗ ಈ ಚುನಾವಣೆಯಲ್ಲಿ ಕಾಂಗ್ರೆಸ್ ಆಟಕಿತ್ತು, ಲೆಕ್ಕಕಿಲ್ಲ ಎನ್ನುವುದು ಸಾಬೀತಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ದೆಹಲಿ ಕಾಂಗ್ರೆಸ್ನಲ್ಲಿ ಬಂಡಾಯದ ಬೇಗುದಿ ಸ್ಫೋಟಗೊಂಡಿದೆ.
ಹೌದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ದೆಹಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ಆಪ್ ಗೆಲುವಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಅಭಿನಂದನೆಗಳು ತಿಳಿಸಿದ್ದಾರೆ. ಅಲ್ಲದೇ ಸಮಾಜವನ್ನು ಹೊಡೆಯಲೊರಟ ಬಿಜೆಪಿಗೆ ದೆಹಲಿಗರು ತಕ್ಕಪಾಠ ಕಲಿಸಿದ್ದಾರೆ ಎನ್ನುವ ಮೂಲಕ ಆಪ್ ಗೆಲುವನ್ನು ಕೊಂಡಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸೋಲನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರೆ. ಈ ನಡುವೆ ಕೆಲವು ಕಾಂಗ್ರೆಸ್ಸಿಗರು ತಮ್ಮ ಸ್ವಂತ ಗೆಲುವಿನ ಬಗ್ಗೆ ಯೋಚಿಸದೆ ಬಿಜೆಪಿ ಸೋಲಿಸುವ ಏಕೈಕ ಉದ್ದೇಶದಿಂದ ಆಪ್ ಬೆಂಬಲಿಸಿ ಮತ ತ್ಯಾಗ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರವೇ ಈಗ ದೆಹಲಿ ಕಾಂಗ್ರೆಸ್ನಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಕೈ ಸೊನ್ನೆ: ಕಾಂಗ್ರೆಸ್ನಿಂದ ನಿಜವಾಗಿ ಡ್ಯಾಮೇಜ್ ಆಗಿದ್ದು ಯಾರಿಗೆ?
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಧ್ಯಪ್ರದೇಶ ಸಿಎಂ ಕಮಲನಾಥ್, ಮಾಜಿ ಸಂಸದ ಶತೃಘ್ನ ಸಿನ್ಹಾ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸೇರಿದಂತೆ ಹಲವರು, ಚುನಾವಣಾ ಫಲಿತಾಂಶ ಬೆನ್ನಲ್ಲೇ ಆಪ್ ಗೆಲುವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. ಹಾಗೆಯೇ ಸಮಾಜದಲ್ಲಿ ಒಡಕು ಸೃಷ್ಟಿಸುವ ಬಿಜೆಪಿಗೆ ದೆಹಲಿ ಜನತೆ ತಕ್ಕಪಾಠ ಕಲಿಸಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಸೋಲನ್ನು ಮರೆಮಾಚಿದ್ದರು. ಹೀಗೆ ಕಾಂಗ್ರೆಸ್ ಸೋಲು ಸಂಭ್ರಮಿಸಿ, ಆಪ್ ಗೆಲುವನ್ನು ಕೊಂಡಾಡಿದ ಹಿರಿಯ ಕಾಂಗ್ರೆಸ್ಸಿಗರ ನಡೆಯೂ ದೆಹಲಿ ಕೈ ಪಾಳಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರಿಂದ ಬೇಸತ್ತ ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಮುಖರ್ಜಿ ಎಂಬುವರು ''ಸರ್ ನಿಮಗೊಂದು ಪ್ರಶ್ನೆ ಕೇಳುತ್ತೇನೆ. ಬಿಜೆಪಿ ಸೋಲಿಸಲು ಕಾಂಗ್ರೆಸ್ ಯಾರಿಗಾದರೂ ಹೊರಗುತ್ತಿಗೆ ನೀಡಿತ್ತೇ?, ಆಪ್ ಗೆಲುವನ್ನು ನೀವ್ಯಾಕೆ ಈ ಪರಿ ಸಂಭ್ರಮಿಸುತ್ತೀದ್ದೀರಿ. ಹೌದು, ಎನ್ನುವುದಾದರೆ ದೆಹಲಿಯಲ್ಲಿ ನಮ್ಮ ಅಂಗಡಿ ಮುಚ್ಚುವುದೇ ಒಳ್ಳೆಯದು" ಎಂದು ಚಿದಂಬರಂಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್ನು, ದೆಹಲಿ ಚುನಾವಣೆಯಲ್ಲಿ 70ರ ಪೈಕಿ ಸುಮಾರು 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಬೆನ್ನಲ್ಲೇ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಿ.ಸಿ.ಚಾಕೊ ರಾಜೀನಾಮೆ ನೀಡಿದ್ಧಾರೆ. ಚುನಾವಣಾ ಸೋಲಿನ ಹೊಣೆ ಹೊತ್ತ ಅವರು, ರಾಜೀನಾಮೆ ಪತ್ರ ಕಾಂಗ್ರೆಸ್ ಹೈಕಮಾಂಡ್ಗೆ ರವಾನಿಸಿದ್ದಾರೆ.
First published:
February 13, 2020, 4:05 PM IST