ಕರಾಚಿ: ನೆರೆಯ ರಾಷ್ಟ್ರ ಪಾಕಿಸ್ತಾನ (Pakistan) ಕಳೆದ ಅನೇಕ ತಿಂಗಳುಗಳಿಂದ ಆರ್ಥಿಕ ಸಂಕಷ್ಟಕ್ಕೆ (Economic Crisis) ಸಿಲುಕಿದೆ. ಸಮರ್ಪಕ ಆರ್ಥಿಕ ನೀತಿ ಜಾರಿಯಾಗದ ಕಾರಣ ಸಣ್ಣಪುಟ್ಟ ವಸ್ತುಗಳ ಬೆಲೆಯೂ (Price Hike) ಆಕಾಶಕ್ಕೇರಿದೆ. ಜನರು ದಿನನಿತ್ಯದ ವಸ್ತುಗಳನ್ನು ಖರೀದಿಸಲು ಪರದಾಟ ಮಾಡ್ತಿದ್ದಾರೆ. ಅನೇಕ ವಸ್ತುಗಳ ಬೆಲೆ ಮೂರು ಪಟ್ಟು ದುಪ್ಪಟ್ಟಾಗಿದೆ. ಸರ್ಕಾರದ ಬೇಜವಾಬ್ದಾರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ.
ಈ ಮಧ್ಯೆ ಪಾಕಿಸ್ತಾನದ ಪ್ರಜೆಯೊಬ್ಬ ನಮಗೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕಿತ್ತು ಎಂದು ಹೇಳಿದ್ದಾನೆ. ಪಾಕ್ನ ಶೆಹಬಾಜ್ ಷರೀಫ್ ಸರ್ಕಾರದ ವೈಫಲ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುವಕ, ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿಯಾಗಿದ್ದರೆ ನಾವು ಕೂಡ ಸೂಕ್ತ ಬೆಲೆಗೆ ಸರಕುಗಳನ್ನು ಖರೀದಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಯೂಟ್ಯೂಬರ್ ಸನಾ ಅಮ್ಜದ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Pakistan Crisis: ಅಬ್ಬಬ್ಬಾ! ಹಾಲಿಗೆ ₹200, ಚಿಕನ್ ದರ ₹900; ಇದು ಪಾಕಿಸ್ತಾನದ ಸದ್ಯದ ಪರಿಸ್ಥಿತಿ!
'ಭಾರತ-ಪಾಕ್ ವಿಭಜನೆ ಆಗಬಾರದಿತ್ತು'
ಪಾಕಿಸ್ತಾನವು ಭಾರತದಿಂದ ವಿಭಜನೆಯಾಗದೆ ಉಳಿದಿದ್ದರೆ, ತನ್ನ ದೇಶದ ಜನರು ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಮತ್ತು ತಮ್ಮ ಮಕ್ಕಳಿಗೆ ಪ್ರತಿ ರಾತ್ರಿಯೂ ಆಹಾರ ನೀಡಲು ಸಾಧ್ಯವಾಗುತ್ತಿತ್ತು ಎಂದು ಹೇಳಿರುವ ಯುವಕ, ಭಾರತದಿಂದ ಪಾಕಿಸ್ತಾನ ಬೇರ್ಪಡಬಾರದಿತ್ತು ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಒಂದು ವೇಳೆ ದೇಶ ವಿಭಜನೆ ಆಗಿರದಿರುತ್ತಿದ್ದರೆ ನಾವು ಟೊಮ್ಯಾಟೋಗಳನ್ನು ಪ್ರತಿ ಕೆಜಿಗೆ 20 ರೂ.ದಂತೆ, ಚಿಕನ್ ಅನ್ನು ಕೆಜಿಗೆ 150 ರೂ ಮತ್ತು ಪೆಟ್ರೋಲ್ ಅನ್ನು ಲೀಟರ್ಗೆ 50 ರೂಪಾಯಿಗೆ ಖರೀದಿ ಮಾಡಲು ಸಾಧ್ಯವಾಗುತ್ತಿತ್ತು ಎಂದು ಪಾಕ್ ಪ್ರಜೆ ಹೇಳಿದ್ದಾನೆ.
ನಮ್ಮ ದುರಾದೃಷ್ಟವೆಂದರೆ ನಾವು ಇಸ್ಲಾಮಿಕ್ ದೇಶವನ್ನು ಪಡೆದಿದ್ದೇವೆ, ಆದರೆ ಇಸ್ಲಾಂ ಅನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಯುವಕ, ನಮ್ಮ ಪ್ರಧಾನಿ ನರೇಂದ್ರ ಮೋದಿ ಆಗಿರಬೇಕಿತ್ತು. ಅವರು ನಮ್ಮ ಸರ್ಕಾರಕ್ಕಿಂತ ಸಾಕಷ್ಟು ಉತ್ತಮ ಇದ್ದಾರೆ. ಭಾರತದ ಜನರು ಅವರನ್ನು ಅನುಕರಿಸುತ್ತಾರೆ, ಜೊತೆಗೆ ಅವರನ್ನು ಗೌರವಿಸುತ್ತಾರೆ. ನಮ್ಮಲ್ಲಿ ನರೇಂದ್ರ ಮೋದಿ ಇದ್ದಿದ್ದರೆ, ನಮಗೆ ನವಾಜ್, ಷರೀಫ್ ಅಥವಾ ಬೆನೆಜಿರ್ ಅಥವಾ ಇಮ್ರಾನ್, ಮತ್ತೆ ಜನರಲ್ ಪರ್ವೇಜ್ ಮುಷರಫ್ ಕೂಡ ಬೇಕಾಗುತ್ತಿರಲಿಲ್ಲ. ನಮಗೆ ಬೇಕಿರುವುದು ಪ್ರಧಾನಿ ನರೇಂದ್ರ ಮೋದಿ. ದೇಶದಲ್ಲಿನ ಎಲ್ಲ ದುಷ್ಟ ಶಕ್ತಿಗಳನ್ನು ಅವರು ಮಾತ್ರವೇ ಎದುರಿಸಬಲ್ಲರು. ಭಾರತವು ಪ್ರಸ್ತುತ ಜಗತ್ತಿನ ಐದನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿದೆ. ನಾವು ಲೆಕ್ಕದಲ್ಲಿಯೇ ಇಲ್ಲ ಎಂದು ಯುವಕ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: Pervez Musharraf Death: ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಇನ್ನಿಲ್ಲ
'ಮೋದಿ ಆಡಳಿತದಲ್ಲಿ ಬದುಕಲು ಸಿದ್ಧ'
ಅಲ್ಲದೇ, ಪಾಕಿಸ್ತಾನಿಗಳು ತಮ್ಮನ್ನು ಭಾರತದ ಜತೆ ಹೋಲಿಕೆ ಮಾಡಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಏಕೆಂದರೆ ಎರಡು ದೇಶಗಳ ನಡುವೆ ಹೋಲಿಕೆಯೇ ಇಲ್ಲ ಎಂದಿರುವ ಯುವಕ, ನಾನು ನರೇಂದ್ರ ಮೋದಿ ಅವರ ಆಡಳಿತದಲ್ಲಿ ಬದುಕಲು ಸಿದ್ಧನಿದ್ದೇನೆ ಎಂದಿರುವ ಆತ, ಮೋದಿ ಒಬ್ಬ ಮಹಾನ್ ವ್ಯಕ್ತಿ. ಅವರು ಕೆಟ್ಟ ಮನುಷ್ಯರಲ್ಲ. ಭಾರತೀಯರಿಗೆ ಟೊಮ್ಯಾಟೋ ಮತ್ತು ಚಿಕನ್ ಕಡಿಮೆ ದರದಲ್ಲಿ ಸಿಗುತ್ತಿದೆ. ನೀವು ನಿಮ್ಮ ಮಕ್ಕಳಿಗೆ ರಾತ್ರಿ ಊಟ ಮಾಡಿಸಲು ಸಾಧ್ಯವಾಗದೆ ಇದ್ದಾಗ, ನೀವು ಹುಟ್ಟಿದ ದೇಶವನ್ನು ಹಾಳು ಮಾಡಲು ಆರಂಭಿಸುತ್ತೀರಿ. ಅಲ್ಲಾಹ್ ನಮಗೆ ಮೋದಿ ಅವರನ್ನು ನೀಡಲಿ ಮತ್ತು ಅವರು ನಮ್ಮ ದೇಶವನ್ನು ಆಳ್ವಿಕೆ ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಯುವಕ ಕಣ್ಣೀರಿಟ್ಟಿದ್ದಾನೆ.
ಪಾಕಿಸ್ತಾನದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಮಾಜಿ ಪತ್ರಕರ್ತೆ ಸನಾ ಅಮ್ಜದ್ ಅವರು ಪಾಕ್ ಸರ್ಕಾರದ ವಿರುದ್ಧದ ಪ್ರತಿಭಟನೆ ವೇಳೆ, ‘ಪಾಕಿಸ್ತಾನದಿಂದ ಜೀವಂತವಾಗಿ ಓಡಿ ಹೋಗಿ, ಭಾರತದಲ್ಲಿ ಆಶ್ರಯ ಪಡೆದುಕೊಳ್ಳಿ’ ಎಂಬ ಘೋಷಣೆಗಳನ್ನು ಬೀದಿ ಬೀದಿಗಳಲ್ಲಿ ಕೂಗುತ್ತಿದ್ದ ಸ್ಥಳೀಯನನ್ನು ಪ್ರಶ್ನಿಸಿದ್ದರು. ಆಗ ಅವರು ಈ ರೀತಿ ಘೋಷಣೆ ಕೂಗುತ್ತಿದ್ದೀಯಾ ಎಂದು ಕೇಳಿದಾಗ ಯುವಕ ಮೇಲಿನಂತೆ ಉತ್ತರ ನೀಡಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ