ನವ ದೆಹಲಿ (ಜೂನ್ 10); ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಳಗಿನ ಒಳಜಗಳ ದಿನದಿನಕ್ಕೆ ಉಲ್ಭಣವಾಗುತ್ತಲೆ ಇದೆ. ಈ ಹಿಂದೆ ರಾಹುಲ್ ಗಾಂಧಿ ರಾಷ್ಟ್ರಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾಗ ಪಕ್ಷದಲ್ಲಿ ಮೊದಲ ಬಾರಿಗೆ ಅಸಮಾಧಾನ ಹೊಗೆಯಾಡಿತ್ತು. ಪ್ರಜಾತಂತ್ರ ವ್ಯವಸ್ಥೆಯಂತೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು ಎಂದು ಅನೇಕ ಹಿರಿಯ ನಾಯಕರು ಒತ್ತಾಯಿಸಿದ್ದರು. ಪ್ರಸ್ತುತ ನಾಯತ್ವದ ಬಗ್ಗೆ ಚಕಾರ ಎತ್ತಿದ್ದರು. ಜಿ23 ಭಿನ್ನಮತೀಯರ ಗುಂಪ್ನನು ರಚಿಸಿದ್ದರು. ಇದರ ಬೆನ್ನಿಗೆ ಅನೇಕ ಹಿರಿಯ ನಾಯಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಇತ್ತೀಚೆಗೆ ಜಿತಿನ್ ಪ್ರಸಾದ್ ಸಹ ಕಾಂಗ್ರೆಸ್ ತ್ಯಜಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಕಾಂಗ್ರೆಸ್ ಒಳಗಿನ ಬಿಕ್ಕಟ್ಟನ್ನು ಮತ್ತೊಮ್ಮೆ ಜಹಜ್ಜಾಹೀರು ಮಾಡಿತ್ತು. ಇದರ ಬೆನ್ನಿಗೆ ಇಂದು ಬಹಿರಂಗ ಹೇಳಿಕೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, "ನಾನು ಸಾಯುವವರೆಗೆ ಪಕ್ಷಾಂತರ ಮಾಡಿ ಬಿಜೆಪಿ ಸೇರ್ಪಡೆಯಾಗಲಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಉನ್ನತ ನಾಯಕರಿಗೆ ಈ ಹೇಳಿಕೆ ಮೂಲಕ ತಮ್ಮ ಆಕ್ಷೇಪ ಮತ್ತು ಆಗ್ರಹಗಳನ್ನು ಸ್ಪಷ್ಟವಾಗಿ ತಿಳಿಸಿರುವ ಕಪಿಲ್ ಸಿಬಲ್, "ಸಿದ್ಧಾಂತಕ್ಕಿಂತ ವೈಯಕ್ತಿಕ ಲಾಭದ ಆಧಾರದ ಮೇಲೆ ಜಿತಿನ್ ಪ್ರಸಾದ್ ಪಕ್ಷಾಂತರ ನಡೆದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅಲ್ಲದೆ, ಕಾಂಗ್ರೆಸ್ ಪಕ್ಷದ ನಾಯಕತ್ವ ಏನು ಮಾಡಿದೆ ಅಥವಾ ಮಾಡಿಲ್ಲ ಎಂಬುದರ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾವು ಭಾರತೀಯ ರಾಜಕಾರಣದಲ್ಲಿ ಒಂದು ಹಂತವನ್ನು ತಲುಪಿದ್ದೇವೆ. ಅಲ್ಲಿ ಈ ರೀತಿಯ (ಜಿತಿನ್ ನಿರ್ಧಾರ) ನಿರ್ಧಾರಗಳು ಸಿದ್ಧಾಂತವನ್ನು ಆಧರಿಸಿಲ್ಲ.
ಅವು ಈಗ ನಾನು ಪ್ರಸಾದ ರಾಮ್ ಎಂದು ಕರೆಯುವ ಆಧಾರದ ಮೇಲೆ ನಡೆಯುತ್ತಿರುವ ರಾಜಕೀಯ. ಇದು ಹಿಂದೆ ಆಯಾ ರಾಮ್ ಗಯಾ ರಾಮ್ ಆಗಿತ್ತು. ಪಶ್ಚಿಮ ಬಂಗಾಳದಲ್ಲಿ ಇದು ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಬಿಜೆಪಿ ಯಶಸ್ವಿಯಾಗಲಿದೆ ಎಂದು ಭಾವಿಸಿದ್ದರಿಂದ ಜನರು ಇದ್ದಕ್ಕಿದ್ದಂತೆ ಬಿಜೆಪಿಗೆ ಪಕ್ಷಾಂತರಗೊಂಡರು. ಈಗ ಬಹುಪಾಲು ರಾಜಕಾರಣಿಗಳು ಚುನಾವಣೆಗಳಲ್ಲಿ ಹೋರಾಡಲು ಬಯಸುವುದು ಒಂದು ಸಿದ್ಧಾಂತದ ಬಗೆಗಿನ ನಂಬಿಕೆಗಳ ಆಧಾರದ ಮೇಲೆ ಅಲ್ಲ. ಬದಲಾಗಿ ವೈಯಕ್ತಿಕವಾಗಿ ಏನನ್ನಾದರೂ ಪಡೆಯಬಹುದು ಎಂಬ ದೃಢೀಕರಣದ ಆಧಾರದ ಮೇಲೆ. ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲೂ ಇದೇ ಸಂಭವಿಸಿದೆ" ಎಂದು ಕಪಿಲ್ ಸಿಬಲ್ ತಿಳಿಸಿದ್ದಾರೆ.
"ಕಾಂಗ್ರೆಸ್ಗೆ ಸುಧಾರಣೆಗಳು ಅಗತ್ಯವಾಗಿವೆ ಮತ್ತು ಪಕ್ಷದ ನಾಯಕತ್ವವು ಇದನ್ನು ಆಲಿಸಬೇಕಾಗಿದೆ. ಸಮಸ್ಯೆಗಳನ್ನು ಬಗೆಹರಿಸಿದ್ದರೂ, ನಾನು ಏನನ್ನೂ ಪಡೆಯುತ್ತಿಲ್ಲ ಎಂದು ಒಬ್ಬ ವ್ಯಕ್ತಿಯು ಭಾವಿಸಿದರೆ ಅವನು ಪಕ್ಷದವನ್ನು ತ್ಯಜಿಸುತ್ತಾನೆ. ಜಿತಿನ್ ಹೊರಹೋಗಲು ಒಳ್ಳೆಯ ಕಾರಣಗಳಿರಬಹುದು. ಪಕ್ಷವನ್ನು ತೊರೆದಿದ್ದಕ್ಕಾಗಿ ನಾನು ಅವರನ್ನು ದೂಷಿಸುವುದಿಲ್ಲ. ಅವರು ಬಿಜೆಪಿಗೆ ಸೇರಿದ ಕಾರಣಗಳಿಗಾಗಿ ನಾನು ಅವರನ್ನು ದೂಷಿಸುತ್ತೇನೆ.
ಮೂರು ದಶಕಗಳಿಂದ ತಾನು ವಿರೋಧಿಸುತ್ತಿದ್ದ ಒಂದು ಸಿದ್ಧಾಂತವನ್ನು ಈಗ ಸ್ವೀಕರಿಸುತ್ತಿದ್ದೇನೆ ಎಂದು ಅವರು ಯಾವ ಮುಖದಿಂದ ಹೇಳಬಹುದು? ತತ್ವಬದ್ಧ ರಾಜಕೀಯದ ಬಗ್ಗೆ ಮಾತನಾಡುವ ಬಿಜೆಪಿಯವರು, ಜಿತಿನ್ ಅವರನ್ನು ಯಾವ ಮುಖದಿಂದ ತೆಗೆದುಕೊಳ್ಳುತ್ತಾರೆ? ಜನರು ಈ ರೀತಿಯ ರಾಜಕೀಯದ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ" ಎಂದು ಸಿಬಲ್ ಅಭುಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ