news18-kannada Updated:February 10, 2020, 8:38 AM IST
ಸುರೇಶ್ ಭಯ್ಯಾಜಿ ಜೋಶಿ.
ಪಣಜಿ : ಬಿಜೆಪಿ ಪಕ್ಷವನ್ನು ವಿರೋಧಿಸುವುದು ಹಾಗೂ ಹಿಂದುತ್ವವನ್ನು ವಿರೋಧಿಸುವುದು ಪರಸ್ಪರ ಬೇರೆ ಬೇರೆ ಪ್ರಕ್ರಿಯೆ, ಇವೆರಡೂ ಸಮನಲ್ಲ ಎಂದು ಹೇಳುವ ಮೂಲಕ ಆರ್ಎಸ್ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಬಿಜೆಪಿ ಸೈದ್ಧಾಂತಿಕ ಪೋಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಗೋವಾದ ರಾಜಧಾನಿ ಪಣಜಿಯಲ್ಲಿ ಭಾನುವಾರ ಸಂಜೆ ಆರ್ಎಸ್ಎಸ್ ಏರ್ಪಡಿಸಿದ್ದ “ವಿಶ್ವಗುರು ಭಾರತ” ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಭಯ್ಯಾಜಿ ಜೋಶಿಯವರನ್ನು ಪ್ರಶ್ನಿಸಿದ್ದ ವ್ಯಕ್ತಿಯೊಬ್ಬರು, “ಹಿಂದೂಗಳು ಏಕೆ ತಮ್ಮ ಸಮುದಾಯದ ಶತೃಗಳಾಗುತ್ತಿದ್ದಾರೆ?” ಎಂದು ಕೇಳಿದ್ದರು.
ಈ ಪ್ರಶ್ನೆಗೆ ಉತ್ತರ ನೀಡುವ ವೇಳೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಸುರೇಶ್ ಭಯ್ಯಾಜಿ ಜೋಶಿ, “ಬಿಜೆಪಿ ಪಕ್ಷವನ್ನು ವಿರೋಧಿಸುವವರನ್ನು ನಾವು ಹಿಂದೂಗಳ ಅಥವಾ ಹಿಂತ್ವದ ವಿರೋಧಿಗಳು ಎಂದು ಪರಿಗಣಿಸಬಾರದು. ಇದು ಎಂದಿಗೂ ಮುಂದುವರಿಯುವ ರಾಜಕೀಯ ಹೋರಾಟ. ಹೀಗಾಗಿ ಇದನ್ನು ಹಿಂದುಗಳೊಂದಿಗೆ ಸಂಬಂಧ ಕಲ್ಪಿಸಬಾರದು. ಹಿಂದೂ ಸಮಾಜ ಎಂದರೆ ಅದು ಬಿಜೆಪಿ ಎಂದು ಅರ್ಥವಲ್ಲ. ಹಿಂದುಗಳು ಬಿಜೆಪಿ ಪರ ಇಲ್ಲ ಎಂದ ಮಾತ್ರಕ್ಕೆ ಅವರು ಹಿಂದೂ ಸಮಾಜದ ವಿರೋಧಿಗಳು ಎಂದೂ ಅರ್ಥವಲ್ಲ” ಎಂದು ಅವರು ತಿಳಿಸಿದ್ದಾರೆ.
"ಛತ್ರಪತಿ ಶಿವಾಜಿ ಮಹಾರಾಜರು ಸಹ ಹಿಂದೂ ರಾಜರ ವಿರುದ್ಧ ಯುದ್ಧರಂಗ ಪ್ರವೇಶಿಸಿ ಹೋರಾಡಿದ್ದಾರೆ. ಹೋರಾಟದ ಸಂದರ್ಭದಲ್ಲಿ ಧರ್ಮ ಎಂಬುದನ್ನು ಎಲ್ಲರೂ ಮರೆತುಬಿಡುತ್ತಾರೆ. ಹೀಗಾಗಿ ಬಿಜೆಪಿ ಮತ್ತು ಹಿಂದುತ್ವವನ್ನು ಒಟ್ಟಾಗಿ ಸಂಯೋಜಿಸಿ ಗೊಂದಲಕ್ಕೆ ಈಡಾಗುವ ಅವಶ್ಯಕತೆ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಡೀ ರಾಷ್ಟ್ರದಾದ್ಯಂತ ಕೇಂದ್ರ ಸರ್ಕಾರದ ವಿವಾದಾದತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ಪ್ರತಿಭಟನೆಗಳು ದಾಖಲಾಗುತ್ತಿರುವ ಇಂತಹ ಸಂದರ್ಭದಲ್ಲಿ ಬಿಜೆಪಿ ಹಾಗೂ ಹಿಂದುತ್ವದ ಎಂಬುದು ಪರಸ್ಪರ ಬೇರೆ ಬೇರೆ ಪರಿಕಲ್ಪನೆಗಳು ಎಂದು ವ್ಯಾಖ್ಯಾನಿಸಿರುವ ಆರ್ಎಸ್ಎಸ್ ಮುಖಂಡ ಭಯ್ಯಾಜಿ ಜೋಶಿ ಹೇಳಿಕೆ ಇದೀಗ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಕುತೂಹಲಕ್ಕೆ ಹಾಗೂ ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ : ‘ಕಲ್ಲಿಗೆ ಕಲ್ಲು, ಕತ್ತಿಗೆ ಕತ್ತಿ’ – ಸಿಎಎ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ ರಾಜ್ ಠಾಕ್ರೆ
First published:
February 10, 2020, 8:36 AM IST