ಇತ್ತೀಚೆಗೆ ಪ್ರವೇಶ ಪರೀಕ್ಷೆ, ನೇಮಕಾತಿ ಪರೀಕ್ಷೆಯಲ್ಲಿ ವಂಚನೆಗೈಯ್ಯುವ ಅಭ್ಯರ್ಥಿಗಳ ಪಟ್ಟಿ ಬೆಳೆಯುತ್ತಾ ಇದೆ. ಉದ್ಯೋಗ ಪಡೆಯಬೇಕೆಂಬ ಆಸೆಯಿಂದ ಲಂಚ, ಭ್ರಷ್ಟಾಚಾರದಂತಹ ಸಾಮಾಜಿಕ ದ್ರೋಹ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಲೇ ಇದೆ.ಉತ್ತರಪ್ರದೇಶದ ಗೋರಖ್ಪುರದಲ್ಲಿ ಇದೇ ರೀತಿಯ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.ದೆಹಲಿ ಪೊಲೀಸ್ ಕಾನ್ಸ್ಟೇಬಲ್ಗಳ ನೇಮಕಾತಿಗಾಗಿ ದೈಹಿಕ ಪರೀಕ್ಷೆ ವೇಳೆ ಒಂದೇ ಅಭ್ಯರ್ಥಿಯ ಫೋಟೋ ಮೂರು ಪ್ರವೇಶ ಪತ್ರಗಳಲ್ಲಿರುವ ಘಟನೆ ಕಂಡು ಪೊಲೀಸರು ಆಶ್ಚರ್ಯಕ್ಕೊಳಗಾಗಿದ್ದಾರೆ.
ದೆಹಲಿ ಪೊಲೀಸ್ ನೇಮಕಾತಿಗಾಗಿ ಉತ್ತರ ಪ್ರದೇಶದ ಗೋರಖ್ಪುರದ ಇಬ್ಬರು ಸಹೋದರರು ಸೇರಿದಂತೆ ಮೂವರು ಪುರುಷರು 27 ಲಕ್ಷ ರೂಪಾಯಿಗಳನ್ನು ಪರೀಕ್ಷೆ ಬರೆಯಲು ಪಾವತಿಸಿದ್ದಾರೆ. ಕನಿಷ್ಟ ಮೂರು ಪರೀಕ್ಷಾ ಕೇಂದ್ರಗಳ ವಿಚಾರಣೆ ನಡೆಸಿದ ಪೊಲೀಸರು ಇದುವರೆಗೆ 24 ಮಂದಿ ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯನ್ನು ಡಿಸೆಂಬರ್ 2020ರಲ್ಲಿ ನಡೆಸಲಾಗಿತ್ತು. ಹಗರಣದ ತನಿಖೆ ನಡೆಸುತ್ತಿರುವ ಈಶಾನ್ಯ ಜಿಲ್ಲೆಯ ವಿಶೇಷ ತನಿಖಾ ತಂಡವು ಈವರೆಗೆ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಸಂಪರ್ಕ ಜಾಲ ಇರುವುದನ್ನು ಪತ್ತೆ ಹಚ್ಚಿದ್ದಾರೆ ಮತ್ತು 16 ಆರೋಪಪಟ್ಟಿಯನ್ನು ದಾಖಲಿಸಿದ್ದಾರೆ.
ದೆಹಲಿಯ ಬಾಬಾ ಹರಿದಾಸ್ ನಗರದ ಜರೋಡಾ ಕಾಲಾನ್ನಲ್ಲಿ ನೆಲೆಸಿರುವ ಮೂವರು ಸಹೋದರರಾದ ನೀಲೇಶ್ ಕುಮಾರ್ ಖೈರ್ವಾ, ನವೀನ್ ಕುಮಾರ್ ಖೈರ್ವಾ ಮತ್ತು ಸತೀಶ್ ಕುಮಾರ್ ಎಂಬುವವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಈ ಮೂವರ ಪ್ರವೇಶ ಪತ್ರಗಳನ್ನು ಸ್ಕ್ಯಾನ್ ಮಾಡಿದಾಗ ಮೂವರ ಪ್ರವೇಶ ಪತ್ರದಲ್ಲೂ ಒಂದೇ ಅಭ್ಯರ್ಥಿಯ ಫೋಟೋ ಇರುವುದು ತಿಳಿದು ಬಂದಿದೆ. ಅವರ ಫೋಟೋ ನಮ್ಮ ಡೇಟಾಬೇಸ್ನಲ್ಲಿ ಲಭ್ಯವಿದೆ. ಈಗಾಗಲೇ ಅವರನ್ನು ಬಂಧನಕ್ಕೊಳಪಡಿಸಿದ್ದು, ಹೆಚ್ಚಿನ ವಿವರಗಳನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಲಿಖಿತ ಪರೀಕ್ಷೆ ತೆಗೆದುಕೊಂಡ ಅರ್ಜಿದಾರರ ಪ್ರವೇಶ ಪತ್ರಗಳನ್ನು ಅವರ ದೈಹಿಕ ಪರೀಕ್ಷೆಯ ಮೊದಲು ಪರಿಶೀಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ಈ ವರ್ಷ ಮೊದಲ ಬಾರಿಗೆ, ದೈಹಿಕ ಪರೀಕ್ಷೆಗೆ ಹಾಜರಾಗುವ ಅರ್ಜಿಗಳಿಗೆ ಪ್ರತ್ಯೇಕವಾಗಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲಾಯಿತು. ಎರಡು ಪರೀಕ್ಷೆಗಳಿಗೆ ಹಾಜರಾಗುವ ಅರ್ಜಿದಾರರ ಚಿತ್ರಗಳು ಹೊಂದಿಕೆಯಾಗದಿದ್ದಾಗ ಇವರ ಮೋಸ ಬಯಲಿಗೆ ಬಂದಿದೆ.
ಈ ಮೂವರಲ್ಲದೇ ಪ್ರಸ್ತುತ 11 ಅಭ್ಯರ್ಥಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಡಿಸಿಪಿ (ನೇಮಕಾತಿ ಕೋಶ) ಶ್ವೇತಾ ಚೌಹಾನ್ ಮಾಹಿತಿ ನೀಡಿದರು.
ಬಂಧಿತರನ್ನು ಪ್ರದೀಪ್ ಕುಮಾರ್ (27), ರೋಹಿತ್ ಕುಮಾರ್ (22), ಸಚಿನ್ ಕುಮಾರ್ (22), ದೀಪಕ್ ಕುಮಾರ್ (22), ಸತವೀರ್ ಸಿಂಗ್ (21), ರಿಂಕು ಕುಮಾರ್ (19), ರಿಂಕು ಕುಮಾರ್ ಮೀನಾ (24), ಅರವಿಂದ್ ಕುಮಾರ್ (22), ಹರ್ ಪ್ರಸಾದ್ (26), ಉಮೇಶ್ ಕುಮಾರ್ ಮೀನಾ (22) ಮತ್ತು ಮೋನು ಕುಮಾರ್ (20) ಎಂದು ಗುರುತಿಸಲಾಗಿದೆ.
ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ವಂಚಿತರನ್ನು ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದ ಕಾರಣ ದೆಹಲಿ ಪೊಲೀಸರು ಹಲವಾರು ಪರಿಶೀಲನೆ ನಡೆಸಿದ ನಂತರ ವಂಚನೆಗೈದವರನ್ನು ಹಿಡಿಯಲಾಗಿದೆ ಎಂದು ಹೇಳಿದರು.
ಸೋನಿಯಾ ವಿಹಾರ್ ಮತ್ತು ಬಾಬಾ ಹರಿದಾಸ್ ನಗರ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ನಾವು ಪ್ರಕರಣದ ತನಿಖೆ ನಡೆಸಲು ಮತ್ತು ಇಡೀ ತಂಡದ ಪಿತೂರಿಯನ್ನು ಬಹಿರಂಗಪಡಿಸಲು ಮೀಸಲು ತಂಡವನ್ನು ರಚಿಸಿದ್ದೇವೆ ಎಂದು ಡಿಸಿಪಿ (ಈಶಾನ್ಯ) ಸಂಜಯ್ ಕುಮಾರ್ ಸೈನ್ ಹೇಳಿದ್ದಾರೆ.
ಪುರುಷರು ಮತ್ತು ಮಹಿಳಾ ಕಾನ್ಸ್ಟೇಬಲ್ಗಳ ನೇಮಕಾತಿಯನ್ನು ದೆಹಲಿ ಪೊಲೀಸರು ನಡೆಸುತ್ತಿದ್ದು, ಸುಮಾರು 15 ಲಕ್ಷ ಅರ್ಜಿದಾರರು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಹಿಂದೆ ಬ್ಲೂಟೂತ್ ಸಾಧನಗಳನ್ನು ಬಳಸಿ ಮೋಸ ಮಾಡಿದ್ದ 9 ಮಂದಿಯನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದೆಹಲಿಯ ಮೂರು ಸ್ಥಳಗಳಲ್ಲಿ 67,740 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಚೌಹಾಣ್ ತಿಳಿಸಿದ್ದಾರೆ. ದೈಹಿಕ ಪರೀಕ್ಷೆಗೆ ವ್ಯಾಪಕವಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಎಲ್ಲಾ ಕೋವಿಡ್-ಸಂಬಂಧಿತ ಮಾರ್ಗಸೂಚಿಗಳು ಅನುಸರಿಸಲಾಗುತ್ತಿದೆ. ಸುಮಾರು 1,200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ