ತಮ್ಮ ಮಕ್ಕಳು (Children) ಸುಖವಾಗಿರಬೇಕು, ಚೆನ್ನಾಗಿರಬೇಕು ಎಂದೇ ಹೆಚ್ಚಿನ ತಂದೆ ತಾಯಿ ಬಯಸುತ್ತಾರೆ. ಮಕ್ಕಳಿಗಾಗಿ ತಮ್ಮ ಸರ್ವ ಸುಖವನ್ನು ತ್ಯಾಗ ಮಾಡುವ ಪೋಷಕರು (Kerala Parents) ಭೂಮಿಯಲ್ಲಿ ಅವತರಿಸಿದ ದೇವರ ರೂಪ ಎಂದೇ ಪೂಜನೀಯರು. ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತೆ ಪ್ರಮುಖ ವಕೀಲರಾದ ಸಿ ಶುಕ್ಕೂರ್ ಹಾಗೂ ಅವರ ಪತ್ನಿ ತಮ್ಮ ಮೂವರು ಹೆಣ್ಣುಮಕ್ಕಳಿಗಾಗಿ (Girls) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಮಾತಾ ಪಿತರ ಪ್ರೀತಿ ಮಕ್ಕಳೆಡೆಗೆ ನಿಸ್ವಾರ್ಥವಾದುದು ಎಂಬುದನ್ನು ನಿರೂಪಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಆಸ್ತಿಸೇರಲು ಮರುಮದುವೆಯಾಗುತ್ತಿರುವ ದಂಪತಿಗಳು
ಶುಕ್ಕೂರ್ ಹಾಗೂ ಅವರ ಪತ್ನಿ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ಮಾಜಿ ವೈಸ್ ಚಾನ್ಸಲರ್ ಡಾ ಶೀನಾ ತಮ್ಮ ಆಸ್ತಿ ಮಕ್ಕಳಾದ ಮೂವರು ಹೆಣ್ಣುಮಕ್ಕಳಿಗೆ ಪೂರ್ತಿಯಾಗಿ ಸಲ್ಲಬೇಕು ಎಂಬ ನಿಟ್ಟಿನಲ್ಲಿ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮರುಮದುವೆಯಾಗಲಿದ್ದಾರೆ.
ಅಕ್ಟೋಬರ್ 6, 1994 ರಂದು ಷರಿಯಾ ಕಾನೂನಿನ ಅಡಿಯಲ್ಲಿ ವಿವಾಹವಾದ ದಂಪತಿಗಳು ಇದೀಗ ವಿಶೇಷ ವಿವಾಹ ಕಾಯ್ದೆಯಡಿ ಮರುಮದುವೆಯನ್ನು ಆಯ್ಕೆಮಾಡಿಕೊಂಡಿದ್ದಾರೆ.
ನಮ್ಮ ಆಸ್ತಿಪಾಸ್ತಿ ನಮ್ಮ ಮೂವರು ಹೆಣ್ಣುಮಕ್ಕಳಿಗೆ ಸಂಪೂರ್ಣವಾಗಿ ಸಲ್ಲಬೇಕು ಎಂಬ ನಿಟ್ಟಿನಲ್ಲಿ ಮರುಮದುವೆಯಾಗುವ ನಿರ್ಧಾರ ತಾಳಿದ್ದೇವೆ ಎಂದು ಶುಕ್ಕೂರ್ ದಂಪತಿಗಳು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
ಗಂಡು ಸಂತಾನವಿಲ್ಲದಿದ್ದರೆ ಸಹೋದರರಿಗೆ ಆಸ್ತಿ ಸಲ್ಲಿಕೆ
ದೇಶದಲ್ಲಿ ಪ್ರಚಲಿತದಲ್ಲಿರುವ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಹೆಣ್ಣುಮಕ್ಕಳು ತಂದೆಯ ಆಸ್ತಿಯ ಮೂರನೇ ಎರಡರಷ್ಟು ಭಾಗವನ್ನು ಮಾತ್ರ ಪಡೆಯುತ್ತಾರೆ. ಉಳಿದವು ಅವರ ಸಹೋದರರಿಗೆ ಹೋಗುತ್ತದೆ ಎಂಬುದು 2022 ರ ಎನ್ನ ತಾನ್ ಕೇಸ್ ಕೊಡು ಚಿತ್ರದಲ್ಲಿ ನಟಿಸಿರುವ ಶುಕ್ಕೂರ್ ತಿಳಿಸಿದ್ದಾರೆ.
ತಹಶೀಲ್ದಾರ್ ನೀಡಿರುವ ಉತ್ತರಾಧಿಕಾರ ಪ್ರಮಾಣಪತ್ರದಲ್ಲಿ ನನ್ನ ಸಹೋದರರು ವಾರಸುದಾರರಾಗಿದ್ದಾರೆ. ನಮಗೆ ಪುರುಷ ಸಂತತಿ ಇಲ್ಲದಿರುವುದರಿಂದ ನಮ್ಮ ಆಸ್ತಿ ಸಹೋದರರಿಗೆ ಸೇರುತ್ತದೆ. ಇದು ಮಹಿಳೆಯರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ನಿರ್ಲಜ್ಜ ತಾರತಮ್ಯವಾಗಿದೆ ಎಂದು ಶಕ್ಕೂರ್ ತಿಳಿಸಿದ್ದಾರೆ.
ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಸಮಾನತೆಯ ಹಕ್ಕನ್ನು ನಿರಾಕರಿಸಿರುವುದು ವಿಷಾದನೀಯ
ಸಂವಿಧಾನದ ಸೆಕ್ಷನ್ 14 ರ ಪ್ರಕಾರ, ಧರ್ಮ, ಜಾತಿ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಮುಸ್ಲಿಂ ಧರ್ಮವನ್ನು ಅನುಸರಿಸುತ್ತಿರುವ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಈ ಹಕ್ಕನ್ನು ನಿರಾಕರಿಸಿರುವುದು ಅತ್ಯಂತ ವಿಷಾದನೀಯ ಎಂಬುದು ಶುಕ್ಕೂರ್ ಅಭಿಪ್ರಾಯವಾಗಿದೆ.
ಎರಡು ಬಾರಿ ಅಪಘಾತಕ್ಕೊಳಗಾಗಿ ಸ್ವಲ್ಪದರಲ್ಲೇ ನಾನು ಬಚಾವಾಗಿರುವೆ, ಹೀಗಾಗಿ ನಾನು ಇಲ್ಲದಿದ್ದರೆ ಮುಂದೆ ನನ್ನ ಕುಟುಂಬದ ಸ್ಥಿತಿ ಏನಾಗುತ್ತದೆ ಎಂಬುದು ನನ್ನನ್ನು ಯೋಚಿಸುವಂತೆ ಮಾಡಿತು. ಹಾಗಾಗಿ ನನ್ನ ಆಸ್ತಿಯ ಏಕೈಕ ವಾರಸುದಾರರು ನನ್ನ ಹೆಣ್ಣುಮಕ್ಕಳಾಗಿರಬೇಕೆಂದು ನಾನು ಬಯಸುತ್ತೇನೆ ಎಂದು ಶುಕ್ಕೂರ್ ತಿಳಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಭಾಗ ಮಾತ್ರ ಲಭ್ಯ
ಮುಸ್ಲಿಂ ಉತ್ತರಾಧಿಕಾರದ ಕುರಿತ ನ್ಯಾಯಾಲಯದ ಆದೇಶದ ಆಧಾರವಾಗಿರುವ ಡಿ ಹೆಚ್ ಮುಲ್ಲಾ ಬರೆದಿರುವ ಮುಹಮ್ಮದನ್ ಕಾನೂನಿನ ತತ್ವಗಳ ಪ್ರಕಾರ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಮತ್ತು ಉಳಿದ ಭಾಗವನ್ನು ಅವರ ಸಹೋದರರು ಪಡೆಯುತ್ತಾರೆ ಎಂಬುದು ಶುಕ್ಕೂರ್ ಹೇಳಿಕೆಯಾಗಿದೆ.
ಇದಕ್ಕಿರುವ ಪರಿಹಾರವೆಂದರೆ 1954 ರಲ್ಲಿ ಸಂಸತ್ತು ಅಂಗೀಕರಿಸಿದ ವಿಶೇಷ ವಿವಾಹ ಕಾಯ್ದೆಯನ್ನು ಆರಿಸಿಕೊಳ್ಳುವುದು ಎಂಬುದು ಶುಕ್ಕೂರ್ ಮಾತಾಗಿದೆ.
ಕುಟುಂಬದವರ ಸಮ್ಮುಖದಲ್ಲಿ ಮರುಮದುವೆ
1994 ರಲ್ಲಿ ಚೆರುವತ್ತೂರಿನ ನಸೀಮಾ ಮಂಜಿಲ್ನಲ್ಲಿ ದಂಪತಿಗಳ ವಿವಾಹವನ್ನು ದಿವಂಗತ ಪಾಣಕ್ಕಾಡ್ ಸೈಯದ್ ಹೈದರ್ ಅಲಿ ಶಿಹಾಬ್ ತಂಗಳ್ ನೇರವೇರಿಸಿದ್ದು, ಮಾರ್ಚ್ 8 ರಂದು ಹೊಸದುರ್ಗದ ಉಪನೋಂದಣಿ ಕಚೇರಿಯಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಂಪತಿಗಳು ಮತ್ತೆ ವಿವಾಹಿತರಾಗಲಿದ್ದಾರೆ ಎಂದು ಶುಕ್ಕೂರ್ ತಿಳಿಸಿದ್ದಾರೆ.
ವಿಶೇಷ ವಿವಾಹ ಕಾಯ್ದೆಯ ಪ್ರಕಾರ ಯಾವುದೇ ವ್ಯಕ್ತಿಯ ಆಸ್ತಿಗೆ ಉತ್ತರಾಧಿಕಾರವನ್ನು ಭಾರತೀಯ ಉತ್ತರಾಧಿಕಾರ ಕಾಯಿದೆಯಿಂದ ನಿಯಂತ್ರಿಸಲ್ಪಡುತ್ತದೆ ಎಂಬುದು ಶುಕ್ಕೂರ್ ಹೇಳಿಕೆಯಾಗಿದೆ.
ಶುಕ್ಕೂರ್ ಅವರು ಫೆಬ್ರವರಿ 3 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹಗಳಿಗೆ ಕಡ್ಡಾಯವಾಗಿರುವ 30 ದಿನಗಳ ನೋಟಿಸ್ ಪಡೆದುಕೊಂಡಿರುವುದಾಗಿ ತಿಳಿಸಿದ್ದು, ಅಲ್ಲಾ ಮತ್ತು ನಮ್ಮ ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಜೀವನದ ಪ್ರತಿಯೊಂದು ಅಂಶದಲ್ಲೂ ಸಮಾನತೆ ಹರಡಲಿ ಎಂದು ಶುಕ್ಕೂರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ