ದೆಹಲಿ ಗಲಭೆ; ರಾಷ್ಟ್ರಪತಿ ಶೌರ್ಯ ಪದಕಕ್ಕೆ ಅರ್ಜಿ ಸಲ್ಲಿಸಿದ ವಿವಾದಾತ್ಮಕ ಅಧಿಕಾರಿ ವೇದ ಪ್ರಕಾಶ್ ಸೂರ್ಯ
ಕಪಿಲ್ ಮಿಶ್ರಾ ಪ್ರಚೋದನಾಕಾರಿ ಭಾಷಣ ಮಾಡುವಾಗ ಈಶಾನ್ಯ ದೆಹಲಿಯ ಡಿಸಿಪಿಯಾಗಿದ್ದ ವೇದ ಪ್ರಕಾಶ್ ಸೂರ್ಯ ಅವರು ಮಿಶ್ರಾ ಪಕ್ಕದಲ್ಲೇ ಇರುವ ವಿಡಿಯೋ ಮತ್ತು ಫೋಟೊಗಳು ಆಗಲೇ ವೈರಲ್ ಆಗಿ ವಿವಾದ ಸೃಷ್ಟಿಯಾಗಿತ್ತು.
ವಿವಾದಾತ್ಮಕ ಭಾಷಣಮಾಡುತ್ತಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಬೆನ್ನಿನ ಹಿಂದೆ ನಿಂತಿರುವ ವೇದ ಪ್ರಕಾಶ್ ಸೂರ್ಯ.
ನವ ದೆಹಲಿ (ಜುಲೈ 03); ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ದೆಹಲಿ ಕೋಮು ಗಲಭೆಗೆ ಇಡೀ ದೇಶ ಬೆಚ್ಚಿ ಬಿದ್ದಿತ್ತು. ನೂರಾರು ಜನ ಈ ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಬಿಜೆಪಿ ನಾಯಕರ ಕೋಮು ಪ್ರಚೋಧನಾ ಭಾಷಣವೇ ಈ ಗಲಭೆಗೆ ಕಾರಣ ಎಂದು ಆರೋಪಿಸಲಾಗಿತ್ತು. ಬಿಜೆಪಿ ರಾಜಕಾರಣಿ ಕಪಿಲ್ ಮಿಶ್ರಾ ವಿವಾದಾತ್ಮಕ ಭಾಷಣ ಮಾಡುವಾಗ ಪಕ್ಕದಲ್ಲೇ ನಿಂತಿದ್ದ ಈಶಾನ್ಯ ದೆಹಲಿಯ ಮಾಜಿ ಡಿಸಿಪಿ, ವೇದ ಪ್ರಕಾಶ್ ಸೂರ್ಯ ಕೂಡ ಇದ್ದರು. ಆದರೆ, ಇದೀಗ ವೇದ ಪ್ರಕಾಶ್ ಸೂರ್ಯ ಸೇರಿದಂತೆ ಹಲವು ಪೊಲೀಸರು ರಾಷ್ಟ್ರಪತಿಗಳು ನೀಡುವ ಶೌರ್ಯ ಪದಕಕ್ಕಾಗಿ ಅರ್ಜಿ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಕಪಿಲ್ ಮಿಶ್ರಾ ಪ್ರಚೋದನಾಕಾರಿ ಭಾಷಣ ಮಾಡುವಾಗ ಈಶಾನ್ಯ ದೆಹಲಿಯ ಡಿಸಿಪಿಯಾಗಿದ್ದ ವೇದ ಪ್ರಕಾಶ್ ಸೂರ್ಯ ಅವರು ಮಿಶ್ರಾ ಪಕ್ಕದಲ್ಲೇ ಇರುವ ವಿಡಿಯೋ ಮತ್ತು ಫೋಟೊಗಳು ಆಗಲೇ ವೈರಲ್ ಆಗಿ ವಿವಾದ ಸೃಷ್ಟಿಯಾಗಿತ್ತು. ಕಪಿಲ್ ಮಿಶ್ರಾರ ಆ ಭಾಷಣದ ಮರುದಿನವೇ ಈಶಾನ್ಯ ದೆಹಲಿಯಲ್ಲಿ ಗಲಭೆ ಭುಗಿಲೆದ್ದಿತ್ತು.
ಕಳೆದ ವರ್ಷ ಫೆಬ್ರವರಿ 23 ರಂದು ಸಿಎಎ ಪರ ರ್ಯಾಲಿಯಲ್ಲಿ ಈ ಘಟನೆ ಸಂಭವಿಸಿತ್ತು. ವೇದ ಪ್ರಕಾಶ್ ಸೂರ್ಯ, ಗಲಭೆಯಲ್ಲಿ ನೂರಾರು ಜನರ ಪ್ರಾಣ ಮತ್ತು ಆಸ್ತಿಗಳನ್ನು ಉಳಿಸಿದ್ದಾಗಿ ಮತ್ತು ಗಲಭೆಯ ಸಮಯದಲ್ಲಿ "ಅಸಾಧಾರಣ" ಕೆಲಸವನ್ನು ಮಾಡಿದ್ದಾಗಿ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ವೇದಪ್ರಕಾಶ ಸೂರ್ಯ ಅವರ ಜೆಸಿಪಿ ಆಗಿದ್ದ ಅಲೋಕ್ ಕುಮಾರ್ ಮತ್ತು ಅಧೀನ ಅಧಿಕಾರಿಗಳು ಸೇರಿದಂತೆ ಸುಮಾರು 25 ಪೊಲೀಸ್ ಅಧಿಕಾರಿಗಳು ಪ್ರಶಸ್ತಿಗಾಗಿ ತಮ್ಮ ಅರ್ಜಿಗಳನ್ನು ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಸಲ್ಲಿಸಿದ್ದಾರೆ. ದೆಹಲಿ ಗಲಭೆಯ ಸಂದರ್ಭದಲ್ಲಿ ತಮ್ಮ ಪಾತ್ರವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ಜೀವ ಮತ್ತು ಆಸ್ತಿಯನ್ನು ಉಳಿಸುವ” ಅಥವಾ “ಅಪರಾಧವನ್ನು ತಡೆಗಟ್ಟುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ" ಮಾಡಿದ ಕಾರ್ಯಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ನೀಡಲಾಗುತ್ತದೆ.
"ಈ ಪ್ರಸ್ತಾಪವನ್ನು ಜಿಲ್ಲೆಯಿಂದ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅದನ್ನು ಹಿರಿಯ ಅಧಿಕಾರಿಗಳ ಸಮಿತಿಯ ಮುಂದೆ ಇಡಲಾಗುತ್ತದೆ ಮತ್ತು ಅಂತಿಮವಾಗಿ ದೆಹಲಿ ಪೊಲೀಸ್ ಆಯುಕ್ತರಿಂದ ಅನುಮೋದನೆ ಪಡೆಯಲಾಗುತ್ತದೆ. ಫೈಲ್ ಅನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ವೇದಪ್ರಕಾಶ್ ಸೂರ್ಯ ಅರ್ಜಿ ಸಲ್ಲಿಸಿದ್ದರು ಮತ್ತು ಅವರ ಅರ್ಜಿಯನ್ನು ಇತರ 24 ಪೊಲೀಸ್ ಅಧಿಕಾರಿಗಳ ಅರ್ಜಿಗಳ ಜೊತೆಗೆ ಪ್ರಧಾನ ಕಚೇರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, 23 ಪೊಲೀಸ್ ಸಿಬ್ಬಂದಿ “ಅಸಾಧಾರಣ ಕಾರ್ಯ ಪುರಸ್ಕಾರ” ಪ್ರಶಸ್ತಿಗಾಗಿ ಮತ್ತು 14 ಮಂದಿ ಔಟ್-ಆಫ್-ಟರ್ನ್-ಪ್ರಮೋಷನ್ ಆಧಾರದಲ್ಲಿ ಪದಕಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ ಎಂದು ವರದಿಯಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ