ವಯನಾಡು (ಆ. 17): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟಿದ ಕ್ಷಣದಲ್ಲಿ ಅವರನ್ನು ಎತ್ತಿಕೊಂಡು ಮುದ್ದಾಡಿದವರು ನರ್ಸ್ ರಾಜಮ್ಮ ಅಮ್ಮ. ಅವರನ್ನು ಇಂದು ಮತ್ತೆ ವಯನಾಡು ಸಂಸದ ಭೇಟಿಯಾಗಿದ್ದು, ಅವರೊಂದಿಗಿನ ಹೃದಯ ಸ್ಪರ್ಶಿ ಕ್ಷಣಗಳನ್ನು ಕೇರಳ ಕಾಂಗ್ರೆಸ್ ಟ್ವಿಟರ್ ಖಾತೆ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ನರ್ಸ್ ರಾಜಮ್ಮ ಅವರು, ರಾಹುಲ್ ಗಾಂಧಿ ಅವರನ್ನು ತಮ್ಮ ಮಗ ಎಂದು ತಮ್ಮ ಮಕ್ಕಳು ಮತ್ತು ಭದ್ರತಾ ಸಿಬ್ಬಂದಿಗೆ ಖುಷಿಯಿಂದ ಹೇಳುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ವೇಳೆ ಅವರ ಕೈಗೆ ಸ್ವೀಟ್ ಬಾಕ್ಸ್ ಇಟ್ಟು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಎಲ್ಲರ ಮನಸೆಳೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಕ್ಷೇತ್ರವಾದ ವಯನಾಡ್ನಲ್ಲಿ ಎರಡು ದಿನಗಳ ಪ್ರವಾಸ ನಡೆಸಿದ್ದಾರೆ. ಈ ವೇಳೆ ತಾವು 51 ವರ್ಷಗಳ ಹಿಂದೆ ಅಂದರೆ ಜೂನ್ 15 1970ರಂದು ದೆಹಲಿಯ ಹೋಲಿ ಆಸ್ಪತ್ರೆಯಲ್ಲಿ ತಾವು ಹುಟ್ಟಿದ ಸಂದರ್ಭದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜಮ್ಮ ಅವರನ್ನು ಭೇಟಿಯಾಗಿದ್ದಾರೆ.
ಕೇರಳ ಮೂಲದ ರಾಜಮ್ಮ ಆ ಸಂದರ್ಭದಲ್ಲಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಟ್ರೈನಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಅವರಿಗೆ 23 ವರ್ಷ ವಯಸ್ಸಾಗಿತ್ತು. ಈ ವೇಳೆ ಸೋನಿಯಾ ಗಾಂಧಿ ಹೆರಿಗೆ ಸಂದರ್ಭದಲ್ಲಿ ಅವರ ಚಿಕಿತ್ಸೆಯಲ್ಲಿ ಭಾಗಿಯಾಗಿದ್ದರು
ಕೇರಳ ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ವಯನಾಡು ಸಂಸದರ ಕೈ ಹಿಡಿದು ಭಾವುಕರಾಗಿ ಮಾತನಾಡಿರುವ ನರ್ಸ್ ರಾಜಮ್ಮ, ರಾಹುಲ್ ಗಾಂಧಿಯನ್ನು ಎಲ್ಲರಿಗಿಂತ ತಾವು ಮೊದಲು ನೋಡಿದ್ದು, ಅವರು ನನ್ನ ಮಗ ಎಂದು ಅವರ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಇದೇ ವೇಳೆ ರಾಜಮ್ಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಅವರ ಬಗ್ಗೆ ಕೂಡ ಕೇಳಿ ತಮ್ಮ ಶುಭಾಶಯ ತಿಳಿಸುವಂತೆ ಹೇಳಿದ್ದಾರೆ. ಕೊನೆಯಲ್ಲಿ ಕೂಡ ರಾಜಮ್ಮ, ರಾಹುಲ್ ಗಾಂಧಿ ತಮ್ಮ ಕ್ಷೇತ್ರದ ಸಂಸದ, ಕಾಂಗ್ರೆಸ್ ನಾಯಕ ಎನ್ನುವುದಕ್ಕಿಂತ ಹೆಚ್ಚಿನ ಅವಿನಾಭಾವ ಸಂಬಂಧ ಅವರೊಟ್ಟಿಗೆ ತಮಗಿರುವುದನ್ನು ತಮ್ಮ ಭಾವನೆಗಳ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
ತಮ್ಮ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಶೀಲನಾ ಸಭೆ ಕುರಿತು ಚರ್ಚೆ ಸೇರಿದಂತೆ ಪಕ್ಷದ ಸಂಘಟನೆಗೆ ಎರಡು ದಿನಗಳ ಪ್ರವಾಸದಲ್ಲಿ ರಾಹುಲ್ ಗಾಂಧಿ ಇದ್ದಾರೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಸಂಬಂಧಿ ಮದುವೆಯಲ್ಲಿ ಐಶ್ವರ್ಯಾ ರೈ; ಫೋಟೋಸ್ ವೈರಲ್
ಈ ಹಿಂದೆ ಕೂಡ ವಯನಾಡು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ ಬಳಿಕ ಅವರು ನರ್ಸ್ ರಾಜಮ್ಮ ಅವರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿಸಿದ್ದರು.
ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವದ ವಿವಾದ ಸಂದರ್ಭದಲ್ಲಿ ಕೂಡ ಮಾತನಾಡಿದ್ದ ರಾಜಮ್ಮ, ತಾವು ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ರಾಹುಲ್ ಗಾಂಧಿಯನ್ನು ಎತ್ತಿಕೊಂಡಿದ್ದು ನಾನು. ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮೊಮ್ಮಗುವನ್ನು ಎತ್ತಿಕೊಳ್ಳಲು ನಾವೆಲ್ಲ ಕಾತುರತಾಗಿದ್ದೇವು. ಆಗ ರಾಹುಲ್ ತುಂಬಾ ಮುದ್ದಾಗಿದ್ದರು ಎಂದಿದ್ದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ