ಜೈಪುರ (ಜುಲೈ 20); ರಾಜಸ್ಥಾನ ಸರ್ಕಾರವನ್ನು ಪದಚ್ಯುತಗೊಳಿಸಲು ಶಾಸಕರಿಗೆ ಲಂಚದ ಆಮಿಷ ಒಡ್ಡಿರುವ ಆರೋಪ ಹೊತ್ತಿರುವ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ರಾಜಸ್ಥಾನ ವಿಶೇಷ ತನಿಖಾ ಪೊಲೀಸ್ ದಳ (ಎಸ್ಓಜಿ) ಇಂದು ನೊಟೀಸ್ ಜಾರಿಮಾಡಿದೆ.
ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಎಂಬ ಇಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಬಿಜೆಪಿ ನಾಯಕ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೆಲ ದಿನಗಳ ಹಿಂದೆ ಲೀಕ್ ಆಗಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದ ಈ ಇಬ್ಬರೂ ಶಾಸಕರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿತ್ತು.
ಅಲ್ಲದೆ, ಈ ಸಂಬಂಧ ಕಾಂಗ್ರೆಸ್ ಪಕ್ಷ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ರಾಜಸ್ಥಾನದಲ್ಲಿ ಪ್ರಕರಣ ದಾಖಲಿಸಿತ್ತು. ಈ ಹೀಗಾಗಿ ಎಫ್ಐಆರ್ ದಾಖಲಿಸಿಕೊಂಡಿರುವ ವಿಶೇಷ ಪೊಲೀಸ್ ತನಿಖಾ ದಳ ಕೇಂದ್ರ ಸಚಿವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ ಎನ್ನಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಗಜೇಂದ್ರ ಸಿಂಗ್ ಶೇಖಾವತ್, "ನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ಲೀಕ್ ಆಗಿರುವ ಆಡಿಯೋದಲ್ಲಿ ಇರುವ ದ್ವನಿ ನನ್ನದಲ್ಲ. ನನ್ನನ್ನು ವಿಚಾರಣೆಗೆ ಕರೆದರೆ ಖಂಡಿತ ಹಾಜರಾಗುತ್ತೇನೆ” ಎಂದು ತಿಳಿಸಿದ್ದಾರೆ.
ಲೀಕ್ ಆಗಿರುವ ಆಡಿಯೋದಲ್ಲಿ ಸಂಜಯ್ ಜೈನ್ ಎಂಬ ಉದ್ಯಮಿಯ ಹೆಸರು ಉಲ್ಲೇಖವಾಗಿತ್ತು. ಹೀಗಾಗಿ ಈಗಾಗಲೇ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಆರೋಪಿಸುವಂತೆ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ನಡೆಯನ್ನು ಟೀಕಿಸಿರುವ ಬಿಜೆಪಿ ನಾಯಕರು, “ಕಾಂಗ್ರೆಸ್ ಪಕ್ಷವು ತಮ್ಮ ಆಂತರಿಕ ಬಿಕ್ಕಟ್ಟಿಗೆ ಇತರರನ್ನು ದೂಷಿಸುತ್ತಿದೆ. ರಾಜಸ್ಥಾನ ಸರ್ಕಾರ ಇತರರ ಫೋನ್ ಟ್ಯಾಪ್ ಮಾಡುವ ಮೂಲಕ ಬಿಜೆಪಿ ನಾಯಕರನ್ನು ಕೆಣಕುತ್ತಿದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಜಸ್ಥಾನದಿಂದ ದಿಢೀರ್ ಕಾಣೆಯಾದ ಸಚಿನ್ ಪೈಲಟ್ ಬಣದ 18 ಶಾಸಕರು; ಕರ್ನಾಟಕಕ್ಕೆ ಆಗಮಿಸಿರುವ ಶಂಕೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ