ನವದೆಹಲಿ(ಜ.04): ಇಂದೋರ್-4ನ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಮಗ ಏಕ್ಲವ್ಯ ಗೌರ್ ನೀಡಿದ ದೂರಿನ ಆಧಾರದ ಮೇಲೆ, ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಡಿಯಲ್ಲಿ ಮುಂಬೈ ಮೂಲದ ಖ್ಯಾತ ಹಾಸ್ಯನಟ(ಕಾಮಿಡಿಯನ್) ಮುನಾವರ್ ಫಾರೂಕಿ ಮತ್ತು ಅವರ ನಾಲ್ವರು ಸಹಚರರನ್ನು ಬಂಧಿಸಲಾಗಿತ್ತು. ಆದರೆ ಬಂಧಿಸಿ ಎರಡು ದಿನಗಳಾದ ಬಳಿಕ, ಹಿಂದೂ ಧರ್ಮದ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಹೇಳಿರುವ ಯಾವುದೇ ವಿಡಿಯೋ ಸಾಕ್ಷ್ಯಾಧಾರಗಳಿಲ್ಲ ಎಂದು ಇಂದೋರ್ ಪೊಲೀಸರು ತಿಳಿಸಿದ್ದಾರೆ.
ಹಿಂದೂ ದೇವತೆಗಳನ್ನು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವಮಾನಿಸಿದ್ದಾರೆ ಎಂದು ಹೇಳುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಇಂದೋರ್ ನಗರದ ಇನ್ಸ್ಪೆಕ್ಟರ್ ಕಮಲೇಶ್ ಶರ್ಮಾ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಹೇಳಿದ್ದಾರೆ.
ಇಂದೋರ್ ಪೊಲೀಸರು ಶುಕ್ರವಾರ ಮುಂಬೈ ಮೂಲದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಮತ್ತು ಆತನ ನಾಲ್ವರು ಸಹಚರರನ್ನು, ಏಕ್ಲವ್ಯ ಗೌರ್ ನೀಡಿದ್ದ ದೂರಿನ ಆಧಾರದ ಮೇಲೆ ಬಂಧಿಸಿದ್ದರು. ಈ ವೇಳೆ ಗೌರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮುನಾವರ್ ಸರಣಿ ಅಪರಾಧಿ ಮತ್ತು ಹಿಂದೂ ದೇವತೆಗಳ ಬಗ್ಗೆ ಮಾನಹಾನಿಕರ ಹಾಸ್ಯಗಳನ್ನು ಮಾಡುತ್ತಾರೆ ಎಂದು ಆರೋಪಿಸಿದ್ದರು.
ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಎಫ್ಐಆರ್
ಇಷ್ಟೇ ಅಲ್ಲದೇ, ನಾನು ಮುನಾವರ್ ಕಾರ್ಯಕ್ರಮದ ಬಗ್ಗೆ ಕೇಳಿದಾಗ, ಟಿಕೆಟ್ ಖರೀದಿಸಿ ಅವರ ಶೋ ನೋಡಲು ಹೋಗಿದೆ. ಆದರೆ ನಿರೀಕ್ಷೆಯಂತೆ ಅವರು ತಮ್ಮ ಹಾಸ್ಯ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳನ್ನು ಅವಹೇಳನ ಮಾಡುತ್ತಿದ್ದರು. ಜೊತೆಗೆ ಗೋದ್ರಾ ಗಲಭೆಯ ವಿಚಾರ ಮಾತನಾಡುತ್ತಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಎಳೆದು ತಂದು ಅಪಹಾಸ್ಯ ಮಾಡಿದರು ಎಂದು ಹೇಳಿದ್ದರು.
ಏಕ್ಲವ್ಯ ಗೌರ್ ದೂರಿನ ಆರೋಪದಡಿಯಲ್ಲಿ ಇಂದೋರ್ ಪೊಲೀಸರು ಮುನಾವರ್ ಫಾರೂಕಿ ಮತ್ತು ಅವರ ಸಹಚರರಾದ ಎಡ್ವಿನ್ ಆಂಥೋನಿ, ಪ್ರಖರ್ ವ್ಯಾಸ್, ಪ್ರಯಮ್ ವ್ಯಾಸ್ ಮತ್ತು ನಳಿನ್ ಯಾದವ್ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಯಾವುದೇ ವರ್ಗದ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು), 298, 269 , 188 ಮತ್ತು 34 ಈ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ