news18-kannada Updated:December 18, 2020, 9:40 AM IST
ಕೇಂದ್ರ ಸಚಿವ ನಿತಿನ್ ಗಡ್ಕರಿ
ನವದೆಹಲಿ (ಡಿ. 18): ಮುಂದಿನ 2 ವರ್ಷಗಳಲ್ಲಿ ಭಾರತದ ಎಲ್ಲ ಹೆದ್ದಾರಿಗಳನ್ನೂ ಟೋಲ್ಬೂತ್ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶಾದ್ಯಂತ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಟೋಲ್ ಸಂಗ್ರಹಕ್ಕೆ ಜಿಪಿಎಸ್ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಟೋಲ್ ಬೂತ್ನಲ್ಲಿ ಕಟ್ಟಬೇಕಾದ ಶುಲ್ಕವನ್ನು ಮುಂದಿನ ದಿನಗಳಲ್ಲಿ ಚಾಲಕರ ಬ್ಯಾಂಕ್ ಖಾತೆಯಿಂದಲೇ ಕಡಿತಗೊಳಿಸಲಾಗುತ್ತದೆ. ಇನ್ನೆರಡು ವರ್ಷಗಳಲ್ಲಿ ಇದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
ವಾಹನಗಳ ತಡೆರಹಿತ ಚಾಲನೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಿಪಿಎಸ್ ತಂತ್ರಜ್ಞಾನ ಆಧಾರಿತ ಟೋಲ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತ ಸಂಪೂರ್ಣ ಟೋಲ್ಬೂತ್ ಮುಕ್ತವಾಗಲಿದೆ ಎಂದು ಅಸೋಚಾಮ್ ಸಂಸ್ಥಾಪನಾ ಸಪ್ತಾಹ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಜಿಪಿಎಸ್ ತಂತ್ರಜ್ಞಾನದಿಂದ ವಾಹನಗಳ ಚಲನೆಯನ್ನು ಅವಲಂಬಿಸಿ ಆ ವಾಹನಗಳ ಮಾಲೀಕರ ಖಾತೆಯಿಂದಲೇ ಟೋಲ್ ಹಣವನ್ನು ಕಡಿತಗೊಳಿಸಲಾಗುವುದು. ಹಳೆಯ ವಾಹನಗಳಲ್ಲೂ ಜಿಪಿಎಸ್ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಈಗ ಎಲ್ಲ ಕಮರ್ಷಿಯಲ್ ವಾಹನಗಳು ವಾಹನ ಟ್ರ್ಯಾಕಿಂಗ್ ವ್ಯವಸ್ಥೆಗಳೊಂದಿಗೆ ಬರುತ್ತಿವೆ. ಹಳೆ ವಾಹನಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲು ಕೇಂದ್ರ ಸರ್ಕಾರದಿಂದ ಯೋಜನೆ ರೂಪಿಸಲಾಗುತ್ತದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಲಾಪದಲ್ಲಿ ಗಲಾಟೆ ಪ್ರಕರಣ; ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿಯಿಂದ ಶೋಕಾಸ್ ನೋಟೀಸ್ ಜಾರಿ
2021ರ ಮಾರ್ಚ್ ತಿಂಗಳ ವೇಳೆಗೆ ಟೋಲ್ ಸಂಗ್ರಹ 34 ಸಾವಿರ ಕೋಟಿ ರೂ. ಆಗಬಹುದು. ಟೋಲ್ ಸಂಗ್ರಹಕ್ಕೆ ಜಿಪಿಎಸ್ ತಂತ್ರಜ್ಞಾನವನ್ನು ಬಳಸುವ ಮೂಲಕ ಮುಂದಿನ 5 ವರ್ಷಗಳಲ್ಲಿ ಟೋಲ್ ಆದಾಯವನ್ನು 1,34,000 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ ಎಲ್ಲ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೇ ಹೆದ್ದಾರಿಗಳನ್ನು ಟೋಲ್ಬೂತ್ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಘೋಷಿಸಿದೆ.
Published by:
Sushma Chakre
First published:
December 18, 2020, 9:40 AM IST