ದೆಹಲಿ (ಫೆಬ್ರವರಿ 05); ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರೂ ಆರೋಪಿಗಳನ್ನು ಇನ್ನೂ 7 ದಿನಗಳ ಒಳಗಾಗಿ ಗಲ್ಲಿಗೆ ಏರಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳೇ ಖಚಿತಪಡಿಸಿತ್ತು. ಅಲ್ಲದೆ, ದೆಹಲಿ ಹೈಕೋರ್ಟ್ ಇವರಿಗೆ ಗಲ್ಲು ಶಿಕ್ಷೆ ವಿಧಿಸಲು ಎರಡು ಬಾರಿ ಡೆತ್ ವಾರಂಟ್ ಹೊರಡಿಸಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಜುಲೈ.01 ರಂದು ಇವರಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು. ಆದರೆ, ತಾಂತ್ರಿಕವಾಗಿ ಈ ನಾಲ್ವರೂ ಆರೋಪಿಗಳ ಕ್ಷಮಾಪಣಾ ಅರ್ಜಿ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲು ತಡವಾಗುತ್ತಿದೆ.
ಆರೋಪಿಗಳ ಶಿಕ್ಷೆ ಜಾರಿ ತಡವಾಗುತ್ತಿರುವ ಹಿನ್ನೆಲೆ ಇಡೀ ದೇಶ ಅಸಮಾಧಾನ ಹೊರಹಾಕಿದೆ. ಅಲ್ಲದೆ, ನಿರ್ಭಯಾ ತಾಯಿ ಸಹ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧ ಇಂದು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರ ಆರೋಪಿಗಳ ಶಿಕ್ಷೆಯನ್ನು ಶೀಘ್ರದಲ್ಲಿ ಜಾರಿ ಮಾಡಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿತ್ತು.
ಈ ಕುರಿತ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, "ನಿರ್ಭಯಾ ಅತ್ಯಾಚಾರಿ ಆರೋಪಿಗಳಿಗೆ ಪ್ರತ್ಯೇಕ ಗಲ್ಲುಶಿಕ್ಷೆ ಸಾಧ್ಯವಿಲ್ಲ. ನಾಲ್ವರನ್ನೂ ಒಟ್ಟಿಗೆ ಗಲ್ಲಿಗೆ ಏರಿಸಿ. ಅಲ್ಲದೆ, ಈ ವಿಚಾರದಲ್ಲಿ ವಿಳಂಭ ಮಾಡುವುದೂ ಸಹ ಸರಿಯಲ್ಲ. ಅಧಿಕಾರಿಗಳ ಅಸಮರ್ಥತೆಯಿಂದ ದೋಷಿಗಳು ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಇನ್ನೂ 7 ದಿನಗಳ ಒಳಗಾಗಿ ಈ ನಾಲ್ವರನ್ನೂ ಒಟ್ಟಿಗೆ ಗಲ್ಲಿಗೆ ಏರಿಸಿ" ಎಂದು ಆದೇಶ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ