ಪಂಜಾಬ್ (ಏಪ್ರಿಲ್ 07); ದೇಶದಾದ್ಯಂತ ಕೊರೋನಾ ಎರಡನೇ ಅಲೆಯಿಂದಾಗಿ ಸೋಂಕಿತರ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿದೆ. ಪಂಜಾಬ್ನಲ್ಲೂ ಈ ಸಂಖ್ಯೆ ಮಿತಿ ಮೀರಿದೆ. ಹೀಗಾಗಿ ಕೊರೋನಾ ಸೋಂಕು ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಇಂದಿನಿಂದ ಏಪ್ರಿಲ್ 30 ರವರೆಗೆ ರಾಜ್ಯದಲ್ಲಿ ರಾಜಕೀಯ ರ್ಯಾಲಿಗಳನ್ನು ನಿಷೇಧಿಸುವಂತೆ ಆದೇಶಿಸಿದ್ದಾರೆ. ಅಲ್ಲದೆ, ಈ ನಿಯಮವನ್ನು ಯಾರೇ ಮುರಿದರೂ ಸಹ ಅವರ ವಿರುದ್ಧ ಡಿಎಂಎ ಮತ್ತು ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ರಾತ್ರಿ 12 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಸ್ತರಿಸುವುದಾಗಿಯೂ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.
ಈವರೆಗೆ ಪಂಜಾಬ್ನ 12 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ಅಂತ್ಯಕ್ರಿಯೆ, ಶವಸಂಸ್ಕಾರ, ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಒಳಾಂಗಣದಲ್ಲಿ 50 ಜನರಿಗೆ ಮತ್ತು ಹೊರಾಂಗಣದಲ್ಲಿ 100 ಕ್ಕೆ ಇಳಿಸಲಾಗಿದೆ. ಎಲ್ಲಾ ಸರ್ಕಾರಿ ನೌಕರರು ಕಚೇರಿಯಲ್ಲಿದ್ದಾಗ ಮುಖವಾಡ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ನಿರ್ಬಂಧಗಳನ್ನು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಚ್ಚುವಿಕೆ ಸೇರಿದಂತೆ ಹಿಂದಿನ ನಿರ್ಬಂಧಗಳೊಂದಿಗೆ ಏಪ್ರಿಲ್ 30 ರವರೆಗೆ ಜಾರಿಯಲ್ಲಿರುತ್ತದೆ. ಆದಾಗ್ಯೂ, ಮಾಲ್ಗಳಲ್ಲಿ ಅಂಗಡಿ ಮಾಲೀಕರಿಗೆ ಸ್ವಲ್ಪ ವಿರಾಮ ನೀಡಲಾಗಿದೆ. ಏಕೆಂದರೆ ಸರ್ಕಾರವು ಪ್ರತಿ ಅಂಗಡಿಯಲ್ಲಿ 10 ಜನರನ್ನು ಪ್ರವೇಶಿಸಲು ಅನುಮತಿ ನೀಡಿದೆ. ಯಾವುದೇ ನಿರ್ದಿಷ್ಟ ಸಮಯದಲ್ಲಿ ಮಾಲ್ನಲ್ಲಿ 100 ಕ್ಕೂ ಹೆಚ್ಚು ಜನರನ್ನು ಅನುಮತಿಸದ ಹಿಂದಿನ ಆದೇಶಕ್ಕೆ ವಿರುದ್ಧವಾಗಿ. ಯಾವುದೇ ಸಮಯದಲ್ಲಿ 20 ಅಂಗಡಿಗಳನ್ನು ಹೊಂದಿರುವ ಮಾಲ್ನಲ್ಲಿ 200 ಜನರಿಗೆ ಅವಕಾಶ ನೀಡಲಾಗುವುದು ಎಂದು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್, ರಾಜ್ಯದ ಕೋವಿಡ್ ಪರಿಸ್ಥಿತಿಯ ಸಾಪ್ತಾಹಿಕ ಪರಿಶೀಲನೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಕಾರಾತ್ಮಕತೆ ಮತ್ತು ಮರಣ ಪ್ರಮಾಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಂಜಾಬ್ನಲ್ಲಿ ಶೇ.85 ಕ್ಕಿಂತಲೂ ಹೆಚ್ಚು ಪ್ರಕರಣಗಳು ಯುಕೆ ಸ್ಟ್ರೈನ್ಗೆ ಸಂಬಂಧಿಸಿವೆ. ಇದು ಹೆಚ್ಚು ಸಾಂಕ್ರಾಮಿಕ ವೈರಸ್ ಎಂಬುದು ಆತಂಕದ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ