ನವದೆಹಲಿ: ಭಾರತಕ್ಕೆ (India) ಸ್ವಾತಂತ್ರ್ಯ (Independence) ಬಂದು 75 ವರ್ಷಗಳಾಗಿರುವ ಸಂದರ್ಭದಲ್ಲಿ ನಿರ್ಮಿಸಲಾದ ನೂತನ ಸಂಸತ್ ಭವನವನ್ನು (New Parliament) ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿ ದೇಶಕ್ಕೆ (Country) ಸಮರ್ಪಿಸಿದ್ದಾರೆ. ಆತ್ಮನಿರ್ಭರ (Atmanirbhar Bharat) ಭಾರತದ ಅಂಗವಾಗಿ ಭಾರತೀಯತೆಗೆ ಒತ್ತು ನೀಡುವಂತೆ ಈ ಭವನ ನಿರ್ಮಿಸಲಾಗಿದೆ. ಎನ್ಡಿಎ (NDA) ಮಿತ್ರಪಕ್ಷಗಳು, 25 ಪಕ್ಷಗಳ ನಾಯಕರು ಮತ್ತು ಗಣ್ಯರು ಹೊಸ ಸಂಸತ್ತಿಗೆ ಆಗಮಿಸಿದ್ದರು.
140 ಕೋಟಿ ಭಾರತೀಯರ ಕನಸು
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ " ಸ್ವಾತಂತ್ರ್ಯಕ್ಕೆ 75 ವರ್ಷಗಳು ಸಂದಿರುವ ಸಂದರ್ಭದಲ್ಲಿ ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಈ ಹೊಸ ಸಂಸತ್ ಭವನವನ್ನು ನಿರ್ಮಿಸಿದ್ದೇವೆ. ಈ ಕಟ್ಟಡದಲ್ಲಿ ಸರ್ವಧರ್ಮ ಪ್ರಾರ್ಥನೆಗಳು ನಡೆದಿವೆ. ನಾನು ದೇಶದ ಜನತೆಗೆ ಶುಭ ಹಾರೈಸುತ್ತೇನೆ. ಇದು ಕೇವಲ ಭವನವಲ್ಲ,140 ಕೋಟಿ ಭಾರತೀಯರ ಕನಸು. ಈಗ ಈ ಕನಸು ನನಸಾಗಿದ್ದು, ಇತಿಹಾಸದಲ್ಲಿ ಈ ದಿನ ದಾಖಲಾಗಲಿದೆ.
ಈ ಹೊಸ ಕಟ್ಟಡ ಆಧುನಿಕ ಭಾರತಕ್ಕೆ ಸಾಕ್ಷಿಯಾಗಿದ್ದು, ಇದನ್ನು ಜಗತ್ತಿಗೆ ತೋರಿಸುತ್ತಿದ್ದೇವೆ ನಮ್ಮ ಪ್ರಜಾಪ್ರಭುತ್ವ ಮಂದಿರ, ಇದು ನಮ್ಮ ಸಂಕಲ್ಪ.ಈ ಹೊಸ ಕಟ್ಟಡ .ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಿದೆ. ಇದು ಸ್ವಾವಲಂಬಿ ಭಾರತದ ಸೂರ್ಯೋದಯವನ್ನು ತೋರಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ಭಾರತ ಮುಂದೆ ಸಾಗಿದರೆ, ಇಡೀ ವಿಶ್ವ ಮುಂದಕ್ಕೆ ಸಾಗುತ್ತದೆ. ಭಾರತದ ಅಭಿವೃದ್ಧಿ ಪ್ರಪಂಚದ ಅಭಿವೃದ್ಧಿಗೆ ಕಾರಣವಾಗುತ್ತದೆ. ನಾವು ಅತ್ಯಂತ ಪವಿತ್ರವಾದ ರಾಜದಂಡವನ್ನು ಸ್ಥಾಪಿಸಿದ್ದೇವೆ. ತಮಿಳುನಾಡಿನಿಂದ ಅಧೀನ ಮಠಾಧೀಶರು ನಮಗೆ ಈ ಸೆಂಗೋಲ್ ನೀಡಿದ್ದಾರೆ, ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಆಶೀರ್ವಾದ ಪಡೆದಿದ್ದೇನೆ. ಈ ಪವಿತ್ರ ಸೆಂಗೋಲ್ ಅನ್ನು ಪ್ರತಿಷ್ಠಾಪಿಸುವ ಮೂಲಕ ನಾವು ಹೆಚ್ಚಿನ ಮನ್ನಣೆಯನ್ನು ನೀಡುತ್ತಿದ್ದೇವೆ. ಅದನ್ನು ಸಂಸತ್ತಿನಲ್ಲಿ ಪ್ರತಿಷ್ಠಾಪಿಸುವ ಮೂಲಕ ಭಾರತ ಕೇವಲ ಪ್ರಜಾಸತ್ತಾತ್ಮಕ ದೇಶವಲ್ಲ, ಧರ್ಮನಿಷ್ಠ ದೇಶ ಎಂದು ತೋರಿಸುತ್ತಿದ್ದೇವೆ. ನಾವು ಐತಿಹಾಸಿಕ ಸಂಸ್ಕೃತಿಯನ್ನು ಉಳಿಸುತ್ತಿದ್ದೇವೆ ಎಂದರು.
ಭಾರತದ ಘನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ
ಮಹಾಭಾರತದಂತಹ ಗ್ರಂಥಗಳಲ್ಲಿ ಪ್ರಜಾಪ್ರಭುತ್ವವನ್ನು ಉಲ್ಲೇಖಿಸಲಾಗಿದೆ. ಭಾರತ ಪ್ರಜಾಪ್ರಭುತ್ವದ ತಾಯಿ ಇದ್ದಂತೆ. ನೂರಾರು ವರ್ಷಗಳಿಂದ ಭಾರತದ ಘನತೆ ಕುಸಿಯುತ್ತಲೇ ಬಂದಿತ್ತು. ಬೇರೆ ದೇಶಗಳು ಇಲ್ಲಿಗೆ ಬಂದು ನಮ್ಮನ್ನು ಆಳಿದವು. ಆದರೆ 21ನೇ ಶತಮಾನದಲ್ಲಿ ಹೊಸ ಭಾರತ ಉದಯವಾಗಿದೆ. ಈಗ ಭಾರತ ಪ್ರಾಚೀನ ಕಲೆಗಳನ್ನು ಉಳಿಸಿ ಮೂಲ ಭಾರತವಾಗಿ ಹೊರಹೊಮ್ಮುತ್ತಿದೆ. ಅದರ ಪ್ರತೀಕವೇ ಈ ಹೊಸ ಸಂಸತ್ತು. ಈ ಹೊಸ ಸಂಸತ್ತು ಭಾರತದ ಘನತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಈ ಕಟ್ಟಡವು ತಂತ್ರಜ್ಞಾನ, ವಾಸ್ತುಶಿಲ್ಪ ಮತ್ತು ಕಲೆ ಎಲ್ಲವನ್ನೂ ಹೊಂದಿದೆ. ರಾಷ್ಟ್ರೀಯ ಪಕ್ಷಿ ನವಿಲಿನಿಂದ ಪ್ರೇರಿತವಾದ ರಾಷ್ಟ್ರೀಯ ಹೂವಿನ ಕಮಲವನ್ನು ಆಧರಿಸಿ ನಾವು ಈ ಕಟ್ಟಡವನ್ನು ನಿರ್ಮಿಸಿದ್ದೇವೆ. ನಮ್ಮ ಸಂಸ್ಕೃತಿಗಳನ್ನು ಒಗ್ಗೂಡಿಸಿ ಈ ಕಟ್ಟಡವನ್ನು ನಿರ್ಮಿಸಿದ್ದೇವೆ.
ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗಿದೆ
ಈ ಸಂಸತ್ ಭವನದ ಮೂಲಕ ಒಂದೇ ಭಾರತ, ಅತ್ಯುತ್ತಮ ಭಾರತ ಎಂದು ತೋರಿಸುತ್ತಿದ್ದೇವೆ. ಹೊಸ ಸಂಸತ್ತು ಜನರ ಆಕಾಂಕ್ಷೆಗಳು ಮತ್ತು ಭರವಸೆಗಳನ್ನು ಗೌರವಿಸುತ್ತದೆ. ನೂತನ ಸಂಸತ್ತು ಆಧುನಿಕ ಭಾರತದ ಕನ್ನಡಿಯಾಗಲಿದೆ. 7 ಸಾವಿರ ಕಾರ್ಮಿಕರು ಈ ಕಟ್ಟಡವನ್ನು ನಿರ್ಮಿಸಿದ್ದಾರೆ, ಸಂಸತ್ತಿನ ನಿರ್ಮಾಣದಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ. ಅವರ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಪಿಎಂ ತಿಳಿಸಿದರು.
ಇದನ್ನೂ ಓದಿ: Mann Ki Baat: 101ನೇ ಮನ್ ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಇಲ್ಲಿದೆ ಹೈಲೈಟ್ಸ್
ಈ 9 ವರ್ಷದ ಬಿಜೆಪಿ ಆಡಳಿತಾವಧಿಯಲ್ಲಿ 9 ನಿರ್ಮಾಣಗಳನ್ನು ಕೈಗೆತ್ತಿಕೊಂಡಿದ್ದೇವೆ. ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. 11 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. ನಾವು 4 ಲಕ್ಷ ಕಿಲೋಮೀಟರ್ಗೂ ಹೆಚ್ಚು ರಸ್ತೆಗಳನ್ನು ನಿರ್ಮಿಸಿದ್ದೇವೆ. 50 ಸಾವಿರಕ್ಕೂ ಹೆಚ್ಚು ಅಮೃತ ಸರೋವರಗಳನ್ನು ನಿರ್ಮಿಸಿದ್ದೇವೆ. 30 ಸಾವಿರಕ್ಕೂ ಹೆಚ್ಚು ಹೊಸ ಪಂಚಾಯಿತಿ ಕಟ್ಟಡಗಳನ್ನು ನಿರ್ಮಿಸಿದ್ದೇವೆ. ದೇಶದ ಅಭಿವೃದ್ಧಿ ಮತ್ತು ದೇಶದ ಜನರ ಅಭಿವೃದ್ಧಿಯೇ ನಮ್ಮ ಸಂಕಲ್ಪ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ಸ್ಪೀಕರ್ ವೇದಿಕೆ ಬಳಿ ಸಂಗೋಲ್ ಪ್ರತಿಷ್ಠಾಪನೆ
ಇದಕ್ಕೂ ಮುನ್ನ ಬೆಳಗ್ಗೆ 7.15ಕ್ಕೆ ನೂತನ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಮೊದಲು ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ 7.30ಕ್ಕೆ ಗಣಪತಿ ಹೋಮ, ಪೂರ್ಣಾಹುತಿ ಮತ್ತಿತರ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಆ ಬಳಿಕ ರಾಜದಂಡಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಳಿಕ ಪಂಡಿತರಿಂದ ಸೆಂಗೋಲ್ ಸ್ವೀಕರಿಸಿದ ಪ್ರಧಾನಿ ಮೋದಿ, ಪ್ರದಕ್ಷಿಣೆ ಹಾಕಿ, ಪಂಡಿತರ ಆಶೀರ್ವಾದ ಪಡೆದರು. ಆ ಬಳಿಕ ಪ್ರಧಾನಿ ಮೋದಿ ಅವರು ರಾಜದಂಡ ಹಿಡಿದು ಸಂಸತ್ ಭವನದಲ್ಲಿರುವ ಲೋಕಸಭೆಯ ಸಭಾಂಗಣಕ್ಕೆ ತೆರಳಿ, ಸ್ಪೀಕರ್ ವೇದಿಕೆ ಬಳಿ ಪ್ರಧಾನಿ ಮೋದಿ ಅವರು ಸೆಂಗೋಲ್ ಪ್ರತಿಷ್ಠಾಪಿಸಿದರು.
ಬಳಿಕ ಸಂಸತ್ತಿನ ಫಲಕವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ನಂತರ ಸಂಸತ್ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ 10 ಜನ ಕಾರ್ಮಿಕರನ್ನು ಪ್ರಧಾನಿ ಮೋದಿ ಶಾಲು ಹೊದಿಸಿ ಸನ್ಮಾನಿಸಿದರು. ಅವರನ್ನು ಸನ್ಮಾನಿಸಿದ ಬಳಿಕ ಪ್ರಧಾನಿ ಮೋದಿ ಸರ್ವ ಧರ್ಮದ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ