ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಂದ ಪದ್ಮಶ್ರೀ ಪ್ರಶಸ್ತಿ (Padma Shri Award) ಸ್ವೀಕರಿಸಿದ ಕರ್ನಾಟಕದ (Karnataka)ಹಿರಿಯ ಬಿದ್ರಿ ಕರಕುಶಲ ಕಲಾವಿದ ಶಾ ರಶೀದ್ ಅಹ್ಮದ್ ಕ್ವಾದ್ರಿ(Shah Rasheed Ahmed Quadri), ಬಿಜೆಪಿ ಸರ್ಕಾರದ (BJP Government) ಬಗ್ಗೆ ನಾನು ತಪ್ಪಾಗಿ ಭಾವಿಸಿದ್ದೆ, ಆದರೆ ಇದೀಗ ನನ್ನ ಅನಿಸಿಕೆಯನ್ನು ಪ್ರಧಾನಿ ಮೋದಿಯವರು (Prim Minister Narendra Modi) ಸುಳ್ಳಾಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಬಿಜೆಪಿ ಸರ್ಕಾರ ನನ್ನ ಕಲೆಗೆ ಸರಿಯಾದ ಮನ್ನಣೆ ನೀಡುವುದಿಲ್ಲ ಅಂತೆಯೇ ನನ್ನಂತಹ ಕಲಾವಿದರಿಗೆ ಸರ್ಕಾರವು ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸುವುದಿಲ್ಲ ಎಂಬುದೇ ನನ್ನ ಅನಿಸಿಕೆಯಾಗಿತ್ತು. ಆದರೆ ನನ್ನ ಅನಿಸಿಕೆ ಸುಳ್ಳಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದಾರೆ.
ನರೇಂದ್ರ ಮೋದಿಯವರೊಂದಿಗೆ ಸಂವಾದ ನಡೆಸಿದ ಕ್ವಾದ್ರಿ
ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ನಂತರ, ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಕ್ವಾದ್ರಿಯವರಿಗೆ ವಿಶ್ ಮಾಡಿ ಹಸ್ತಲಾಘವ ಮಾಡಿದ ಪ್ರಧಾನಿಗಳೊಂದಿಗೆ ಅನಿಸಿಕೆ ಹಂಚಿಕೊಂಡ ಕ್ವಾದ್ರಿಯವರು ಯುಪಿಎ ಸರ್ಕಾರದ ಅವಧಿಯಲ್ಲಿ ನನ್ನ ಕಲೆಗೆ ಮನ್ನಣೆ ದೊರೆಯುತ್ತದೆ ಎಂದು ಭಾವಿಸಿದ್ದೆ.
ಆದರೆ ನನಗೆ ಆ ಗೌರವ ಸಿಗಲಿಲ್ಲ. ನಾನು ಈ ಪ್ರಶಸ್ತಿಯನ್ನು ಪಡೆಯಲು 10 ವರ್ಷಗಳಿಂದ ಪ್ರಯತ್ನಿಸಿದೆ. ಇದೀಗ ಬಿಜೆಪಿ ಸರಕಾರ ಬಂದಾಗ ಕೂಡ ನನಗೆ ಗೌರವ ದೊರೆಯುವುದಿಲ್ಲ ಎಂದೇ ಭಾವಿಸಿದ್ದೆ, ನನ್ನನ್ನು ಯಾರೂ ಗುರುತಿಸುವುದಿಲ್ಲ ಎಂಬುದೇ ನನ್ನ ಅನಿಸಿಕೆಯಾಗಿತ್ತು. ಆದರೆ ನೀವು ನನ್ನ ಅನಿಸಿಕೆಯನ್ನು ಸುಳ್ಳಾಗಿಸಿದ್ದೀರಿ. ಕಲೆಗೆ ತಕ್ಕ ಮನ್ನಣೆ ಬಿಜೆಪಿ ಕಾಲದಲ್ಲಿ ದೊರೆಯುತ್ತದೆ ಎಂಬುದನ್ನು ಸಾಬೀತಪಡಿಸಿರುವಿರಿ.
ನನ್ನ ಪರಿಶ್ರಮಕ್ಕೆ ಇಂದು ಫಲ ನೀಡಿದೆ. ನಾನು ನಿಮಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ. ಮೋದಿಯವರು ಇದಕ್ಕೆ ಪ್ರತಿಯಾಗಿ ನಮಸ್ತೆ ಹಾಗೂ ಮುಗುಳ್ನಗೆ ಸೂಚಿಸಿದರು. ಗೃಹ ಸಚಿವರು ಕೂಡ ನಗುಮುಖದಿಂದ ಈ ಸಂವಾದಕ್ಕೆ ಸಾಕ್ಷಿಯಾದರು.
ಕ್ವಾದ್ರಿಯವರಿಗೆ ದೊರೆತ ಮನ್ನಣೆ
ಜೂನ್ 5, 1955 ರಂದು ಜನಿಸಿದ ಕ್ವಾದ್ರಿ ಅವರು ಬಿದ್ರಿ ಕುಶಲಕರ್ಮಿಗಳ ಕುಟುಂಬದಿಂದ ಬಂದವರು. 1984 ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1988 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1996 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಕ್ವಾದ್ರಿ ಅವರು ಹಲವಾರು ಪ್ರಶಸ್ತಿಗಳಿಂದ ಸನ್ಮಾನಿತರಾಗಿದ್ದಾರೆ.
ಕರ್ನಾಟಕದ ಒಟ್ಟು ಎಂಟು ಮಂದಿಗೆ ಪದ್ಮ ಪ್ರಶಸ್ತಿ
ಕರ್ನಾಟಕದಿಂದ ಒಟ್ಟು ಎಂಟು ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಮಾಜಕಾರ್ಯ ಕ್ಷೇತ್ರದಲ್ಲಿ ತಮ್ಮ ಕೊಡುಗೆಗಾಗಿ ಸುಧಾ ಮೂರ್ತಿ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಎಸ್ಎಂ ಕೃಷ್ಣ, ಎಸ್ಎಲ್ ಭೈರಪ್ಪ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಖಾದರವಲಿ ದೂದೇಕುಲ, ಪುರಾತತ್ವ ಕ್ಷೇತ್ರದಲ್ಲಿ ಎಸ್ ಸುಬ್ಬರಾಮ್, ಜಾನಪದ ನೃತ್ಯಗಾರ್ತಿ, ರಾಣಿ ಮಾಚಯ್ಯ, ನಾಡೋಜ ಪಿಂಡಿಪಾಪನಹಳ್ಳಿ ಮಿನಿವೆಂಕಟಪ್ಪ, ಕಲಾ ಕ್ಷೇತ್ರದಲ್ಲಿ ಶಾ ಅಹಮದ್ ಪದ್ಮ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ.
ಪ್ರಶಸ್ತಿಗೆ ಹೇಗೆ ಆಯ್ಕೆಮಾಡಲಾಗುತ್ತದೆ?
ಕಲೆ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಔಷಧ, ಸಾಹಿತ್ಯ ಮತ್ತು ಶಿಕ್ಷಣ, ನಾಗರಿಕ ಸೇವೆ ಮತ್ತು ಕ್ರೀಡೆಗಳನ್ನು ಒಳಗೊಂಡಿರುವ ಕೆಲವು ಆಯ್ದ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಭಾರತೀಯ ಸಂಸ್ಕೃತಿಯ ಪ್ರಚಾರ, ಮಾನವ ಹಕ್ಕುಗಳ ರಕ್ಷಣೆ, ವನ್ಯಜೀವಿ ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: Narendra Modi: ಪದ್ಮಶ್ರೀ ಪುರಸ್ಕೃತ ಸಾಧಕರಿಗೆ ನಮೋ ಎಂದ ಮೋದಿ, ಅಷ್ಟಕ್ಕೂ ಹಿರ್ಬಾಯಿ ಇಬ್ರಾಹಿಂ ಲೋಬಿ ಅವರ ಸಾಧನೆಯೇನು?
ಒಟ್ಟು 52 ಪ್ರಶಸ್ತಿ ಪುರಸ್ಕೃತರು
ಒಟ್ಟು 52 ಪ್ರಶಸ್ತಿ ಪುರಸ್ಕೃತರಲ್ಲಿ ಇಬ್ಬರಿಗೆ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು ಅಂತೆಯೇ ಐವರಿಗೆ ಪದ್ಮಭೂಷಣ ಹಾಗೂ 45 ಪದ್ಮಶ್ರೀ ಪುರಸ್ಕಾರವನ್ನು ಸಾಧನೆ ಮಾಡಿದವರಿಗೆ ನೀಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ