Assembly Election2021: ಪಶ್ಚಿಮ ಬಂಗಾಳ ಚುನಾವಣೆ; ಮಮತಾ ಬ್ಯಾನರ್ಜಿ ಪರ ಶರದ್ ಪವಾರ್ ಪ್ರಚಾರ!
ಚುನಾವಣಾ ಪ್ರಚಾರದ ವೇಳೆ ಹಿರಿಯ ನಾಯಕ ಶರದ್ ಪವಾರ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ ಮತ್ತು ತೃಣಮೂಲ ಪಕ್ಷದ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಎನ್ಸಿಪಿ ಮೂಲಗಳು ತಿಳಿಸಿವೆ
ಕೋಲ್ಕತ್ತಾ (ಮಾರ್ಚ್ 26); ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈಗಾಗಲೇ ಮಿಂಚಿನ ಪ್ರಚಾರ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಒಳಗೊಂಡ ಸ್ಟಾರ್ ಪ್ರಚಾರಕರ ಪಟ್ಟಿ ಸಹ ಬಿಡುಗಡೆಯಾಗಿದ್ದು, ಬಂಗಾಳದ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಅದ್ದೂರಿ ಪ್ರಚಾರದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಸಿಎಂ ಮಮತಾ ಬ್ಯಾನರ್ಜಿ ವೀಲ್ಚೇರ್ನಲ್ಲಿ ಕುಳಿತೇ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಕೆಂಡಕಾರುತ್ತಿದ್ದಾರೆ. ಇದರ ಜೊತೆಗೆ ಇದೀಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಶಿವಸೇನೆ-ಎನ್ಸಿಪಿ ಮೈತ್ರಿಕೂಟ ಸರ್ಕಾರದ ಭಾಗವಾಗಿದ್ದರೂ, ಮೈತ್ರಿಕೂಟದ ನಾಯಕ ಶರದ್ ಪವಾರ್ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಪಕ್ಷದ ಸ್ಟಾರ್ ಪ್ರಚಾರಕರಾಗಿ ಆಯ್ಕೆಯಾಗಿದ್ದಾರೆ. ಅವರು ಮುಂದಿನ ವಾರ ಹೋಲಿ ಹಬ್ಬದ ನಂತರ ತೃಣಮೂಲ ಕಾಂಗ್ರೆಸ್ ಪರ ಬಂಗಾಳದಲ್ಲಿ ಪ್ರಚಾರ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಚುನಾವಣಾ ಪ್ರಚಾರದ ವೇಳೆ ಹಿರಿಯ ನಾಯಕ ಶರದ್ ಪವಾರ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ ಮತ್ತು ತೃಣಮೂಲ ಪಕ್ಷದ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಎನ್ಸಿಪಿ ಮೂಲಗಳು ತಿಳಿಸಿವೆ. ಅವರ ಪ್ರಚಾರದ ಮೊದಲ ಹಂತವು ಮೂರು ದಿನಗಳವರೆಗೆ ಇರುತ್ತದೆ.
ಈ ಹಿಂದೆಯೆ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಶರದ್ ಪವಾರ್ ಅವರಿಗೆ ಪತ್ರ ಬರೆದಿದ್ದು, ಬಂಗಾಳದಲ್ಲಿ ತೃಣಮೂಲ ಪರ ಪ್ರಚಾರ ಮಾಡದಂತೆ ಕೇಳಿಕೊಂಡಿದ್ದು, ಇದು ಮತದಾರರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದ್ದರು. ಆದರೆ, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು, ತೃಣಮೂಲ ಮೈತ್ರಿಕೂಟದ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
ದೇಶದಲ್ಲಿ ಯುಪಿಎ ಮೈತ್ರಿಕೂಟದ ನೇತೃತ್ವ ಕಾಂಗ್ರೆಸ್ ವಹಿಸಿದ್ದರೂ, ಯುಪಿಎ ಮೈತ್ರಿಕೂಟದ ಅನೇಕ ಪಕ್ಷಗಳು ತೃಣಮೂಲ ಪಕ್ಷವನ್ನು ಬೆಂಬಲಿಸುತ್ತಿವೆ. ಎನ್ಸಿಪಿ ಮಾತ್ರವಲ್ಲದೆ, ಶಿವಸೇನೆ, ಜೆಎಂಎಂ ಮತ್ತು ಆರ್ಜೆಡಿ ಪಕ್ಷಗಳು ಕೂಡಾ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಪಕ್ಷಕ್ಕೆ ಬೆಂಬಲ ನೀಡಿವೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರಸ್ ನಡುವೆ ಭಾರಿ ಹೋರಾಟ ನಡೆಯುತ್ತಿದೆ. ನಾಳೆಯಿಂದ(ಮಾರ್ಚ್27) ರಾಜ್ಯದಲ್ಲಿ ಮತದಾನ ಪ್ರಾರಂಭವಾಗಲಿದ್ದು, ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ