ಮುಂಬೈ (ಜೂನ್ 13); ಕೇಂದ್ರ ಸರ್ಕಾರದ ವಿರುದ್ಧ ಒಂದಲ್ಲಾ ಒಂದು ಕಾರಣಕ್ಕೆ ಆಗಾಗ್ಗೆ ಕಿಡಿಕಾರುವ ಮಹಾರಾಷ್ಟ್ರದ ಶಿವಸೇನೆ ಸರ್ಕಾರದ ಸಚಿವ ಸಂಜಯ್ ರಾವತ್ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸೇರಿದಂತೆ ಇತರೆ ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳ ಜೊತೆಗಿನ ಕಿತ್ತಾಟವನ್ನು ಉಲ್ಲೇಖಿಸಿ ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಕಿಡಿಕಾರಿರುವ ಸಂಜಯ್ ರಾವತ್, "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ರಾಷ್ಟ್ರದ ಸಮಸ್ಯೆಗಳನ್ನು ಪರಿಹರಿಸುವ ಬದಲು ‘ಥರ್ಡ್ ಕ್ಲಾಸ್’ ರಾಜಕಾರಣದಲ್ಲಿ ತೊಡಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಒಕ್ಕೂಟ-ರಾಜ್ಯ ಸರ್ಕಾರದ ನಡುವೆ ನಡೆಯುತ್ತಿರುವ ಜಗಳವು ಒಕ್ಕೂಟ ಆಡಳಿತ ವ್ಯವಸ್ಥೆಗೆ ಒಂದು ಸವಾಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಮುಗಿದ ಚುನಾವಣೆಯಲ್ಲಿ ಬಿಜೆಪಿ ತನ್ನ ಸೋಲಿನಿಂದಾಗಿ ತೀವ್ರ ನೋವನ್ನು ಅನುಭವಿಸಿದೆ ಎಂಬುದು ನಿಜ" ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಮ್ಮ ಸಾಪ್ತಾಹಿಕ ಅಂಕಣ ‘ರೋಕ್ಥಾಕ್’ನಲ್ಲಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಪನ್ ಬಂದೋಪಾಧ್ಯಾಯ ಅವರ ವಿಚಾರವಾಗಿ ಬಂಗಾಳ ಮತ್ತು ಒಕ್ಕೂಟ ಸರ್ಕಾರದ ನಡುವಿನ ಜಗಳವು "ಸಾರ್ವಜಿನಿಕ ನಳ್ಳಿ ನೀರಿಗಾಗಿ, ಗಲಾಟೆ ಮಾಡುತ್ತಿರುವ ಮಹಿಳೆಯರ ರೀತಿಯಲ್ಲಿ ಕಾಣುತ್ತಿದೆ" ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಲಪನ್ ಬಂದೋಪಾಧ್ಯಾಯ ಅವರು ಮೇ 28 ರಂದು ಕಲೈಕುಂಡ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ನಿಗದಿತ ಸಭೆಯನ್ನು ಕೈಬಿಡಲು ನಿರ್ಧರಿಸಿದ ನಂತರ ಬಂದೋಪಾಧ್ಯಾಯ ಅವರು ರಾಜಕೀಯ ಕಚ್ಚಾಟದ ನಡುವೆ ಸಿಲುಕಿ ಬಿದ್ದರು. ಅವರನ್ನು ಒಕ್ಕೂಟ ಸರ್ಕಾರದ ಸೇವೆಗೆ ಹಿಂತಿರುಗಬೇಕೆಂದು ಒಕ್ಕೂಟ ಸರ್ಕಾರ ಹೇಳಿದಾಗ ತನ್ನ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ ಬಂದೋಪಾಧ್ಯಾಯ ಸಿಎಂ ಮಮತಾ ಬ್ಯಾನರ್ಜಿಯ ಮುಖ್ಯ ಸಲಹೆಗಾರರಾಗಿ ಕರ್ತವ್ಯ ವಹಿಸಿಕೊಂಡರು. ಇದರ ನಂತರ ಅವರಿಗೆ ಒಕ್ಕೂಟ ಸರ್ಕಾರವು ಪ್ರಧಾನಿಯೊಂದಿಗಿನ ಸಭೆಗೆ ಭಾಗವಹಿಸದೆ ಇರಲು ಕಾರಣವೇನೆಂದು ತಿಳಿಸಲು ಶೋಕಾಸ್ ನೋಟಿಸ್ ಕೂಡಾ ನೀಡಿತ್ತು.
ಇದನ್ನೂ ಓದಿ: Sanchari Vijay Accident: ಅಪಘಾತದಿಂದ ನಟ ಸಂಚಾರಿ ವಿಜಯ್ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ
ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ರಾಜ್ಯಸಭೆಯ ಮಾಜಿ ಸಂಸದ ಸ್ವಪನ್ ದಾಸ್ಗುಪ್ತಾ ಅವರನ್ನು ಮತ್ತೆ ರಾಜ್ಯಸಭೆಗೆ ಮರುನಾಮಕರಣ ಮಾಡಿರುವುದು ಹೊಸ ಬೆಳವಣಿಗೆಯಾಗಿದೆ ಎಂದು ರಾವತ್ ಹೇಳಿದ್ದಾರೆ. ಸ್ವಪನ್ ದಾಸ್ಗುಪ್ತಾ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾಗಿ ಮಾರ್ಚ್ನಲ್ಲಿ ಮೇಲ್ಮನೆಗೆ ರಾಜೀನಾಮೆ ನೀಡಿದ್ದರು.
"ದಾಸ್ಗುಪ್ತಾ ಅವರನ್ನು ರಾಷ್ಟ್ರಪತಿಗಳು ನಾಮಕರಣ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈ ವ್ಯಕ್ತಿ ರಾಜ್ಯಸಭೆಗೆ ರಾಜೀನಾಮೆ ನೀಡಿದ್ದರು. ಆದರೆ ಅವರು ಸೋಲನುಭವಿಸಿದರು. ಇದಾಗಿ ಮತ್ತೆ ಒಂದು ತಿಂಗಳೊಳಗೆ ಅವರನ್ನು ನಾಮಕರಣ ಮಾಡಲಾಯಿತು. ಈ ರೀತಿಯ ಘಟನೆಯು ರಾಜ್ಯಸಭೆಯ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ" ಎಂದು ರಾವತ್ ಹೇಳಿದ್ದಾರೆ.
ರಾಷ್ಟ್ರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ನಿಭಾಯಿಸುವ ಬದಲು ಕೇಂದ್ರ ಸರ್ಕಾರ ಸೆಂಟ್ರಲ್ ವಿಸ್ಟಾ ಯೋಜನೆಗೆ ಸಮಯ ಮತ್ತು ಹಣವನ್ನು ವ್ಯಯಿಸುತ್ತಿದೆ. ಈ ಯೋಜನೆಯಿಂದಾಗಿ ಪ್ರಧಾನಿ ಮತ್ತು ಉಪರಾಷ್ಟ್ರಪತಿಗೆ ಹೊಸ ನಿವಾಸಗಳನ್ನು ನಿರ್ಮಿಸುವತ್ತ ಒಕ್ಕೂಟ ಸರ್ಕಾರ ಗಮನ ಹರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ