ನವದೆಹಲಿ (ಸೆ. 7): ಶಿಕ್ಷಕರೊಬ್ಬರ ಮನೆಗೆ ನುಗ್ಗಿ, ಕೊಲೆ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಆ ಊರಿನ ಜನರೇ ದೊಣ್ಣೆಯಿಂದ ಹೊಡೆದು, ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಶಿಕ್ಷಕರ ಮನೆಗೆ ನುಗ್ಗಿದ್ದ ವ್ಯಕ್ತಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ. ನಂತರ ಮನೆಯ ಮೇಲೆ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದ. ಅಷ್ಟರಲ್ಲಿ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆದರೆ, ಗುಂಡು ಹಾರಿಸಿ, ಪೊಲೀಸರನ್ನೇ ಹೆದರಿಸುತ್ತಿದ್ದ ಕೊಲೆ ಆರೋಪಿಯ ಮೇಲೆ ದಾಳಿ ಮಾಡಿದ ಗ್ರಾಮಸ್ಥರು ಆತನಿಗೆ ಕೋಲು, ಕಲ್ಲುಗಳಿಂದ ಹೊಡೆದು ಹಲ್ಲೆ ನಡೆಸಿದ್ದಾರೆ.
ಈ ವೇಳೆ ಪೊಲೀಸರು ಜನರು ಮತ್ತು ಕೊಲೆ ಆರೋಪಿಯ ನಡುವಿನ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಜನರ ಗುಂಪು ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡ ಆರೋಪಿ ಸಾವನ್ನಪ್ಪಿದ್ದಾನೆ. ಪೊಲೀಸರ ಎದುರೇ ಜನರಿಂದ ಕೊಲ್ಲಲ್ಪಟ್ಟ ಆರೋಪಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಖುಷಿನಗರದ ರಾಂಪು ಬಾಂಗ್ರಾದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: Ragini Dwivedi: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ; ನಟಿ ರಾಗಿಣಿ ದ್ವಿವೇದಿ ಮತ್ತೆ 5 ದಿನ ಸಿಸಿಬಿ ವಶಕ್ಕೆ
ಶಿಕ್ಷಕರನ್ನು ಶೂಟ್ ಮಾಡಿ ಕೊಂದ ಬಳಿಕ ಹೊರಗೆ ಬಂದ ಆರೋಪಿ ಪೊಲೀಸರನ್ನು ಕಂಡು ಭಯಭೀತನಾಗಿದ್ದ. ತಾನು ಸಿಕ್ಕಿಹಾಕಿಕೊಂಡೆ ಎಂಬ ಭಯದಲ್ಲಿ ಪೊಲೀಸರಿಗೆ ಶರಣಾಗಲು ಮುಂದಾಗಿದ್ದ. ಪೊಲೀಸರು ಆತನನ್ನು ವಶಕ್ಕೆ ಪಡೆಯುತ್ತಿದ್ದಂತೆ ತಮ್ಮ ಊರಿನ ಶಿಕ್ಷಕರನ್ನು ಕೊಲೆ ಮಾಡಿದ್ದಕ್ಕೆ ಕೋಪಗೊಂಡಿದ್ದ ಊರಿನ ಜನರು ಆತನನ್ನು ಎಳೆದುಕೊಂಡು ಹೋಗಿ, ಥಳಿಸಿ ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ