ಮುಂಬೈ (ಸೆಪ್ಟೆಂಬರ್ 23); ಮಂಗಳವಾರದಿಂದ ಮಹಾ ನಗರ ಮುಂಬೈನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಸತತ ಆರು ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಇಡೀ ಆರ್ಥಿಕ ರಾಜಧಾನಿ ಸ್ಥಬ್ಧವಾಗಿದ್ದು, ಅಕ್ಷರಶಃ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಲ್ಲೂ ಆತಂಕ ಮನೆ ಮಾಡಿದೆ. ಭಾರತೀಯ ಹವಾಮಾನ ಇಲಾಖೆ (IMD-India Meteorological Department) ಮುಂಬೈ, ಥಾಣೆ ಮತ್ತು ರಾಯಗಡ್ ಪ್ರದೇಶಗಳಲ್ಲಿ ಹಳದಿ ಎಚ್ಚರಿಕೆ (ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ ಸಾಧ್ಯತೆ) ಮತ್ತು ಪಾಲ್ಘರ್ಗೆ ಕಿತ್ತಳೆ ಎಚ್ಚರಿಕೆ ನೀಡಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತಷ್ಟು ಮಳೆಯಾಗಲಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅನಾಹುತಗಳಾಗುವ ಸಾಧ್ಯತೆ ಇದೆ. ಹೀಗಾಗಿ ಜನ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ. ಇದಲ್ಲದೆ ನಿನ್ನೆಯ ಮಳೆಗೆ ನಗರದ ಪ್ರಮುಖ ರಸ್ತೆಗಳು ನೀರಿನಿಂದ ತುಂಬಿಹೋಗಿವೆ. ಪರಿಣಾಮ ಸಿಯಾನ್-ಕುರ್ಲಾ, ಚುನಭಟ್ಟಿ-ಕುರ್ಲಾ, ಸಿಎಸ್ಎಂಟಿ-ಥಾಣೆ / ಸಿಎಸ್ಎಂಟಿ-ವಾಶಿ ಸೇರಿದಂತೆ ಹಲವು ಮಾರ್ಗಗಳಲ್ಲಿ ರೈಲು ಮತ್ತು ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಕಳೆದ 24 ಗಂಟೆಗಳಲ್ಲಿ, ಪಶ್ಚಿಮ ಉಪನಗರಗಳಲ್ಲಿ 280 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಭಾರತದ ಹವಾಮಾನ ಇಲಾಖೆ (IMD-India Meteorological Department) ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ನಗರದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದಿದೆ.
ನಗರದ ಭೆಂಡಿ ಬಜಾರ್, ಗೋಲ್ ಟೆಂಪಲ್, ನಾನಾ ಚೌಕ್, ಮುಂಬೈ ಸೆಂಟ್ರಲ್ ಜಂಕ್ಷನ್, ಬಾವ್ಲಾ ಕಾಂಪೌಂಡ್, ಜೆ.ಜೆ.ಜಂಕ್ಷನ್, ಹಿಂದ್ಮಾತಾ, ಕಾಲಾ ಚೌಕಿ, ಸರ್ತಿ ಬಾರ್, ವರ್ಲಿ ಸೀ ಫೇಸ್ಗಳಲ್ಲಿ ಮಳೆ ನೀರು ನುಗ್ಗಿದ್ದು, ನೀರು ಹೊರಹಾಕಲು ವಾರ್ಡ್ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಂಬೈ ಕಾಪೋರೇಷನ್ ಟ್ವೀಟ್ ಮಾಡಿದೆ.
ಮಳೆಯಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಜನ ಕಚೇರಿಗೆ ತೆರಳಲು ಆಗದ ಕಾರಣ ಪರಿಸ್ಥಿತಿಯನ್ನು ಪರಿಗಣಿಸಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಎಲ್ಲಾ ಕಚೇರಿಗಳು ಮತ್ತು ಸಂಸ್ಥೆಗಳಿಗೆ ಒಂದು ದಿನದ ರಜೆ ಘೋಷಿಸಿದೆ. ತುರ್ತು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಇನ್ನೂ ಬಾಂಬೆ ಹೈಕೋರ್ಟ್ಗೂ ಒಂದು ದಿನ ರಜೆ ಘೋಷಣೆ ಮಾಡಲಾಗಿದ್ದು, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಎಲ್ಲಾ ನ್ಯಾಯಾಲಯದ ನೌಕರರಿಗೆ ರಜೆ ನೀಡಲಾಗಿದೆ. ಜನರಿಗೆ ಅಗತ್ಯವಿದ್ದರೇ ಮಾತ್ರ ಮನೆಗಳಿಂದ ಹೊರ ಬರುವಂತೆ ಬೃಹನ್ ಮುಂಬೈ ಕಾರ್ಪೊರೇಷನ್ ಮನವಿ ಮಾಡಿದೆ.
ಮಹಾಮಳೆಯಿಂದಾಗಿ ಮುಂಬೈನ ಚಾರಿಟಿ ಆಸ್ಪತ್ರೆ ನಾಯರ್ ಆಸ್ಪತ್ರೆ ನೀರಿನಿಂದ ತುಂಬಿದೆ. ಕೊರೋನಾ ರೋಗಿಗಳಿದ್ದ ಕೊವೀಡ್ ವಾರ್ಡ್ ಸಂಪೂರ್ಣ ಮಳೆ ನೀರಿನಿಂದ ತುಂಬಿದ್ದು ರೋಗಿಗಳ ಜೊತೆಗೆ ಆಸ್ಪತ್ರೆ ಸಿಬ್ಬಂದಿ ಕೂಡ ಪರದಾಡುವಂತಾಗಿದೆ. ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಭಾರತದಲ್ಲೇ ಮುಂಬೈ ಪ್ರಥಮ ಸ್ಥಾನದಲ್ಲಿದೆ. ಇಂತಹ ಸಂದರ್ಭದಲ್ಲಿ ಈ ಭೀಕರ ಮಳೆ ಸೃಷ್ಟಿಸಿರುವ ಅವಾಂತರ ಮುಂಬೈ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಕರ್ನಾಟಕ ಸೇರಿ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪಿಎಂ ನರೇಂದ್ರ ಮೋದಿ ಸಭೆ
ಹಳೆಯ ಕಟ್ಟಡಗಳು ಮತ್ತು ಸರಿಯಾಗಿ ನಿರ್ವಹಿಸದೆ ಇರುವ ಕಟ್ಟಡಗಳಿಂದ ಅಪಾಯದ ಸಾಧ್ಯತೆ ಇದೆ ಎಂದು ಹವಾಮಾನ ಕಚೇರಿ ಎಚ್ಚರಿಕೆ ನೀಡಿದೆ. ಈ ವಾರದ ಆರಂಭದಲ್ಲಿ ಮುಂಬೈ ಬಳಿಯ ಭಿವಾಂಡಿಯಲ್ಲಿ ಕಟ್ಟಡ ಕುಸಿದು 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ