ಮುಂಬೈ(ಜೂ.10): ಮಹಾನಗರಿ ಮುಂಬೈನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಈ ವರ್ಷದ ಮೊದಲ ಮುಂಗಾರು ಮಳೆಗೆ ರಸ್ತೆಗಳು ಜಲಾವೃತಗೊಂಡು ನದಿಯಂತಾಗಿದ್ದವು. ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಲ್ಲಿ ಇಂದು ಅಧಿಕ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಭಾರೀ ಮಳೆಯಾಗುವ ಕರಾವಳಿ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 15 ಎನ್ಡಿಆರ್ಎಫ್ ತಂಡಗಳು ಈಗಾಗಲೇ ಬೀಡು ಬಿಟ್ಟಿವೆ. ಅವುಗಳಲ್ಲಿ 3 ತಂಡ ಮುಂಬೈನಲ್ಲಿ, 4 ತಂಡ ಸಿಂಧುದರ್ಗ್ನಲ್ಲಿ, ಎರಡೆರಡು ತಂಡ ಥಾಣೆ, ರಾಯ್ಗಢ, ಪಾಲ್ಗರ್ ಹಾಗೂ ರತ್ನಗಿರಿಯಲ್ಲಿ ಬೀಡು ಬಿಟ್ಟಿವೆ.
ಮುಂಬೈ, ಥಾಣೆ, ಪಾಲ್ಗರ್ ಮತ್ತು ರಾಯ್ಗಢ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜೊತೆಗೆ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ.
ಇದನ್ನೂ ಓದಿ:Mumbai Building Collapse: ಮುಂಬೈನಲ್ಲಿ ತಡರಾತ್ರಿ ಕಟ್ಟಡ ಕುಸಿದು 9 ಮಂದಿ ಸಾವು
ಮುಂಬೈನ ಮಲಾಡ್ನಲ್ಲಿ ತಡರಾತ್ರಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, ಸುಮಾರು 9 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 17 ಜನರು ಗಾಯಗೊಂಡಿದ್ದು, ಅವರಲ್ಲಿ 8 ಜನರ ಸ್ಥಿತಿ ತೀರಾ ಗಂಭೀರವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಕಟ್ಟಡದ ಪಕ್ಕದಲ್ಲಿದ್ದ ಇನ್ನೂ 3 ಬಿಲ್ಡಿಂಗ್ಗಳು ಅಪಾಯದ ಸ್ಥಿತಿಯಲ್ಲಿವೆ ಎಂದು, ಅದರಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮುಂಬೈನಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ರಸ್ತೆಗಳು ಜಲಾವೃತಗೊಂಡು ನದಿಯಂತಾಗಿ ವಾಹನ ಸವಾರರು ಪರದಾಡುವಂತೆ ಆಗಿತ್ತು. ಜೊತೆಗೆ ರೈಲ್ವೆ ಹಳಿಗಳು ಸಹ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಯಿತು. ನೈರುತ್ಯ ಮಾನ್ಸೂನ್ ಅಬ್ಬರ ಹೆಚ್ಚಾಗಿದ್ದು, ಇಂದು ಭಾರೀ ಮಳೆಯಾಗಲಿದೆ.
ಇದನ್ನೂ ಓದಿ:Karnataka Weather Today | ಕರಾವಳಿಯಲ್ಲಿ ಜೂನ್ 13ರವರೆಗೆ ಗುಡುಗು ಸಿಡಿಲು ಸಹಿತ ಮಳೆ; ಆರೆಂಜ್ ಅಲರ್ಟ್ ಘೋಷಣೆ
ಭಾರೀ ಮಳೆಯ ಕಾರಣದಿಂದಾಗಿ ರೈಲು ಸಂಚಾರಲದಲ್ಲೂ ವ್ಯತ್ಯಯ ಉಂಟಾಗಿದೆ. ರೈಲ್ವೆ ಹಳಿಗಳು ಜಲಾವೃತಗೊಂಡಿರುವುದರಿಂದ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ನಿಂದ ಪಕ್ಕದ ಥಾಣೆ, ನವ ಮುಂಬೈನ ವಾಸಿಗೆ ತೆರಳುವ ರೈಲುಗಳು ಇಂದು ಸಂಚರಿಸುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ