ಜಾರ್ಖಂಡ್: ಮಕ್ಕಳಿಲ್ಲ (Children) ಎಂದು ದೇವರಿಗೆ (God) ಹರಿಕೆ ಕಟ್ಟುಕೊಳ್ಳುವವರನ್ನಾ, ಆಸ್ಪತ್ರೆಗಳಿಗೆ ಸುತ್ತುವವರನ್ನ ನೀವು ನೋಡಿರುತ್ತೀರಾ. ಇನ್ನು ಮಗುವಿಗೆ ಜನ್ಮ ನೀಡಿದ ಮೇಲೆ ತಾಯಿ ಕೂಡ ಲಿಂಗ ಭೇದವಿಲ್ಲದೆ ತನ್ನ ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಾಳೆ, ಕಾಳಜಿ ವಹಿಸುತ್ತಾಳೆ. ಆದರೆ ಇಲ್ಲೊಬ್ಬ ಮಹಿಳೆ ಹಣಕ್ಕಾಗಿ (Money) ಆಗತಾನೆ ಜನ್ಮನೀಡಿದ ಮಗುವನ್ನು ಮಾರಿಕೊಂಡು ಹೆಣ್ತನಕ್ಕೆ ಕೆಟ್ಟ ಹೆಸರು ತಂದಿದ್ದಾಳೆ. ಈ ಘಟನೆ ಜಾರ್ಖಂಡ್ನ (Jharkhand) ಛತ್ರಾ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಮಗುವಿನ ತಾಯಿಯಲ್ಲದೆ, ಈ ಪ್ರಕರಣ ಬೆಳಕಿಗೆ ಬಂದನಂತರ ಸುಮಾರು 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಶಾ ದೇವಿ ಎಂಬ ಮಹಿಳೆ ತನ್ನ ನವಜಾತ ಶಿಶುವನ್ನು 4.5 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾಳೆ. ಮಗುವಿನ ಮಾರಾಟದ ಬಗ್ಗೆ ಮಾಹಿತಿ ಪಡೆದ ನಂತರ ನಾವು ಕಾರ್ಯಾಚರಣೆ ನಡೆಸಿ 24 ಗಂಟೆಗಳಲ್ಲಿ ಬೊಕಾರೊ ಜಿಲ್ಲೆಯಲ್ಲಿದ್ದ ನವಜಾತ ಶಿಶುವನ್ನು ರಕ್ಷಿಸಿದೆವು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ಮಾಹಿತಿ ನೀಡಿದ ವೈದ್ಯ
ಮಗುವನ್ನು ಹೆತ್ತ ತಾಯಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದ ವೈದ್ಯರು ಜಿಲ್ಲಾಧಿಕಾರಿ ಅಬು ಇಮ್ರಾನ್ ವಿಷಯ ಮುಟ್ಟಿಸಿದ್ದಾರೆ. ಡಿಸಿ ಪೊಲೀಸರಿಗೆ ಸೂಚನೆ ನೀಡಿದ್ದು, ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು 24 ಗಂಟೆಯೊಳಗೆ ಮಗುವನ್ನು ರಕ್ಷಣೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Newborn Baby: ಕಸದ ಲಾರಿ ಹರಿದು ನವಜಾತ ಶಿಶು ಸಾವು, ಅತ್ತ ಕೊಳಕ್ಕೆ ಎಸೆದರೂ ಬದುಕಿದ ಕಂದಮ್ಮ!
11 ಜನರ ಬಂಧನ
ಶಿಶು ಮಾರಾಟದ ವಿಷಯ ತಿಳಿಯುತ್ತಿದ್ಧಂತೆ ಮಗುವಿನ ತಾಯಿಯನ್ನು ವಿಚಾರಣೆಗೆ ಒಳಪಡಿಸಿ, ಆಕೆಯ ಬಳಿಯಿದ್ದ 1 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು. ಆಕೆ ನೀಡಿದ ಮಾಹಿತಿ ಆಧಾರದ ಮೇಲೆ ಮಗು ಖರೀದಿಸಿದ್ದ ಡಿಂಪಲ್ ದೇವಿ ಎಂಬುವವರನ್ನು ಬಂಧಿಸಿದೆವು. ಡಿಂಪಲ್ ದೇವಿ ನೀಡಿದ ಕೆಲವು ಮಾಹಿತಿ ಆಧರಿಸಿ ಉಳಿದ 11 ಆರೋಪಿಗಳನ್ನು ಬಂಧಿಸಲಾಯಿತು. ಬೊಕಾರೊದಲ್ಲಿದ್ದ ಮಗುವನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ಅವಿನಾಶ್ ಕುಮಾರ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಗುವಿನ ತಾಯಿಗೆ 1 ಲಕ್ಷ, ಉಳಿದವರಿಗೆ 3.5 ಲಕ್ಷ
ಮಗುವನ್ನು 4.5 ಲಕ್ಷಕ್ಕೆ ಮಾರಾಟ ಮಾಡಿದರೂ ಮಗುವಿನ ತಾಯಿಗೆ ಕೇವಲ ಒಂದು ಲಕ್ಷ ರೂಪಾಯಿ ಮಾತ್ರ ನೀಡಲಾಗಿದೆ. ಉಳಿದ 3.5 ಲಕ್ಷವನ್ನು ದಳ್ಳಾಳಿಗಳು ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರ್ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
4 ದಿನದ ಶಿಶು ಕೊಂದ ಪೊಲೀಸ್ ಅಮಾನತು
ಜಾರ್ಖಂಡ್ನ ಗಿರಿದಿವ್ ಜಿಲ್ಲೆಯ ಕೊಸೊಗೊಂಡೋಡಿಗಿನ್ ಗ್ರಾಮದಲ್ಲಿ ಆರೋಪಿಯೊಬ್ಬನ ಬಂಧನಕ್ಕೆ ತೆರಳಿದ್ದ ಪೊಲೀಸರು ಶೂ ಕಾಲಲ್ಲಿ 4 ದಿನದ ನವಜಾತ ಶಿಶುವನ್ನು ತುಳಿದು ಕೊಂದಿರುವ ದಾರುಣ ಘಟನೆ ನಡೆದಿದೆ. ಮಗುವಿನ ಸಾವಿಗೆ ಕಾರಣವಾದ 6 ಪೊಲೀಸ್ ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಭೂಷಣ್ ಪಾಂಡೆ ಎಂಬ ಆರೋಪಿಯೊಬ್ಬನನ್ನು ಬಂಧಿಸಲು ಪೊಲೀಸರು ಆತನ ಮನೆಗೆ ತೆರಳಿದ್ದಾರೆ. ಈ ವೇಳೆ ಮಗುವನ್ನು ಮನೆಯಲ್ಲೇ ಮಲಗಿಸಿ ಮನೆಯವರೆಲ್ಲಾ ಓಡಿ ಹೋಗಿದ್ದರು. ಆದರೆ ಅವರು ವಾಪಸ್ ಬರುವ ವೇಳೆಗೆ ಮಗು ಸಾವನ್ನಪ್ಪಿತ್ತು. ಮಗುವಿನ ಕುತ್ತಿಗೆಯ ಬಳಿ ಶೂ ಗುರುತು ಇದ್ದಿದ್ದರಿಂದ, ಪೊಲೀಸರೇ ಮಗುವನ್ನೇ ಕೊಂದಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದರು. ಈ ಘಟನೆ ರಾಜ್ಯಾದ್ಯಂತ ಹರಡಿದ್ದರಿಂದ ಸ್ವತಃ ಸಿಎಂ ಹೇಮಂತ್ ಸೋರೆನ್ ತನಿಖೆಗೆ ಆದೇಶಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ