ಒಡಿಶಾ: 11 ಮಕ್ಕಳ ತಾಯಿಯಾಗಿರುವ ಬುಡಕಟ್ಟು ಮಹಿಳೆ (Tribal Woman) ಸಂತಾನಹರಣ (Tubectomy) ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಳೆಂಬ ಕಾರಣಕ್ಕೆ ಆಕೆಯ ಗಂಡ ಮನೆಯಿಂದ ಹೊರ ಕಳುಹಿಸಿದ ಆಘಾತಕಾರಿ ಘಟನೆ ಒಡಿಶಾದ ಕಿಯೋಂಜರ್ (Keonjhar) ಜಿಲ್ಲೆಯಲ್ಲಿ ನಡೆದಿದೆ. ತನ್ನ ಇಚ್ಛೆಗೆ ವಿರುದ್ಧವಾಗಿ ಶಾಶ್ವತ ಗರ್ಭನಿರೋಧಕ ವಿಧಾನವಾದ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಕ್ಕಾಗಿ ಮನೆಯಿಂದ ಪತಿ ಹೊರ ಹಾಕಿದ್ದಾನೆ. ಆದಿವಾಸಿ ಸಮುದಾಯದ ರಬಿ ದೇಹುರಿ ಎಂಬ ವ್ಯಕ್ತಿ 11 ಮಕ್ಕಳ ತಾಯಿಯಾಗಿರುವ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಆದರೆ ವಿಷಯ ತಿಳಿದ ಆರೋಗ್ಯ ಇಲಾಖೆ (Health Department) ಅಧಿಕಾರಿಗಳು ರಬಿ ಮನವೊಲಿಸಿ ಪತ್ನಿಯನ್ನು ಮನೆಗೆ ಸೇರಿಸಿದ್ದಾರೆ.
ಮೂರು ದಿನಗಳ ಹಿಂದೆ ಜಾನಕಿ ದೇಹುರಿಯನ್ನು ಆಕೆಯ ಪತಿ ಮನೆಯಿಂದ ಹೊರಹಾಕಿದ್ದಾರೆ. ಆದರೆ ಜಾನಕಿ ತನ್ನ ಕೆಲವು ಮಕ್ಕಳೊಂದಿಗೆ ದಿಮಿರಿಯಾ ಗ್ರಾಮದ ಪತಿಯ ಮನೆಯ ಹೊರಗೆ ಉಳಿದುಕೊಂಡಿದ್ದಾಳೆ.
ಆಶಾ ಕಾರ್ಯಕರ್ತೆ ಮಾತು ಕೇಳಿ ಶಸ್ತ್ರಚಿಕಿತ್ಸೆ
ಈಗಾಗಲೆ 11 ಮಕ್ಕಳ ತಾಯಿಯಾಗಿದ್ದ ಜಾನಕಿಗೆ ಪ್ರತಿ ವರ್ಷ ಮಕ್ಕಳಿಗೆ ಜನ್ಮ ನೀಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ಜಾನಕಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಜಾನಕಿ ಮದುವೆಯಾದ 11 ವರ್ಷಗಳಲ್ಲಿ ಅವರು 11 ಮಕ್ಕಳಿಗೆ ಜನ್ಮ ನೀಡಿದ್ದಾರೆ. 11ರಲ್ಲಿ ಒಂದು ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಆಪರೇಷನ್ ಮಾಡಿಸಿಕೊಂಡರೆ ನೀರು ಸಿಗಲ್ಲ!
ಮನೆಯಲ್ಲಿ ಮಕ್ಕಳು ಬೆಳೆಯುತ್ತಿರುವಾಗ ಪ್ರತಿ ವರ್ಷ ಗರ್ಭಿಣಿಯಾಗಲು ನನಗೆ ತುಂಬಾ ಮುಜುಗರವಾಗುತ್ತಿತ್ತು. ನಮ್ಮ ಗ್ರಾಮದ ಅನೇಕ ಮಹಿಳೆಯರು ಆಪರೇಷನ್ ಮಾಡಿಸಿಕೊಂಡಿದ್ದಾರೆ. ಆದರೆ ನನ್ನ ಪತಿಗೆ ಅರ್ಥವಾಗದೆ ನನ್ನನ್ನು ಮನೆಯಿಂದ ಹೊರಹಾಕಿದ್ದರು ಎಂದು ಜಾನಕಿ ನೋವು ತೋಡಿಕೊಂಡಿದ್ದಾರೆ.
ಆದರೆ ಆಕೆಯ ಪತಿ , ತನ್ನ ಪತ್ನಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಅಪರಾಧ ಮಾಡಿದ್ದಾಳೆ ಎಂದು ಹೇಳಿದ್ದಾನೆ. " ನಾವು ಭೂಯಾನ್ ಸಮುದಾಯಕ್ಕೆ ಸೇರಿದವರು. ಸಮುದಾಯದ ನಂಬಿಕೆಯಂತೆ ನಮ್ಮ ಪೂರ್ವಜರು ಮಹಿಳೆಯರಿಗೆ ಆಪರೇಷನ್ ಮಾಡಿಸಿಕೊಂಡರೆ ನೀರು ಸಿಗುವುದಿಲ್ಲ. ಇಂತಹ ಕಾರ್ಯಾಚರಣೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ" ಎಂದು ಹೇಳಿದ್ದಾನೆ.
ಮನವೊಲಿಸಿದ ಅಧಿಕಾರಿಗಳು
ಘಟನೆ ಬೆಳಕಿಗೆ ಬಂದ ನಂತರ ಸಲೆಕೆನಾ ಪಂಚಾಯತ್ ವಿಸ್ತರಣಾಧಿಕಾರಿ ದಾಮೋದರ್ ಭಾನುವಾರ ಭೂಯಾನ್ ಮಹಾಸಮಾಜದ ಸಂಜಯ್ ಶೇಖರ್ ಗಿರಿ ಎಂಬುವವರ ಜೊತೆ ರಬಿ ಅವರ ನಿವಾಸಕ್ಕೆ ಹೋಗಿ ಆತನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇದೆಲ್ಲಾ ಮೂಢನಂಬಿಕೆ, ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಜಾನಕಿಗೆ ಶಸ್ತ್ರಚಿಕಿತ್ಸೆ ಕಾನೂನು ಪ್ರಕಾರ ನಡೆಸಲಾಗಿದೆ ಎಂದು ಆತನಿಗೆ ಮನವರಿಕೆ ಮಾಡಿಕೊಡಲಾಗಿದೆ. ಗ್ರಾಮಸ್ಥರು ಮತ್ತು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟ ನಂತರ ರಬಿ ಕ್ಷಮೆಯಾಚಿಸಿ ಆಸ್ಪತ್ರೆಯಲ್ಲಿದ್ದ ಆತನ ಪತ್ನಿ ಜಾನಕಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.
ದುರ್ಬಲಳಾಗಿದ್ದ ಜಾನಕಿ
ಜಾನಕಿಯನ್ನು ಶಸ್ತ್ರಚಿಕಿತ್ಸೆಗೆ ಹೋಗಲು ಮನವೊಲಿಸಿದ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಬಿಸ್ವಾಲ್ ಮಾತನಾಡಿ, ಆಗಾಗ್ಗೆ ಗರ್ಭಿಣಿಯಾಗಿದ್ದರಿಂದ ಜಾನಕಿ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಇನ್ನು ಗರ್ಭಾವಸ್ಥೆಯನ್ನು ನಿಭಾಯಿಸಲು ವಿಫಲವಾಗಿ ಆಕೆ ತುಂಬಾ ದುರ್ಬಲಳಾಗಿದ್ದಾಳೆ. ಅಲ್ಲದೆ 10 ಮಕ್ಕಳನ್ನು ಬೆಳೆಸುವುದು ಕುಟುಂಬಕ್ಕೆ ಕಷ್ಟವಾಗಿತ್ತು. ಇದನ್ನು ನಾನು ರಬಿಗೆ ಮನವರಿಕೆ ಮಾಡಲು ಯತ್ನಿಸಿದೆ. ಆದರೆ ಆತ ನನ್ನನ್ನು ಕೊಲ್ಲುವುದಾಗಿ ಬೆದರಿಸಿದ್ದ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ