ಡಿಸ್ಪುರ್(ಮೇ.26): ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ (Lok Sabha Elections) ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಗುರುವಾರ ಹೇಳಿದ್ದಾರೆ. ಕಾಂಗ್ರೆಸ್ (Congress) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 2024 ರಲ್ಲಿ ದೇಶದ ಅತ್ಯಂತ ಹಳೆಯ ಪಕ್ಷವು ಲೋಕಸಭೆಯಲ್ಲಿ ಪ್ರಸ್ತುತ ಸ್ಥಾನಗಳನ್ನು ಉಳಿಸಿಕೊಳ್ಳಲು ಹೆಣಗಾಡಲಿದೆ ಎಂದು ಹೇಳಿದರು.
ಅಸ್ಸಾಂ ಸರ್ಕಾರಿ ಉದ್ಯೋಗಗಳಿಗಾಗಿ 44,703 ಯಶಸ್ವಿ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಬಿಜೆಪಿ ನಾಯಕ, ಮೇ 28 ರ ಹೊಸ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಲು ನಿರ್ಧರಿಸುವ ಮೂಲಕ ಕಾಂಗ್ರೆಸ್ 'ನಕಾರಾತ್ಮಕ ಧೋರಣೆ'ಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು. ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಟೀಕಿಸಿದರು.
ಮುಂದಿನ ವರ್ಷ 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದ್ದು, ಲೋಕಸಭೆಯಲ್ಲಿ ಪ್ರಸ್ತುತ ಹೊಂದಿರುವ ಸ್ಥಾನಗಳನ್ನೂ ಪಡೆಯಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಧೋರಣೆ ನಕಾರಾತ್ಮಕವಾಗಿದೆ. ಮೇ 28ರಂದು ನೂತನ ಸಂಸತ್ ಭವನವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ, ಆದರೆ ರಾಷ್ಟ್ರಪತಿಗಳೇ ಉದ್ಘಾಟನೆ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಬಹಿಷ್ಕರಿಸುವ ಮೂಲಕ ರಾಜಕೀಯ ಮಾಡುತ್ತಿದೆ. ನೂತನ ಸಂಸತ್ ಭವನವನ್ನು ಉದ್ಘಾಟಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ 21 ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ಪ್ರಧಾನಿಯವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿರುವುದು ಭಾರತದ ರಾಷ್ಟ್ರಪತಿಗಳ ಸಾಂವಿಧಾನಿಕ ಪಾತ್ರವನ್ನು ದುರ್ಬಲಗೊಳಿಸುತ್ತದೆ ಮತ್ತು ಅವರಿಗೆ ಅಗೌರವ ತೋರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: Siddaramaiah: ಹೂವಿನ ಹಾಸಿಗೆಯಲ್ಲ ಸಿಎಂ ಸ್ಥಾನ! ಸಿದ್ದು ಮುಂದಿದೆ ಸಾಲು-ಸಾಲು ಸವಾಲು!
ಈ ವಿಷಯವು ಮಹತ್ವದ ರಾಜಕೀಯ ವಿವಾದವಾಗಿ ಬೆಳೆದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. 21 ವಿರೋಧ ಪಕ್ಷಗಳು ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದು, 'ಪ್ರಜಾಪ್ರಭುತ್ವದ ಆತ್ಮ ಕೊಲ್ಲಲ್ಪಟ್ಟಾಗ' ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯ ಕಾಣುವುದಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, 25 ಪಕ್ಷಗಳು - 18 ಎನ್ಡಿಎ ಘಟಕಗಳು ಮತ್ತು ಏಳು ಎನ್ಡಿಎಯೇತರ ಪಕ್ಷಗಳು - ಭಾನುವಾರದ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರವನ್ನು ಪ್ರಧಾನಿ ಸಮರ್ಥಿಸಿಕೊಂಡ ಅಮಿತ್ ಶಾ, ಕಾಂಗ್ರೆಸ್ ಪಕ್ಷ ಮತ್ತು ಪ್ರತಿಪಕ್ಷಗಳು ಆಳುವ ರಾಜ್ಯಗಳಲ್ಲಿ ಇಂತಹ ಹಲವು ಉದಾಹರಣೆಗಳಿವೆ ಎಂದು ವಾದಿಸಿದರು. ಆ ಸಂದರ್ಭಗಳಲ್ಲಿ ರಾಜ್ಯಪಾಲರ ಬದಲಿಗೆ ಆಯಾ ಮುಖ್ಯಮಂತ್ರಿಗಳು ಮತ್ತು ಸೋನಿಯಾ, ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಹೊಸ ವಿಧಾನಸಭೆ ಕಟ್ಟಡಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಅವರು ಗಮನ ಸೆಳೆದರು.
ಸಂಸತ್ತಿನ ಒಳಗೆ ಪ್ರಧಾನಿಗೆ ಮಾತನಾಡಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಮತ್ತು ಅವರ ಭಾಷಣಕ್ಕೆ ಅಡ್ಡಿಪಡಿಸುತ್ತದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತದ ಜನತೆ ಜನಾದೇಶ ನೀಡಿದ್ದಾರೆ. ಪ್ರಧಾನ ಮಂತ್ರಿಯನ್ನು ಗೌರವಿಸದಿರುವುದು ದೇಶದ ಜನರ ಆದೇಶವನ್ನು ಅಗೌರವಿಸಿದಂತೆ' ಎಂದಿದ್ದಾರೆ.
ಅಲ್ಲದೇ 2021 ರ ವಿಧಾನಸಭಾ ಚುನಾವಣೆಯ ಮೊದಲು ಅಸ್ಸಾಂನಲ್ಲಿ ಒಂದು ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡಲು ಬಿಜೆಪಿ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎರಡೂವರೆ ವರ್ಷಗಳ ಅವಧಿಯಲ್ಲಿ ಈಗಾಗಲೇ 86,000 ಉದ್ಯೋಗಗಳನ್ನು ಒದಗಿಸಲಾಗಿದ್ದು, ಉಳಿದ ಉದ್ಯೋಗಗಳನ್ನು ಮುಂದಿನ 6 ತಿಂಗಳೊಳಗೆ ಒದಗಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: DCM: ಉಪಮುಖ್ಯಮಂತ್ರಿ ಅನ್ನೋದು ಅಧಿಕಾರವಿಲ್ಲದ ಅಲಂಕಾರಿಕ ಹುದ್ದೆಯೇ? ಡಿಸಿಎಂಗೆ ಯಾವ ಪವರ್ ಇರುತ್ತದೆ?
ಇನ್ನು ಮೇ 28 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 10, 2020 ರಂದು ಶಂಕುಸ್ಥಾಪನೆ ಮಾಡಿದ ದೇಶದ ಹೊಸ ಸಂಸತ್ತನ್ನು ಉದ್ಘಾಟಿಸಲಿದ್ದಾರೆ ಎಂಬುವುದು ಉಲ್ಲೇಖನೀಯ. ಹೊಸ ಸಂಸತ್ತಿನ ಲೋಕಸಭೆ ಚೇಂಬರ್ 888 ಸ್ಥಾನಗಳನ್ನು ಮತ್ತು ರಾಜ್ಯಸಭಾ ಚೇಂಬರ್ 384 ಸ್ಥಾನಗಳನ್ನು ಹೊಂದಿರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ