ನವದೆಹಲಿ(ಜ.30): ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸದ ಪರ್ವೇಶ್ ವರ್ಮಾಗೆ ದೆಹಲಿಯಲ್ಲಿ ಚುನಾವಣಾ ಪ್ರಚಾರ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಅನುರಾಗ್ ಠಾಕೂರ್ ಮೂರು ದಿನ ಮತ್ತು ಪರ್ವೇಶ್ ವರ್ಮಾ ನಾಲ್ಕು ದಿನಗಳ ಕಾಲ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗಬಾರದು ಎಂದು ಕೇಂದ್ರ ಚುನಾವಣೆ ಆಯೋಗವೂ ಖಡಕ್ ಆದೇಶ ಹೊರಡಿಸಿದೆ.
ಮೂರು ದಿನಗಳ ಹಿಂದೆ ಜನವರಿ 27ನೇ ತಾರೀಕಿನಂದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಅನುರಾಗ್ ಠಾಕೂರ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇಲ್ಲಿನ ರೋಡ್ ಶೋನಲ್ಲಿ ಜನರನ್ನುದ್ದೇಶಿಸಿ ಮಾತಾಡುವ ವೇಳೆ ಅನುರಾಗ್ ಠಾಕೂರ್, ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಹೇಳಿಕೆ ನೀಡುವ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದರು.
ಇನ್ನು,
ಅನುರಾಗ್ ಠಾಕೂರ್ ಬೆನ್ನಲ್ಲೇ ಬಿಜೆಪಿ ಮುಖಂಡ ಪರ್ವೇಶ್ ವರ್ಮಾ ಕೂಡ ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ಚರ್ಚೆಗೀಡಾಗಿದ್ದರು. ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದ ಒಂದೇ ಗಂಟೆಯಲ್ಲಿ ಶಹೀನ್ ಬಾಗ್ ನೆಲಸಮವಾಗಲಿದೆ. ಶಹೀನ್ ಬಾಗ್ನಲ್ಲಿರುವ ಎಲ್ಲಾ ಪ್ರತಿಭಟನಾಕಾರರನ್ನು ಓಡಿಸುತ್ತೇವೆ. ಒಬ್ಬೇ ಒಬ್ಬ ಪ್ರತಿಭಟನಾಕಾರನನ್ನು ಉಳಿಸುವುದಿಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದರು.
ಇದನ್ನೂ ಓದಿ: ಪರಮೇಶ್ವರ್, ಎಚ್.ಡಿ ರೇವಣ್ಣ, ಡಿಕೆಶಿ, ಜಾರ್ಜ್, ಎಂ.ಬಿ ಪಾಟೀಲ್ ಭದ್ರತೆ ಕಡಿತಕ್ಕೆ ತುರ್ತು ಆದೇಶ
ಜತೆಗೆ ಶಾಹೀನ್ ಬಾಗ್ನಲ್ಲಿ ಲಕ್ಷಾಂತರ ಜನರಿದ್ದಾರೆ. ದೆಹಲಿಗರು ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಶಹೀನ್ ಬಾಗ್ ಪ್ರತಿಭಟನೆಯ ಕಾವು ನಿಮ್ಮ ಮನೆಗೂ ತಲುಪಬಹುದು. ನಿಮ್ಮ ಅಕ್ಕ-ತಂಗಿಯರು, ಮಕ್ಕಳ ಮೇಲೆ ಪ್ರತಿಭಟನಾಕಾರರು ಅತ್ಯಾಚಾರ ನಡೆಸಬಹುದು. ನಿಮಗೆ ಏನು ಬೇಕೆಂದು ಆಯ್ಕೆ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಸದ್ಯ ನೀವು ಎಚ್ಚೆತ್ತುಕೊಳ್ಳದಿದ್ದರೆ, ನಾಳೆ ಮೋದಿ, ಅಮಿತ್ ಶಾ ಯಾರೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಪರ್ವೇಶ್ ವರ್ಮಾ ಪ್ರಚೋದನಾಕಾರಿ ಭಾಷಣ ಮಾಡಿದ್ದರು.
ಸಿಎಎ ಹಾಗೂ ಎನ್ಆರ್ಸಿ ವಿರೋಧಿಸುವವರೆಲ್ಲ ದೇಶದ್ರೋಹಿಗಳು ಎಂದು ಹೇಳಿಕೆ ನೀಡಿದ್ದ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಭಾಷಣದ
ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದವು. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಚುನಾವಣಾ ಆಯೋಗವು, ಇಬ್ಬರಿಗೂ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಶೋಖಾಸ್ ನೋಟೀಸ್ಗಳಿಗೆ ಬಿಜೆಪಿ ಮುಖಂಡರು ನೀಡಿದ ಉತ್ತರ ಚುನಾವಣಾ ಆಯೋಗಕ್ಕೆ ಸಮಾಧಾನ ತಂದಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ