ನವದೆಹಲಿ: ಮೈಕ್ರೋಸಾಫ್ಟ್ ಸಂಸ್ಥಾಪಕ (Microsoft Founder) ಬಿಲ್ ಗೇಟ್ಸ್ ( Bill Gates) ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರೊಂದಿಗೆ ತಮ್ಮ ಪಾಕಶಾಲೆಯ ಕೌಶಲ್ಯವನ್ನು ತೋರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸದ್ದು ಮಾಡುತ್ತಿದೆ. ಖಾದ್ಯಗಳ ತಯಾರಿಕೆಯಲ್ಲಿ ಭಾರತೀಯರು (Indians)ತುಂಬಾ ನಿಪುಣರು, ವಿದೇಶಿಯರು ಕೂಡ ಭಾರತದ ರುಚಿಕರ ಅಡುಗೆಗೆ ಮನಸೋತಿದ್ದಾರೆ. ಕಿಚಡಿ ಕೂಡ ಭಾರತದ ಪ್ರಮುಖ ಖಾದ್ಯಗಳಲ್ಲಿ ಒಂದಾಗಿದೆ. ಇದೀಗ ಪ್ರಸಿದ್ಧ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಕಿಚಡಿ ತಯಾರಿಸಿ ಅದರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾರ್ಗದರ್ಶನದಲ್ಲಿ ಕಿಚಡಿ ತಯಾರಿಸಿ ಸೇವಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral)ಆಗುತ್ತಿದೆ.
ವಿಡಿಯೋ ವೈರಲ್
ಈ ವಿಡಿಯೊವನ್ನು ಸ್ವತಃ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬಾಣಲೆಗೆ ಸಚಿವೆ ಸ್ಮೃತಿ ಇರಾನಿ ಮೊದಲು ಎಣ್ಣೆ ಹಾಕುತ್ತಾರೆ. ನಂತರ ಬಿಲ್ ಗೇಟ್ಸ್ ಅವರು ಒಗ್ಗರಣೆಯನ್ನು ಹಾಕುತ್ತಾರೆ. ಅದರಲ್ಲಿ ಬಿಲ್ ಗೇಟ್ಸ್ ಸೌಟು ಆಡಿಸುತ್ತಾರೆ. ನಂತರ ಸ್ಮೃತಿ ಅವರು ಒಂದು ಚಿಕ್ಕ ಬೌಲ್ನಲ್ಲಿ ಕಿಚಡಿಯನ್ನು ಹಾಕಿ ಬಿಲ್ ಗೇಟ್ಸ್ಗೆ ತಿನ್ನಲು ಕೊಡುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, 6.6 ಲಕ್ಷ ವೀಕ್ಷಣೆ ಕಂಡಿದೆ.
ಇದನ್ನೂ ಓದಿ: G20 Summit: ಉಕ್ರೇನ್ ಯುದ್ಧ ಭೀತಿಯ ಮಧ್ಯೆ ರಷ್ಯಾ-ಅಮೆರಿಕಾ ಮುಖಾಮುಖಿ, ಏಕತೆ ಮೂಡಿಸುತ್ತಾ ಭಾರತ?
ಭಾರತೀಯ ಮಗುವಿಗೆ ಅನ್ನ ಪ್ರಾಶನ ಮಾಡಿದ ಗೇಟ್ಸ್
ಕಿಚಡಿ ಅಡುಗೆ ಮಾಡುವ ವಿಧಾನವನ್ನು ಕಲಿತ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಇದೇ ಸಂದರ್ಭದಲ್ಲಿ ಭಾರತೀಯ ಮಗುವಿಗೆ ಅನ್ನ ಪ್ರಾಶನ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ದೇಶದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿರುವ ಪೋಶನ್ 2.0 ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕರನ್ನು ಭೇಟಿ ಮಾಡಿದರು.
ಭಾರತವು ದತ್ತಾಂಶ ಮತ್ತು ಮೇಲ್ವಿಚಾರಣೆಯನ್ನು ಕೇಂದ್ರೀಕರಿಸಿ ನ್ಯೂಟ್ರಿಷನ್ 2.0 ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕರ ಭವಿಷ್ಯದತ್ತ ಬಲವಾದ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಬಿಲ್ ಗೇಟ್ಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿನ್, ಟಾಟಾರನ್ನು ಭೇಟಿ ಮಾಡಿದ ಗೇಟ್ಸ್
ಮೈಕ್ರೋಸಾಫ್ ಮುಖ್ಯಸ್ಥ ಬಿಲ್ ಗೇಟ್ಸ್ ಮಾರ್ಚ್ 1ರಂದು ಭಾರತದ ಉದ್ಯಮಿಗಳಾದ ರತನ್ ಟಾಟಾ, ಎನ್ ಚಂದ್ರಶೇಖರನ್ ಮತ್ತು ಆನಂದ್ ಮಹೀಂದ್ರ ಹಾಗೂ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನೂ ಭೇಟಿ ಮಾಡಿದ್ದರು. ಬಿಲ್ ಗೇಟ್ಸ್ ಮತ್ತು ರತನ್ ಟಾಟಾ ಇಬ್ಬರೂ ಸಾಮಾಜಿಕ ಕಾರ್ಯಗಳಿಗೆ ತಮ್ಮ ಸಂಸ್ಥೆಯ ಆದಾಯದ ಒಂದಷ್ಟು ಭಾಗವನ್ನು ಉದಾರವಾಗಿ ದೇಣಿಗೆ ನೀಡುವ ಉದ್ಯಮಿಗಳಾಗಿದ್ದಾರೆ. ಆರೋಗ್ಯ, ತಪಾಸಣೆ, ನ್ಯೂಟ್ರಿಶನ್ ಮೊದಲಾದ ಕ್ಷೇತ್ರದ ಬಗ್ಗೆ ಇಬ್ಬರೂ ದಿಗ್ಗಜರೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಬಿಲ್ ಗೇಟ್ಸ್ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಮತ್ತು ಪತ್ನಿ ಅಂಜಲಿ ತೆಂಡೂಲ್ಕರ್ ಅವರನ್ನೂ ಭೇಟಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಗೇಟ್ಸ್ ಜೊತೆಗಿನ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳ ಆರೋಗ್ಯಪಾಲನೆ ಸೇರಿದಂತೆ ಲೋಕೋಪಯೋಗಿ ಕಾರ್ಯಗಳ ಬಗ್ಗೆ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು ಎಂದು ಸಚಿನ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
Recognising the Super Food of India and its POSHAN component..
When @BillGates gave tadka to Shree Ann Khichdi! pic.twitter.com/CYibFi01mi
— Smriti Z Irani (@smritiirani) March 2, 2023
ಇದೇ ಸಂದರ್ಭದಲ್ಲಿ ಭಾರತದ ಬಗ್ಗೆ ಬಿಲ್ ಗೇಟ್ಸ್ ಗುಣಗಾನ ಮಾಡಿದ್ದಾರೆ. ಹೋರಾಟದ ಮನೋಭಾವ ಮತ್ತು ಹೊಸತನಕ್ಕೆ ಭಾರತ ಅತ್ಯುತ್ತಮ ಉದಾಹರಣೆಯಾಗಿದೆ. ಅಲ್ಲದೆ ಭಾರತ ದೊಡ್ಡ ಸಮಸ್ಯೆಗಳನ್ನು ಎದುರಿಸಬಲ್ಲೆ, ಭವಿಷ್ಯದ ಬೆಳಕಾಗಬಲ್ಲೆ ಎಂದು ಈ ದೇಶ ತೋರಿಸಿಕೊಟ್ಟಿದೆ. ಪೋಲಿಯೋ ನಿರ್ಮೂಲನೆ, ಎಚ್ಐವಿ ಹರಡುವಿಕೆಯನ್ನು ತಡೆದಿದೆ, ಜೊತೆಗೆ ಶಿಶು ಮರಣ ಪ್ರಮಾಣ ಕಡಿಮೆ ಮಾಡಿದೆ. ಶೌಚ ಮತ್ತು ಹಣಕಾಸು ಸೇವೆಗಳನ್ನು ಬಲಯುತಗೊಳಿಸಿದೆ ಎಂದು ಬಿಲ್ ಗೇಟ್ಸ್ ಭಾರತವನ್ನು ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ