ಕೊಚ್ಚಿ (ಫೆಬ್ರವರಿ 18); ತಮಿಳುನಾಡು, ಪಶ್ಚಿಮ ಬಂಗಾಳದ ಜೊತೆಗೆ ಈ ವರ್ಷ ಕೇರಳದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ಸೇರಿದಂತೆ ದೇಶಾದ್ಯಂತ ಅನೇಕ ಯೋಜನೆಗಳ ಹಿಂದಿನ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮತ್ತು ಈ ಮೂಲಕ ಮೆಟ್ರೋಮ್ಯಾನ್ ಎಂದು ಖ್ಯಾತಿ ಪಡೆದಿದ್ದ ಇಂಜಿಯರ್ ಇ. ಶ್ರೀಧರನ್ ಭಾರತೀಯ ಜನತಾ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಗುರುವಾರ ಪ್ರಕಟಿಸಿದ್ದಾರೆ. ಫೆಬ್ರವರಿ 21 ರಿಂದ ನಡೆಯಲಿರುವ ಬಿಜೆಪಿಯ 'ವಿಜಯ ಯಾತ್ರೆ' ಸಂದರ್ಭದಲ್ಲಿ ಶ್ರೀಧರನ್ ಅವರನ್ನು ಔಪಚಾರಿಕವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಸೇರ್ಪಡೆಯನ್ನು ಖಚಿತಪಡಿಸಿರುವ ಇ. ಶ್ರೀಧರನ್, " ಪಕ್ಷ ಬಯಸಿದಲ್ಲಿ ಮುಂಬರುವ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗುತ್ತೇನೆ" ಎಂದು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿದ್ದಾರೆ.
ಈ ಕುರಿತು ಸಿಎನ್ಎನ್-ನ್ಯೂಸ್ 18 ಜೊತೆಗೆ ದೀರ್ಘವಾಗಿ ಮಾತನಾಡಿರುವ ಇ. ಶ್ರೀಧರನ್, "ನಾನು ಕಳೆದ 10 ವರ್ಷಗಳಿಂದ ಕೇರಳದಲ್ಲಿ ವಾಸಿಸುತ್ತಿದ್ದೇನೆ. ನಾನು ಯುಡಿಎಫ್ ಮತ್ತು ಎಲ್ಡಿಎಫ್ ಎರಡೂ ಸರ್ಕಾರಗಳನ್ನೂ ನೋಡಿದ್ದೇನೆ. ಈ ಎರಡೂ ಸರ್ಕಾರದ ಯಾವ ನಿಯಮಗಳು ರಾಜ್ಯಕ್ಕೆ ಯಾವುದೇ ಸ್ಪಷ್ಟ ಪ್ರಗತಿಯನ್ನು ತಂದಿಲ್ಲ ಎಂದು ನಾನು ಭಾವಿಸುತ್ತೇನೆ. ಕೈಗಾರಿಕೀಕರಣ ಮತ್ತು ಜನರಿಗೆ ಉದ್ಯೋಗಾವಕಾಶಗಳ ವಿಷಯದಲ್ಲಿ ಇವರು ಬಹಳಷ್ಟು ಹಿಂದುಳಿದಿದ್ದಾರೆ.
ಕಳೆದ 20 ವರ್ಷಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಉದ್ಯಮವೂ ಇಲ್ಲ. ಹೀಗಾಗಿ ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಕೇರಳ ರಾಜ್ಯದಲ್ಲಿ ಬಿಜೆಪಿಗೆ ಉತ್ತಮವಾದ ಅವಕಾಶ ಇದೆ. ಏಕೆಂದರೆ ಇದೇ ಪಕ್ಷವು ಕೇಂದ್ರ ಸರ್ಕಾರವನ್ನು ಆಳುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶ್ರೀಧರನ್ ಅವರಂತಹ ಅಪ್ರತಿಮ ವ್ಯಕ್ತಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದರಿಂದ ಪಕ್ಷಕ್ಕೂ ಚುನಾವಣೆಯಲ್ಲಿ ಲಾಭವಾಗಲಿದೆ ಎಂದು ಬಿಜೆಪಿಯ ರಾಜ್ಯ ಘಟಕ ಆಶಿಸಿದೆ.
ಇ. ಶ್ರೀಧರನ್ ಹಿನ್ನೆಲೆ:
ದೇಶದ ಅತಿದೊಡ್ಡ ಮೆಟ್ರೋ ಮತ್ತು ರೈಲ್ವೆ ಯೋಜನೆಗಳಿಗೆ ಗಣನೀಯ ಸೇವೆ ಸಲ್ಲಿಸಿರುವ ಇ. ಶ್ರೀಧರನ್ ಭಾರತದ "ಮೆಟ್ರೋ ಮ್ಯಾನ್" ಎಂದೇ ಜನಪ್ರಿಯರಾಗಿದ್ದಾರೆ. ಅವರು 2011 ರಲ್ಲಿ ದೆಹಲಿ ಮೆಟ್ರೊ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಜೈಪುರ, ಲಕ್ನೋ ಮತ್ತು ಕೊಚ್ಚಿಯಂತಹ ದೇಶದ ಇತರ ಮೆಟ್ರೋ ಯೋಜನೆಗಳಲ್ಲಿ ಇವರು ಎಂಜಿನಿಯರ್ ಆಗಿ ತೊಡಗಿಸಿಕೊಂಡಿದ್ದರು. ಅವರಿಗೆ 2001 ರಲ್ಲಿ ಪದ್ಮಶ್ರೀ ಮತ್ತು 2008 ರಲ್ಲಿ ಪದ್ಮವಿಭೂಷಣ ನೀಡಲಾಗಿತ್ತು.
ಇದನ್ನೂ ಓದಿ: ಗಾಳಿಯಿಂದ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದೆ...!; ಇಂಡೋನೇಷ್ಯಾ ಮಹಿಳೆಯ ಮಾತು
2019 ರ ಜೂನ್ 1 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಡೆಲ್ಲಿ ಟ್ರಾನ್ಸ್ಪೋರ್ಟ್ ಕಾರ್ಪೋರೇಷನ್ ಬಸ್ಗಳಲ್ಲಿ ಮತ್ತು ಡೆಲ್ಲಿ ಮೆಟ್ರೊದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಎಂದು ಘೋಷಿಸಿದ್ದರು. ಆ ಸಮಯದಲ್ಲಿ ವಿ. ಶ್ರೀಧರನ್ ಅದನ್ನು ವಿರೋಧಿಸಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಸುದ್ದಿಯಾಗಿದ್ದರು. ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದರೆ, ದೆಹಲಿ ಮೆಟ್ರೊ ಆರ್ಥಿಕ ದಿವಾಳಿತನ ಎದುರಿಸಬೇಕಾಗುತ್ತದೆ, ಅಷ್ಟೇ ಅಲ್ಲದೇ ದೇಶದ ಇತರ ಮೆಟ್ರೊಗಳ ಮೇಲೂ ಇದು ಪರಿಣಾಮ ಬೀರುತ್ತದೆ ಎಂಬ ಕಾರಣವನ್ನು ಪತ್ರದಲ್ಲಿ ಅವರು ಉಲ್ಲೇಖಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ