ಗುವಾಹಟಿ: ಚುನಾವಣಾ ಹೊಸ್ತಿಲಲ್ಲಿರುವ ಮೇಘಾಲಯ (Meghalaya Assembly Election) ಭಾರೀ ರಾಜಕೀಯ ಕಾದಾಟಗಳಿಗೆ ಸಾಕ್ಷಿಯಾಗಿದೆ. ಇದೇ ಫೆಬ್ರವರಿ 27ರಂದು ಮೇಘಾಲಯದ 60 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮಾರ್ಚ್ 2ರಂದು ಫಲಿತಾಂಶ ಬರಲಿದೆ. ಈ ಮಧ್ಯೆ ಮೇಘಾಲಯ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವರಿ (Ernest Mawrie) ನೀಡಿರುವ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷ ಈ ಹಿಂದಿನಿಂದಲೂ ಗೋಮಾಂಸ ತಿನ್ನೋದರ ವಿರುದ್ಧ ತನ್ನ ಅಜೆಂಡಾಗಳನ್ನು ತೋರ್ಪಡಿಸುತ್ತಾ ಬಂದಿತ್ತು. ಆದರೆ ಮೇಘಾಲಯದ ಬಿಜೆಪಿ ಅಧ್ಯಕ್ಷ ಗೋಮಾಂಸ ತಿನ್ನಲು (Beef Eating) ಯಾವುದೇ ಅಡ್ಡಿಯಿಲ್ಲ ಎಂದು ಹೇಳಿರೋದು ಕುತೂಹಲ ಮೂಡಿಸಿದೆ.
ಹೌದು.. ಚುನಾವಣೆ ಹಿನ್ನೆಲೆ ಬಿಸಿ ಬಿಸಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿರುವ ಮೇಘಾಲಯದಲ್ಲಿ ಅಲ್ಲಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವರಿ ‘ಬಿಜೆಪಿ ಪಕ್ಷದಲ್ಲಿ ಗೋಮಾಂಸ ತಿನ್ನೋದಕ್ಕೆ ಯಾವುದೇ ನಿರ್ಬಂಧಗಳಿಲ್ಲ, ಬಿಜೆಪಿ ಯಾವುದೇ ಜಾತಿ, ಧರ್ಮ ಅಥವಾ ನಂಬಿಕೆಯ ಬಗ್ಗೆ ಯೋಚನೆ ಮಾಡೋದಿಲ್ಲ’ ಎಂದು ಹೇಳಿದ್ದಾರೆ. ನಾವು ಏನು ಬೇಕಾದರೂ ತಿನ್ನಬಹುದು. ಯಾಕೆಂದರೆ ಅದು ನಮ್ಮ ಆಹಾರ ಪದ್ಧತಿ ಎಂದಿರುವ ಅರ್ನೆಸ್ಟ್ ಮಾವರಿ, ರಾಜಕೀಯ ಪಕ್ಷಗಳಿಗೆ ಅದರ ಬಗ್ಗೆ ಸಮಸ್ಯೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೇರಳ ಸರ್ಕಾರದ ‘ಬೀಫ್’ ಟ್ವೀಟ್ ರೀಟ್ವೀಟ್ ಮಾಡಿ ಸಚಿವ ಸಿ.ಟಿ ರವಿ ಎಡವಟ್ಟು: ನೆಟ್ಟಿಗರಿಂದ ತೀವ್ರ ತರಾಟೆ
ಗೋಮಾಂಸ ನಮ್ಮ ಸಂಸ್ಕೃತಿ ಮತ್ತು ಪದ್ಧತಿ ಆಗಿದೆ
ಮೇಘಾಲಯದಲ್ಲಿ ಎಲ್ಲರೂ ಗೋಮಾಂಸ ತಿನ್ನುತ್ತಾರೆ. ಗೋಮಾಂಸ ತಿನ್ನೋದಕ್ಕೆ ಮೇಘಾಲಯದಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂದಿರುವ ಬಿಜೆಪಿ ಅಧ್ಯಕ್ಷ ಅರ್ನೆಸ್ಟ್ ಮಾವರಿ, ಗೋಮಾಂಸ ತಿನ್ನೋದು ನಮ್ಮ ಸಂಸ್ಕೃತಿ ಮತ್ತು ಪದ್ಧತಿಯೂ ಹೌದು ಎಂದು ಹೇಳಿದ್ದಾರೆ. ಗೋಹತ್ಯೆ ವಿಚಾರದಲ್ಲಿ ಬಿಜೆಪಿ ನಿಲುವಿನ ಬಗ್ಗೆಯೂ ಮಾತನಾಡಿರುವ ಅರ್ನೆಸ್ಟ್ ಮಾವರಿ, ನಮ್ಮಲ್ಲಿ ಗೋಹತ್ಯೆ ನಿಷೇಧ ಮಾಡುವ ಯೋಚನೆಯೇ ಇಲ್ಲ. ನಾವು ನಮ್ಮದೇ ಆದ ಆಹಾರ ಪದ್ಧತಿಯನ್ನು ಅನುಸರಿಸುತ್ತೇವೆ. ನಮಗೆ ಗೋಹತ್ಯೆ ನಿಷೇಧದ ಬಗ್ಗೆ ಹೈಕಮಾಂಡ್ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳಿದರು.
ಗೋಮಾಂಸ ತಿಂದರೂ ಬಿಜೆಪಿಗೆ ಬರಬಹುದು
ಇನ್ನು ನಾನು ಕೂಡ ಗೋಮಾಂಸ ತಿನ್ನುತ್ತೇನೆ. ಅದು ನಮ್ಮ ಆಹಾರ ಪದ್ಧತಿ ಎಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವರಿ, ಗೋಮಾಂಸ ತಿನ್ನುವ ವಿಚಾರದಲ್ಲಿ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಯಾರೇ ಗೋಮಾಂಸ ತಿಂದರೂ ಕೂಡ ಬಿಜೆಪಿಗೆ ಬರಬಹುದು. ಅದರಿಂದ ಪಕ್ಷಕ್ಕೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vivek Agnihotri: ಬೀಫ್ ಬಗ್ಗೆ ರಣಬೀರ್ ಹೇಳಿಕೆ ಬೆನ್ನಲ್ಲೇ ವಿವೇಕ್ ಅಗ್ನಿಹೋತ್ರಿ ಮತ್ತೊಂದು ವಿಡಿಯೋ ವೈರಲ್!
ಬಿಜೆಪಿಗೆ ಕುಟುಕಿದ ಕಾಂಗ್ರೆಸ್
ಇನ್ನು ಗೋಮಾಂಸ ನಿಷೇಧ ವಿಚಾರದಲ್ಲಿ ಬಿಜೆಪಿಯನ್ನು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 2014ರ ನಂತರ ಗೋಮಾಂಸ ರಫ್ತಿನಲ್ಲಿ ಅತೀ ವೇಗವಾಗಿ ಭಾರತ ನಂಬರ್ 1 ಸ್ಥಾನಕ್ಕೆ ಏರಿದೆ. ಮೇಘಾಲಯದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಗೋಮಾಂಸ ಪ್ರಿಯ. ಕೇರಳದ ಬಿಜೆಪಿ ಘಟಕ ಜನರಿಗೆ ಉತ್ತಮ ಗೋಮಾಂಸ ಪೂರೈಕೆ ಮಾಡುವ ಭರವಸೆ ನೀಡಿದೆ. ಅತ್ತ ಗೋವಾದಲ್ಲಿ ಕೂಡ ಬಿಜೆಪಿ ಸರ್ಕಾರ ಜನರಿಗೆ ಉತ್ತಮ ಗೋಮಾಂಸ ನೀಡಲು ಶ್ರಮಿಸುತ್ತಿದೆ. ಇದರ ಬಗ್ಗೆ ಬಿಜೆಪಿಯ ಮೌನ ಏಕೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರಕ್ಕೆ ಜಾನುವಾರುಗಳ ಚರ್ಮಗಂಟು ರೋಗದ ನಿರ್ವಹಣೆಯಲ್ಲಿ ಆಸಕ್ತಿ ಇಲ್ಲ. ಯಾವೊಬ್ಬ ಬಿಜೆಪಿ ನಾಯಕನೂ ‘ಪುಣ್ಯಕೋಟಿ ದತ್ತು’ ಪಡೆದಿಲ್ಲ. ಇದುವರೆಗೂ ಯಾವ ಜಿಲ್ಲೆಯಲ್ಲೂ ಗೋಶಾಲೆ ಸ್ಥಾಪನೆಯಾಗಿಲ್ಲ. ಹೈನುಗಾರಿಕೆಗೆ ಯಾವುದೇ ಯೋಜನೆ ಇಲ್ಲ. ಗೋವಾದಂತೆ ಮೇಘಾಲಯದ ನಾಯಕರಿಗೂ ಗೋಮಾಂಸ ಕಳಿಸಲು ಬಿಜೆಪಿ ನಾಯಕರಿಗೆ ಈ ಬಗೆಯ ನಿರ್ಲಕ್ಷ್ಯವೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ