ನವ ದೆಹಲಿ (ಸೆಪ್ಟೆಂಬರ್ 12); "ಮುಂಬೈ ಮೇಲೆ ನಡೆದಿದ್ದ 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ದೇಶದ ಎಲ್ಲಾ ಮಾಧ್ಯಮಗಳೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದವು. ಅಲ್ಲದೆ, 'ದುರ್ಬಲ ಪ್ರಧಾನಿ' ಎಂದು ಹೀಯಾಳಿಸಲಾಗಿತ್ತು. ಆದರೆ, ಪುಲ್ವಾಮ ದಾಳಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಯಾವ ಮಾಧ್ಯಮಗಳು ಪ್ರಶ್ನಿಸಲಿಲ್ಲ. ಇನ್ನೂ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಸ್ಥಾಪಿಸಿದ ಎಲ್ಲವನ್ನೂ ಬಿಜೆಪಿಯವರು ಏಳು ವರ್ಷಗಳಲ್ಲಿ ಮಾರಾಟ ಮಾಡಿದ್ದಾರೆ. ಆದರೆ, ಮಾಧ್ಯಮಗಳು ಈ ಬಗ್ಗೆಯೂ ಚಕಾರ ಎತ್ತುವುದಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (ಎನ್ಎಸ್ಯುಐ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, "ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಕಟ್ಟಿ-ಬೆಳೆಸಿದ ಸಂಸ್ಥೆಗಳು-ಆಸ್ತಿಗಳನ್ನು ಬಿಜೆಪಿ ಸರ್ಕಾರ ಕೇವಲ 7 ವರ್ಷಗಳಲ್ಲಿ ಮಾರಾಟ ಮಾಡಿದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ದೇಶ ಕಟ್ಟುವತ್ತ ಗಮನ ಹರಿಸುತ್ತದೆ. ಆದರೆ, ಬಿಜೆಪಿ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ.
ನಮ್ಮ ಪಕ್ಷದ 70 ವರ್ಷಗಳ ಶ್ರಮವನ್ನು ಬಿಜೆಪಿಯವರು ಕೇವಲ ಏಳು ವರ್ಷಗಳಲ್ಲಿ ಮಾರಾಟ ಮಾಡಿದ್ದಾರೆ. ಮುಂಬೈ ದಾಳಿ ನಡೆದಾಗ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮಾಧ್ಯಮಗಳು ದುರ್ಬಲ ಪ್ರಧಾನಿ ಎಂದು ಕರೆದವು. ಆದರೆ, ಪುಲ್ವಾಮ ?ದಾಳಿಯ ಸಮಯದಲ್ಲಿ ಮಾಧ್ಯಮಗಳು ಏಕೆ ಪ್ರಶ್ನೆಗಳನ್ನು ಎತ್ತಲಿಲ್ಲ?"ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
"ಮುಂಬೈ ದಾಳಿಯಂತೆಯೇ ಹಲವು ಭಯೋತ್ಪಾದನೆ ಸಂಬಂಧಿತ ಘಟನೆಗಳು ಮೋದಿ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ನಡೆದಿವೆ. ಆದರೆ ಯುಪಿಎ ಅವಧಿಯಲ್ಲಿ ಮಾಧ್ಯಮಗಳು ಮಾಡಿದ್ದ ಕೆಲಸವನ್ನು ಈಗ ಮಾಡಲು ಮುಂದಾಗುತ್ತಿಲ್ಲ. ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿದೆ. ರೈತರ ಆಂದೋಲ ರಾಜಕೀಯವಲ್ಲದಿದ್ದರೂ ಸಹ ಮಾಧ್ಯಮಗಳು ವರದಿ ಮಾಡುತ್ತಿಲ್ಲ.
ಇದನ್ನೂ ಓದಿ: Arvind Kejriwal| ಎಎಪಿ ರಾಷ್ಟ್ರೀಯ ಸಂಚಾಲಕರಾಗಿ ಸತತ ಮೂರನೇ ಬಾರಿ ಆಯ್ಕೆಯಾದ ಅರವಿಂದ ಕೇಜ್ರಿವಾಲ್
ಹಲವಾರು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವರ್ಷದಿಂದ ರೈತರು ದೆಹಲಿ ಗಡಿ ಪ್ರದೇಶಗಳಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಶಾಸನವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಮಾಧ್ಯಮಗಳಿಗೆ ಇವು ಹೋರಾಟಗಳಂತೆಯೇ ಕಾಣದಿರುವುದು ವಿಪರ್ಯಾಸ" ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Shivasena| ಮುಂಬರುವ ಉತ್ತರಪ್ರದೇಶ-ಗೋವಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸಲಿದೆ; ಸಂಸದ ಸಂಜಯ್ ರಾವತ್
ಪ್ರಸ್ತುತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಬಿಜೆಪಿ ಸರ್ಕಾರ ರೈತರ ಮಾತನ್ನು ಕೇಳುತ್ತಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಬದಲಾಗಿ ಪ್ರತಿಪಕ್ಷಗಳ ಧ್ವನಿ ಅಡಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಮಾರಂಭದಲ್ಲಿ ಭಾಗಿಯಾಗಿದ್ದ ರಾಜ್ಯಸಭಾ ಸಂಸದ ದೀಪೇಂದರ್ ಸಿಂಗ್ ಹೂಡಾ ಸಹ ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ