ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಉಪ ಮುಖ್ಯಮಂತ್ರಿ (Delhi Deputy Chief Minister), ಆಮ್ ಆದ್ಮಿ ಪಾರ್ಟಿಯ (AAP) ಹಿರಿಯ ನಾಯಕರೂ ಆಗಿರುವ ಮನೀಶ್ ಸಿಸೋಡಿಯಾ (Manish Sisodia) ಅರೆಸ್ಟ್ ಆಗಿದ್ದಾರೆ. ದೆಹಲಿಯಲ್ಲಿ ಜಾರಿಗೆ ತರಲಾಗಿದ್ದ ಮದ್ಯದ ನೀತಿಯಲ್ಲಿ (liquor policy) ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ (CBI) ತನಿಖೆ ಕೈಗೊಂಡಿತ್ತು. ಬೆಳಗ್ಗೆಯಿಂದ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಬರೋಬ್ಬರಿ ಎಂಟು ಗಂಟೆಗಳ ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ನಾಳೆ ಅವರನ್ನು ನ್ಯಾಯಾಲಯದ (Court) ಮುಂದೆ ಹಾಜರುಪಡಿಸಲಾಗುವುದು ಅಂತ ಸಿಬಿಐ ಮೂಲಗಳು ತಿಳಿಸಿವೆ. ಅಂದ ಹಾಗೆ ಸತ್ಯೇಂದ್ರ ಜೈನ್ (Satyendra Jain) ನಂತರ ಬಂಧನಕ್ಕೊಳಗಾದ ಎರಡನೇ ದೆಹಲಿ ಸಚಿವರು (Delhi Minister) ಮನೀಶ್ ಸಿಸೋಡಿಯಾ ಆಗಿದ್ದಾರೆ.
ಸತತ ವಿಚಾರಣೆ ಬಳಿಕ ಬಂಧನ
ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಸತತ ವಿಚಾರಣೆಗೆ ಒಳಪಡಿಸಿದ್ದರು. ಸಿಬಿಐನ ಭ್ರಷ್ಟಾಚಾರ ನಿಗ್ರಹ ವಿಭಾಗದ ಅಧಿಕಾರಿಗಳು ಅಬಕಾರಿ ನೀತಿಯ ವಿವಿಧ ಅಂಶಗಳು, ಎಫ್ಐಆರ್ನಲ್ಲಿರುವ ದಿನೇಶ್ ಅರೋರಾ ಮತ್ತು ಇತರ ಆರೋಪಿಗಳೊಂದಿಗಿನ ಸಂಬಂಧ ಮತ್ತು ಅನೇಕ ಫೋನ್ ಮೆಸೇಜ್ ವಿನಿಮಯದ ವಿವರಗಳ ಬಗ್ಗೆ ಸಚಿವರನ್ನು ಪ್ರಶ್ನಿಸಿದ್ದರು. ಆದರೆ ಸಿಸೋಡಿಯಾ ನೀಡಿದ ಪ್ರತಿಕ್ರಿಯೆಗಳಿಂದ ಸಿಬಿಐ ತನಿಖಾಧಿಕಾರಿಗಳು ತೃಪ್ತರಾಗಿಲ್ಲ. ಹೀಗಾಗಿ ಅವರು ತನಿಖೆಯಲ್ಲಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದರು.
मनीष बेक़सूर हैं। उनकी गिरफ़्तारी गंदी राजनीति है। मनीष की गिरफ़्तारी से लोगों में बहुत रोष है। लोग सब देख रहे हैं। लोगों को सब समझ आ रहा है। लोग इसका जवाब देंगे।
इस से हमारे हौसले और बढ़ेंगे। हमारा संघर्ष और मज़बूत होगा।
— Arvind Kejriwal (@ArvindKejriwal) February 26, 2023
2021ರಲ್ಲಿ ದೆಹಲಿ ಸರ್ಕಾರ ಮದ್ಯ ನೀತಿಯನ್ನು ರೂಪಿಸುವಲ್ಲಿ ಮದ್ಯ ಕಂಪನಿಗಳು ಭಾಗಿಯಾಗಿವೆ ಎಂದು ಸಿಬಿಐ ವಾದಿಸಿತ್ತು. ಸೌತ್ ಗ್ರೂಪ್ ಎಂದು ಕರೆಯಲ್ಪಡುವ ಮದ್ಯದ ಲಾಬಿಯಿಂದ 100 ಕೋಟಿ ರೂಪಾಯಿಗಳಷ್ಟು ಕಿಕ್ಬ್ಯಾಕ್ಗಳನ್ನು ಪಾವತಿಸಲಾಗಿದೆ. ಈ ನೀತಿಯು ಅವರಿಗೆ ಶೇಕಡಾ 12 ರಷ್ಟು ಲಾಭಕ್ಕೆ ಕಾರಣವಾಗುತ್ತಿತ್ತು, ಅದರಲ್ಲಿ 6 ಶೇಕಡಾವನ್ನು ಮಧ್ಯವರ್ತಿಗಳ ಮೂಲಕ ಸಾರ್ವಜನಿಕ ಸೇವಕರಿಗೆ ರವಾನಿಸಲಾಗಿದೆ. ಕಿಕ್ಬ್ಯಾಕ್ಗಳನ್ನು ಲಾಂಡರಿಂಗ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯವೂ ತನಿಖೆ ಆರಂಭಿಸಿತ್ತು.
ಇದನ್ನೂ ಓದಿ: Bharat Jodo Yatra 2: 'ಭಾರತ್ ಜೋಡೋ 2'ಗೆ ಸಜ್ಜಾದ ರಾಹುಲ್ ಗಾಂಧಿ, ಈ ಬಾರಿ ಯಾತ್ರೆ ಎಲ್ಲಿಂದ ಎಲ್ಲಿವರೆಗೆ?
ಅರವಿಂದ್ ಕೇಜ್ರಿವಾಲ್ ಟ್ವೀಟ್
ಇನ್ನು ಮನೀಶ್ ಸಿಸೋಡಿಯಾ ಬಂಧನ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ನಾವೆಲ್ಲರೂ ನಿಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಾರೆ. "ದೇಶಕ್ಕಾಗಿ, ಸಮಾಜಕ್ಕಾಗಿ ಜೈಲಿಗೆ ಹೋದಾಗ ಅದು ಶಾಪವಲ್ಲ, ಮಹಿಮೆ. ನೀವು ಬೇಗ ಜೈಲಿನಿಂದ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಕ್ಕಳು, ಪೋಷಕರು ಮತ್ತು ದೆಹಲಿಯಲ್ಲಿ ನಾವೆಲ್ಲರೂ ನಿಮಗಾಗಿ ಕಾಯುತ್ತೇವೆ." ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
“ಮನೀಶ್ ಸಿಸೋಡಿಯಾ ನಿರಪರಾಧಿ”
ಮನೀಶ್ ಸಿಸೋಡಿಯಾ ನಿರಪರಾಧಿ ಅಂತ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಅವರ ಬಂಧನ ಕೊಳಕು ರಾಜಕೀಯ. ಮನೀಶ್ ಬಂಧನದಿಂದ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಲ್ಲರೂ ನೋಡುತ್ತಿದ್ದಾರೆ. ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಜನ ಸ್ಪಂದಿಸುತ್ತಾರೆ. ಇದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ" ಅಂತ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
“ನನ್ನ ಬಗ್ಗೆ ವಿಷಾದ ಬೇಡ, ಹೆಮ್ಮೆ ಪಡಿ”
ತಮ್ಮ ಮೇಲಿನ ಆರೋಪವನ್ನು ನಕಲಿ ಅಂತ ಮನೀಶ್ ಸಿಸೋಡಿಯಾ ಕರೆದಿದ್ದರು. ನಾನು ಏಳೆಂಟು ತಿಂಗಳ ಜೈಲು ಶಿಕ್ಷೆಗೆ ಸಿದ್ಧ ಎಂದು ಈ ಹಿಂದೆ ಹೇಳಿದ್ದರು. "ನಾನು 7-8 ತಿಂಗಳು ಜೈಲಿನಲ್ಲಿದ್ದರೂ, ನನ್ನ ಬಗ್ಗೆ ವಿಷಾದಿಸಬೇಡಿ, ಹೆಮ್ಮೆಪಡಿ" ಎಂದು ಟ್ವೀಟ್ ಮಾಡಿದ್ದರು.
ದೆಹಲಿಯಾದ್ಯಂತ ಬಿಗಿ ಪೊಲೀಸ್ ಭದ್ರತೆ
ಇನ್ನು ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ ನಂತರ ಸಿಬಿಐ ಪ್ರಧಾನ ಕಚೇರಿಯ ಹೊರಗೆ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ನಿಯೋಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ