ವಿದ್ಯೆ ಎಂಬುವುದು ಶ್ರದ್ಧೆಯಿಂದ ಶ್ರಮಪಡುವವರಿಗೆ ಮಾತ್ರವೇ ಲಭ್ಯವಾಗುವ ಸಂಪತ್ತು ಎನ್ನುವುದನ್ನು ಕಾಯಕ ಜೀವಿ ಚಮ್ಮಾರನ ಪುತ್ರ ಸಾಧಿಸಿ ತೋರಿಸಿದ್ದಾರೆ. ಬೀರೇಂದ್ರ ಕುಮಾರ್ ಎಂಬ ಬಡ ಯುವಕ ಬಿಹಾರ ನಾಗರಿಕ ಸೇವಾ ಆಯೋಗ (ಬಿಪಿಎಸ್ಸಿ) ಪರೀಕ್ಷೆಯಲ್ಲಿ 2,232 ನೇ ಸ್ಥಾನವನ್ನು ಪಡೆದು ಕೆಲವೇ ದಿನಗಳಲ್ಲಿ ಬ್ಲಾಕ್ ಸರಬರಾಜು ಅಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ. 27 ವರ್ಷದ ಬೀರೇಂದ್ರ ಕುಮಾರ್ ಅವರ ತಂದೆ ಭಿಖರಿ ರಾಮ್ ಅವರು ವೃತ್ತಿಯಲ್ಲಿ ಚಮ್ಮಾರರಾಗಿದ್ದವರು 2012ರಲ್ಲಿ ನಿಧನರಾದರು. ಜನವರಿಯಲ್ಲಿ ಬೀರೇಂದ್ರ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ. ಈ ಸಂದರ್ಭದಲ್ಲಿ ಬೀರೇಂದ್ರ ಅವರ ಅಣ್ಣ ಜಿತೇಂದ್ರ ಕುಮಾರ್ ಮನೆಯ ಜವಾಬ್ದಾರಿ ವಹಿಸಿಕೊಂಡರು. ತಂದೆಯವರ ಚಮ್ಮಾರ ವೃತ್ತಿಯನ್ನೇ ಮುಂದುವರಿಸಿದರು. ಶೂ ತಯಾರಿಕೆ ಮತ್ತು ರಿಪೇರಿ ಕೆಲಸದಿಂದಲೇ ಬರುವ ಆದಾಯವನ್ನು ಬಳಸಿಕೊಂಡು ಬೀರೇಂದ್ರ ಸಾಧನೆ ಮಾಡಿದ್ದಾರೆ.
ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿ, ಔರಂಗಾಬಾದ್ನ ದೌಡ್ ನಗರ ಕಾಲೇಜಿನಿಂದ ಪದವಿ ಪಡೆದರು. ರಾಜೀವ್ ಎಂಬ ಹಿರಿಯರಿಂದ ಬಿಪಿಎಸ್ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಸ್ಫೂರ್ತಿ ಪಡೆದುಕೊಂಡರು ಬೀರೇಂದ್ರ. ತಮ್ಮ ಕುಟುಂಬದಲ್ಲೇ ಪ್ರತಿಷ್ಠಿತ ಸರ್ಕಾರಿ ಹುದ್ದೆಗೆ ಅರ್ಹತೆ ಪಡೆದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆ ಇದೆ.
ಅಪ್ಪನ ಅಗಲಿಕೆಯ ನಂತರ ಅಣ್ಣನ ನೆರವಿನಿಂದ ಶಿಕ್ಷಣ ಮುಂದುವರೆಯಿತು. ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಾಗ ಕುಮಾರ್ ತಮ್ಮ ಛಲವನ್ನು ಸಾಧಿಸಲು ಮೊಟ್ಟೆ ಮಾರಾಟ ಮಾಡಲು ಆರಂಭಿಸಿದರು. 2012ರಲ್ಲಿ ಮೊಟ್ಟೆ ಮಾರಾಟ ಆರಂಭಿಸಿ 5 ವರ್ಷಗಳ ಕಾಲ ಮುಂದುವರೆಸಿದರು. ಒಂದು ಕಡೆ ಮೊಟ್ಟೆ ಮಾರುವುದು, ಇನ್ನೊಂದು ಕಡೆ ನಿರಂತರ ಓದುವುದು ಹೀಗೆ ಸಾಗಿತ್ತು ಕನಸ್ಸು ತುಂಬಿದ ಕಂಗಳ ಬದುಕು. ಈ ಸಮಯದಲ್ಲಿ ಅಣ್ಣನ ವ್ಯಾಪಾರ ಅಭಿವೃದ್ಧಿಯಾಗಲು ಆರಂಭವಾಯಿತು. ಬೀರೇಂದ್ರ ಅವರು ಸಂಪೂರ್ಣವಾಗಿ ಓದಿನ ಕಡೆಗೆ ಮಗ್ನರಾದರು.
ಇದನ್ನೂ ಓದಿ: Baba Ka Dhaba: ವೈರಲ್ ಆಗಿದ್ದ ವೃದ್ಧನ ಹೋಟೆಲ್ ಬಂದ್: ಮತ್ತೆ ಬೀದಿಬದಿ ಡಾಬಾಗೆ ಮರಳಿದ ದಂಪತಿ
ಬೀರೇಂದ್ರ ಅವರು ರಾಜೀವ್ ಅವರ ಮಾರ್ಗದರ್ಶನ ಮತ್ತು ಅಂತರ್ಜಾಲದ ನೆರವಿನಿಂದ ಮೊದಲ ಪ್ರಯತ್ನದಲ್ಲೇ ಸಫಲರಾದರು. 'ನನ್ನ ಪರಿಸ್ಥಿತಿ ಮತ್ತು ಶಿಕ್ಷಣದಿಂದ ಬಿಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದು ಕಷ್ಟ ಎಂದುಕೊಂಡಿದ್ದೆ. ಆದರೆ ಅದನ್ನು ಮೀರಿ ಬೆಳೆಯಲು ಸಾಧ್ಯವಾಯಿತು. ಇದನ್ನು ತಮ್ಮ ತಾಯಿ ನೋಡಲಿಲ್ಲವೆಂದು' ಬೇಸರ ವ್ಯಕ್ತಿಪಡಿಸುತ್ತಾರೆ ಬೀರೇಂದ್ರ.
ಬೀರೇಂದ್ರ ಅವರ ತಾಯಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು. ಮಗನ ಮೇಲೆ ಅವರಿಗೆ ಭರವಸೆ ಇತ್ತು ಎನ್ನುವುದನ್ನು ಹಂಚಿಕೊಂಡಿದ್ದಾರೆ. ಸದ್ಯ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಆ ಮೂಲಕ ತಮ್ಮ ಕುಟುಂಬದ ಮುಂದಿನ ಪೀಳಿಗೆಗೆ ದಾರಿದೀಪವಾಗಿದ್ದಾರೆ.
ಮೂಲಭೂತ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹೆಣಗುತ್ತಿದ್ದ ಕುಟುಂಬದಲ್ಲಿ ಈಗ ಆಶಾಭಾವ ಮೂಡಿದೆ. ಮುಂದಿನ ಪೀಳಿಗೆಗೆ ಉಜ್ವಲ ಭವಿಷ್ಯಕ್ಕೆ ಬೀರೇಂದ್ರ ಕುಮಾರ್ ನಾಂದಿ ಹಾಡಿದ್ದಾರೆ. ಬರುವ ಹೊಸ ಪೀಳಿಗೆಗೆ ಉತ್ತಮ ಉದ್ಯೋಗ ಅವಕಾಶಗಳು ದೊರಕಲಿ ಎಂದು ಅವರು ಆಶಿಸುತ್ತಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ