ಲಕ್ನೋ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Cricketer Suresh Raina) ಅವರ ಸಂಬಂಧಿಕರನ್ನು ಬರ್ಬರವಾಗಿ ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ದರೋಡೆಕೋರ ರಶೀದ್ನನ್ನು (Rashid) ಉತ್ತರ ಪ್ರದೇಶ ಪೊಲೀಸರು (UP police) ಎನ್ಕೌಂಟರ್ (Encounter) ಮಾಡಿದ್ದಾರೆ. ಉತ್ತರ ಪ್ರದೇಶದ ಮುಜಾಫರ್ ನಗರ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕಳ್ಳರಲ್ಲಿ ಈತನೂ ಒಬ್ಬನಾಗಿದ್ದ. ಮೂರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ. ಆದರೆ ಶನಿವಾರ ಪೊಲೀಸರ (Police) ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದ ಎನ್ಕೌಂಟರ್ನಲ್ಲಿ ರಶೀದ್ ಸಾವನ್ನಪ್ಪಿದ್ದಾನೆ.
ಮಹಡಿಯ ಮೇಲೆ ಮಲಗಿದ್ದ ವೇಳೆ ಹತ್ಯೆ
ಆಗಸ್ಟ್ 19, 2020 ರಂದು ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ಥರಾಯಲ್ ಗ್ರಾಮದಲ್ಲಿ ಸುರೇಶ್ ರೈನಾ ಅವರ ಚಿಕ್ಕಪ್ಪ- ಚಿಕ್ಕಮ್ಮ ಸೇರಿದಂತೆ ಮೂವರ ಹತ್ಯೆ ನಡೆದಿತ್ತು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ರೈನಾ ಅವರ ಚಿಕ್ಕಪ್ಪ ಅಶೋಕ್ ಕುಮಾರ್ ಕುಟುಂಬ ಸಮೇತ ಮನೆ ಮಹಡಿಯ ಮೇಲೆ ಮಲಗಿದ್ದ ವೇಳೆ ಸುಮಾರು 12 ಮಂದಿ ದರೋಡೆಕೋರರು ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದರು.
ಈ ವೇಳೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದರು. ತೀವ್ರ ಗಾಯಗೊಂಡ ಅಶೋಕ್ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಆಶಾರಾಣಿ ಹಾಗೂ ಪುತ್ರ ಕೌಶಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದರು. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ: Crime News: ಸುಳ್ಳು ಹೇಳಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಮದುವೆಯಾದ ಶಿಕ್ಷಕನ ಬಂಧನ
ಆರೋಪಿ ಪತ್ತೆಗೆ 50 ಸಾವಿರ ಬಹುಮಾನ ಘೋಷಣೆ
ಸುರೇಶ್ ರೈನಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆ ವೇಳೆ ಪಂಜಾಬ್ ಸಿಎಂ ಆಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದರು. ನಂತರ ಆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಹಸ್ತಾಂತರಿಸಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಸಿಕ್ಕಿಬಿದ್ದರೂ, ಪ್ರಮುಖ ಆರೋಪಿ ರಶೀದ್ ಮಾತ್ರ ಪತ್ತೆಯಾಗಿರಲಿಲ್ಲ. ಆದ್ದರಿಂದ ಅವನನ್ನು ಮೋಸ್ಟ್ ವಾಂಟೆಡ್ ಎಂದು ಘೋಷಿಸಲಾಗಿತ್ತು. ಆತನ ಪತ್ತೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಈ ವಿಷಯ ತಿಳಿದ ರಶೀದ್ ಪೊಲೀಸರಿಗೆ ಸಿಗದೆ ಅಲೆದಾಡುತ್ತಿದ್ದ. ಶನಿವಾರ ಸಿಕ್ಕಿಬಿದ್ದಿದ್ದು, ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ಎಸ್ಎಸ್ಪಿ ಸಂಜೀವ್ ಸುಮನ್ ಹೇಳಿದ್ದಾರೆ.
ಆರೋಪಿಗಳ ಆಗಮನದ ಮಾಹಿತಿ ತಿಳಿದಿದ್ದ ಪೊಲೀಸ್
ಈ ಬವಾರಿಯಾ ಗ್ಯಾಂಗ್ನ ಕೆಲವು ಸದಸ್ಯರು ಕೆಲವು ಘಟನೆಗಳನ್ನು ನಡೆಸಲು ಈ ಪ್ರದೇಶಕ್ಕೆ ಬರುತ್ತಿದ್ದಾರೆ ಎಂದು ಶಹಪುರ ಪೊಲೀಸ್ ಠಾಣೆಗೆ ಮಾಹಿತಿದಾರರಿಂದ ಮಾಹಿತಿ ಬಂದಿದೆ. ಈ ಕಾರಣದಿಂದಾಗಿ ಶಹಪುರ ಪೊಲೀಸರು ಎಸ್ಒಜಿ ಮುಜಾಫರ್ನಗರ ಪ್ರದೇಶದಲ್ಲಿ ತಪಾಸಣೆ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಅದೇ ಸಮಯದಲ್ಲಿ ಸಹದುದಿ ರಸ್ತೆಯಲ್ಲಿ ಇಬ್ಬರು ಬೈಕ್ನಲ್ಲಿ ಬರುತ್ತಿದ್ದುದನ್ನು ಕಂಡ ಪೊಲೀಸರು ಅವರನ್ನು ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಓಡಿಹೋಗಲು ಯತ್ನಿಸಿದ್ದು, ಬಳಿಕ ಪೊಲೀಸರು ಕಿಡಿಗೇಡಿಗಳ ಮೇಲೆ ಗುಂಡು ಹಾರಿಸಿದ್ದಾರೆ.
ಆತ್ಮರಕ್ಷಣೆಗಾಗಿ ಎನ್ಕೌಂಟರ್
ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದಾಗ, ಮೊರಾದಾಬಾದ್ನ ದುಷ್ಕರ್ಮಿ ರಶೀದ್ ಅಲಿಯಾಸ್ ಸಿಪಾಹಿಯಾ ಅಲಿಯಾಸ್ ಚಲ್ತಾ ಫ್ರಟಾ ಪೊಲೀಸರ ಗುಂಡಿನಿಂದ ಗಾಯಗೊಂಡಿದ್ದಾನೆ. ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಸತ್ತಿದ್ದಾನೆ. ಈ ಎನ್ಕೌಂಟರ್ನಲ್ಲಿ ಪೊಲೀಸ್ ಠಾಣಾಧಿಕಾರಿ ಶಹಪುರ್ ಬಬ್ಲು ಕುಮಾರ್ ಎಂಬುವವರೂ ಕೂಡ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ರಶೀದ್ನ ಸಹಾಯಕ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಗಿದ್ದಾನೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಕಳ್ಳರ ಗ್ಯಾಂಗ್ನ ಬೈಕ್, ರಿವಾಲ್ವರ್, ಅಕ್ರಮ ಪಿಸ್ತೂಲ್ ಮತ್ತು ಕಾಟ್ರಿಡ್ಜ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ