ಮುಂಬೈ (Mumbai) ಸಮೀಪದ ಪಾಲ್ಘರ್ನಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷರಾದ ಸೈರಸ್ ಮಿಸ್ತ್ರಿ ಅವರು ಸಾವನ್ನಪ್ಪಿದ್ದರು (Death). ಈ ವಿಷಯವನ್ನು ಕೇಳಿದ ನಂತರ ಅವರ ಸ್ನೇಹಿತರು, ಆಪ್ತರು ಮತ್ತು ಸಂಬಂಧಿಕರು ತುಂಬಾನೇ ಆಘಾತಗೊಂಡಿದ್ದರು. ಇವರಷ್ಟೇ ಅಲ್ಲದೆ ಬಹುತೇಕ ಎಲ್ಲಾ ಕ್ಷೇತ್ರದಲ್ಲಿರುವ ಪ್ರಭಾವಿ ವ್ಯಕ್ತಿಗಳೊಂದಿಗೆ ಸೈರಸ್ (Cyrus) ಒಳ್ಳೆಯ ಸ್ನೇಹವನ್ನು ಗಳಿಸಿದ್ದರು. 54 ವರ್ಷದ ಸೈರಸ್ ಮಿಸ್ತ್ರಿ ಅವರು ಡೇರಿಯಸ್ ಪಂಡೋಲೆ ಮತ್ತು ಅವರ ಪತ್ನಿ ಅನಾಹಿತಾ ಪಂಡೋಲೆ (Anahita Pandole) ಮತ್ತು ಸಹೋದರನಾದ ಜಹಾಂಗೀರ್ ಪಂಡೋಲೆ ಅವರೊಂದಿಗೆ ಮರ್ಸಿಡಿಸ್ ಜಿಎಲ್ಸಿ ಸ್ಪೋರ್ಟ್ಸ್ ಯುಟಿಲಿಟಿ ಕಾರಿನಲ್ಲಿ (Car) ಒಟ್ಟಿಗೆ ಪ್ರಯಾಣಿಸುತ್ತಿದ್ದರು.
ಅತಿ ವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಹಿಂದಿನ ಸೀಟಿನಲ್ಲಿದ್ದ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಲೆ ಇಬ್ಬರು ಸಾವನ್ನಪ್ಪಿದ್ದರು.
ಮುಂಬೈನಲ್ಲಿ ನಡೆದ ಸೈರಸ್ ಮಿಸ್ತ್ರಿ ಯವರ ಅಂತ್ಯಕ್ರಿಯೆ
ಸೈರಸ್ ಮಿಸ್ತ್ರಿ ಅವರ ಅಂತ್ಯಕ್ರಿಯೆ ನಿನ್ನೆ ಎಂದರೆ ಮಂಗಳವಾರದಂದು ಮುಂಬೈನಲ್ಲಿ ನಡೆಯಿತು. ಭಾರತದ ಅತ್ಯಂತ ಪ್ರಸಿದ್ಧ ವಾಣಿಜ್ಯ ಕುಟುಂಬಗಳಲ್ಲೊಂದಾದ ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ನ ವಂಶಸ್ಥರಾದ ಸೈರಸ್ ಅವರ ಸಾವು ಇಡೀ ದೇಶದ ಕಾರ್ಪೊರೇಟ್ ಜಗತ್ತಿಗೆ ಆಘಾತವನ್ನುಂಟು ಮಾಡಿದೆ. ಸೈರಸ್ ಅವರಿಗೆ ತುಂಬಾನೇ ಆಪ್ತರಾದ ಒಬ್ಬರು ಸೈರಸ್ ಅವರನ್ನು ಕಳೆದುಕೊಂಡು ತುಂಬಾನೇ ನೋವಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದಾರೆ ನೋಡಿ.
ಇದನ್ನೂ ಓದಿ: Dr Anahita Pandole: ಸೈರಸ್ ಮಿಸ್ತ್ರಿ ಕಾರು ಚಲಾಯಿಸುತ್ತಿದ್ದ ಡಾ.ಅನಾಹಿತಾ ಪಂಡೋಲೆ ಯಾರು?
ಸಂಸದೆ ಸುಪ್ರಿಯಾ ಸುಳೆಯಿಂದ ಹೃದಯಸ್ಪರ್ಶಿ ಪೋಸ್ಟ್
ಮಹಾರಾಷ್ಟ್ರ ರಾಜ್ಯದ ಸಂಸದೆ ಮತ್ತು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಇಂದು ಸೈರಸ್ ಅವರ ಜೊತೆಗೆ ಹಿಂದೊಮ್ಮೆ ತೆಗೆಸಿಕೊಂಡ ಹೃದಯಸ್ಪರ್ಶಿ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ. ಇದಕ್ಕೆ ಒಂದು ಪುಟ್ಟ ಹೃದಯಸ್ಪರ್ಶಿ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. "ನಿಮ್ಮನ್ನು ನಾವು ಗೌರವಿಸುತ್ತೇವೆ.. ನೀವು ನಮ್ಮನ್ನು ಅಗಲಿರುವುದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನಾವು ನಿಮ್ಮನ್ನು ಎಂದೆಂದಿಗೂ ಮಿಸ್ ಮಾಡಿಕೊಳ್ಳುತ್ತೇವೆ. ಸೈರಸ್.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಅಂತ ಅವರು ತಮ್ಮ ಪೋಸ್ಟ್ ನಲ್ಲಿ ಶೀರ್ಷಿಕೆಯನ್ನು ಬರೆದಿದ್ದಾರೆ.
View this post on Instagram
ಮಿಸ್ತ್ರಿ ಅವರೊಂದಿಗಿನ ಸುಮಾರು ಮೂರು ದಶಕಗಳ ಸ್ನೇಹವನ್ನು ನೆನಪಿಸಿಕೊಂಡ ಸುಳೆ ಅವರು, ಮಿಸ್ತ್ರಿ ಅವರು ಅಷ್ಟೊಂದು ದೊಡ್ಡ ಹುದ್ದೆಯಲ್ಲಿದ್ದರೂ ಸಹ ಅವರು ಯಾವಾಗಲೂ ತುಂಬಾನೇ ಸರಳವಾಗಿರುತ್ತಿದ್ದರು. ಎಂದರೆ ತುಂಬಾನೇ ಲೋ ಪ್ರೊಫೈಲ್ ಅನ್ನು ಇಟ್ಟುಕೊಂಡಿರುವ ಮತ್ತು ಸದಾ ಮಹಾರಾಷ್ಟ್ರದ ಆಹಾರವನ್ನೇ ಇಷ್ಟಪಡುತ್ತಿದ್ದರು ಎಂದು ಹೇಳಿದರು. ಮಿಸ್ತ್ರಿಯನ್ನು "ತನ್ನ ಅವಳಿ" ಎಂದು ಕರೆದಿರುವ ಸುಳೆ ಅವರು ತನ್ನ ಕುಟುಂಬವು ಸೆಪ್ಟೆಂಬರ್ 12 ರಂದು ಲಂಡನ್ ನಲ್ಲಿ ಸೈರಸ್ ಮತ್ತು ಅವರ ಪತ್ನಿಯನ್ನು ಭೇಟಿಯಾಗಲಿದ್ದರು ಎಂದು ಹೇಳಿದರು. "ನಮ್ಮ ಕಣ್ಮುಂದೆ ನೀವು ಇರದೇ ಇರಬಹುದು, ಆದರೆ ನಮ್ಮ ಹೃದಯದಲ್ಲಿ ನೀವು ಸದಾ ಇರುತ್ತೀರಿ” ಎಂದು ಒಂದು ದಿನದ ಹಿಂದೆ ಸುಳೆ ಅವರು ಪೋಸ್ಟ್ ಮಾಡಿದ್ದರು.
ಮಹಾರಾಷ್ಟ್ರದ ಆಹಾರಪದ್ದತಿಯನ್ನೇ ಇಷ್ಟಪಡ್ತಿದ್ರಂತೆ ಮಿಸ್ತ್ರಿ
ಮಿಸ್ತ್ರಿ ಅವರ ಆಹಾರ ಪದ್ಧತಿಯ ಬಗ್ಗೆ ಮಾತನಾಡಿದ ಸುಳೆ ಅವರು “ಮಿಸ್ತ್ರಿ ಅವರು ಮಹಾರಾಷ್ಟ್ರದಲ್ಲಿ ತಯಾರಿಸಲಾಗುತ್ತಿದ್ದ ‘ಠೇಚಾ’ ವನ್ನು ತುಂಬಾನೇ ಇಷ್ಟ ಪಡುತ್ತಿದ್ದರು. ಇಷ್ಟೇ ಅಲ್ಲದೆ ಸೈರಸ್ ಗೆ ಈ ಪ್ರಾನ್ ಕರ್ರಿ ಎಂದರೆ ತುಂಬಾನೇ ಇಷ್ಟವಾಗಿತ್ತು” ಎಂದು ಅವರು ಹೇಳಿದರು.
ಇದನ್ನೂ ಓದಿ: Cyrus Mistry: ಸಾವಿನ ಕುರಿತು ಮತ್ತಷ್ಟು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸರು
ಸೈರಸ್ ಮಿಸ್ತ್ರಿ ಅವರ ಹಿರಿಯ ಸಹೋದರ ಶಪೂರ್ ಮಿಸ್ತ್ರಿ, ಮಾವ ಮತ್ತು ಹಿರಿಯ ವಕೀಲ ಇಕ್ಬಾಲ್ ಚಾಗ್ಲಾ, ಕೈಗಾರಿಕೋದ್ಯಮಿಗಳಾದ ಅನಿಲ್ ಅಂಬಾನಿ, ಅಜಿತ್ ಗುಲಾಬ್ಚಂದ್, ದೀಪಕ್ ಪಾರೇಖ್ ಮತ್ತು ವಿಶಾಲ್ ಕಂಪಾನಿ, ಉದ್ಯಮಿ ರೋನಿ ಸ್ಕ್ರೂವಾಲಾ, ವಾಸ್ತುಶಿಲ್ಪಿ ಹಫೀಜ್ ಕಾಂಟ್ರಾಕ್ಟರ್, ಸುಪ್ರಿಯಾ ಸುಳೆ, ಕಾಂಗ್ರೆಸ್ ನ ಮಾಜಿ ಸಂಸದ ಮಿಲಿಂದ್ ದಿಯೋರಾ ಮುಂತಾದವರು ಮಿಸ್ತ್ರಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮಿಸ್ತ್ರಿ ಅವರು ಪತ್ನಿ ರೋಹಿಕಾ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ